ಆ್ಯಪ್ನಗರ

ವಿಶೇಷಚೇತನ ಮಗುವಿಗೆ ವಿಮಾನ ಪ್ರಯಾಣಕ್ಕೆ ನಿರಾಕರಣೆ: ಇಂಡಿಗೋ ಏರ್‌ಲೈನ್ಸ್‌ಗೆ 5 ಲಕ್ಷ ರೂ ದಂಡ

DGCA Imposes Fine for IndiGo: ಮೇ 7ರಂದು ರಾಂಚಿಯಿಂದ ಹೈದರಾಬಾದ್‌ಗೆ ತೆರಳಿದ ವಿಮಾನದಲ್ಲಿ ವಿಶೇಷಚೇತನ ಮಗುವನ್ನು ಕರೆದೊಯ್ಯಲು ನಿರಾಕರಿಸಿದ್ದ ಇಂಡಿಯೋ ವಿಮಾನಯಾನ ಸಂಸ್ಥೆಗೆ ಡಿಜಿಸಿಎ 5 ಲಕ್ಷ ರೂ ದಂಡ ವಿಧಿಸಿದೆ.

Edited byಅಮಿತ್ ಎಂ.ಎಸ್ | Vijaya Karnataka Web 28 May 2022, 3:39 pm

ಹೈಲೈಟ್ಸ್‌:

  • ಇಂಡಿಗೋ ಏರ್‌ಲೈನ್ಸ್‌ಗೆ 5 ಲಕ್ಷ ರೂ ದಂಡ ವಿಧಿಸಿದ ಇಂಡಿಗೋ
  • ವಿಶೇಷಚೇತನ ಮಗುವಿಗೆ ವಿಮಾನ ಏರಲು ಅವಕಾಶ ನಿರಾಕರಣೆ
  • ಮೇ 7ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ಘಟನೆ
  • ತನಿಖೆ ನಡೆಸಿದ್ದ ಡಿಜಿಸಿಎಯಿಂದ ಇಂಡಿಯೋ ಸಂಸ್ಥೆಗೆ ದಂಡ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web indigo airline fined rs 5 lakh by dgca for not allowing boy with special needs to on board
ವಿಶೇಷಚೇತನ ಮಗುವಿಗೆ ವಿಮಾನ ಪ್ರಯಾಣಕ್ಕೆ ನಿರಾಕರಣೆ: ಇಂಡಿಗೋ ಏರ್‌ಲೈನ್ಸ್‌ಗೆ 5 ಲಕ್ಷ ರೂ ದಂಡ
ಹೊಸದಿಲ್ಲಿ: ವಿಶೇಷಚೇತನ ಬಾಲಕನಿಗೆ ವಿಮಾನ ಏರಲು ಅವಕಾಶ ನಿರಾಕರಿಸಿದ್ದ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಗೆ 5 ಲಕ್ಷ ರೂ ದಂಡ ವಿಧಿಸಲಾಗಿದೆ. ಬಾಲಕನಿಗೆ ರಾಂಚಿಯಿಂದ ವಿಮಾನ ಹತ್ತಲು ಅನುಮತಿ ನೀಡದ ಇಂಡಿಗೋ (IndiGo Airlines) ಸಂಸ್ಥೆಯ ನಡೆ ಭಾರಿ ವಿವಾದ ಸೃಷ್ಟಿಸಿತ್ತು.
ದೇಶದ ಅತ್ಯುನ್ನತ ವಾಯು ಸಂಚಾರ ನಿಯಂತ್ರಕ ಪ್ರಾಧಿಕಾರವಾಗಿರುವ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ಈ ಸಂಬಂಧ ತನಿಖೆ ನಡೆಸಿತ್ತು. ಇಂಡಿಗೋ ಸಂಸ್ಥೆಯ ಸಿಬ್ಬಂದಿ ವಿಶೇಷಚೇತನ ಮಗುವನ್ನು ನಡೆಸಿಕೊಂಡ ರೀತಿ ಅಸಮರ್ಪಕವಾಗಿದೆ ಮತ್ತು ಅದು ಕೊನೆಗೆ ಸನ್ನಿವೇಶವನ್ನು ಉದ್ವಿಗ್ನಗೊಳಿಸಿದೆ ಎಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಡಿಜಿಸಿಎ ತಿಳಿಸಿದೆ.
ಸಂಬಳ ವಿಚಾರದಲ್ಲಿ ಅಶ್ಲೀಲ ಪದಗಳಿಂದ ನಿಂದನೆ!: ಸಿಕ್ಕಿಬಿದ್ದ 7 ಇಂಡಿಗೋ ಪೈಲಟ್‌ಗಳು

"ಸನ್ನಿವೇಶವನ್ನು ಸಹಾನುಭೂತಿಯಿಂದ ನಿಭಾಯಿಸಿದ್ದರೆ, ಉದ್ವೇಗವನ್ನು ತಗ್ಗಿಸುತ್ತಿತ್ತು. ಮಗುವನ್ನು ಶಾಂತಗೊಳಿಸುತ್ತಿತ್ತು ಮತ್ತು ಪ್ರಯಾಣಿಕರಿಗೆ ವಿಮಾನ ಏರುವುದಕ್ಕೆ ಅನುಮತಿ ನಿರಾಕರಿಸುವಂತಹ ಅತಿರೇಕದ ನಿರ್ಧಾರ ತೆಗೆದುಕೊಳ್ಳುವಂತಹ ಸ್ಥಿತಿ ಉಂಟಾಗುತ್ತಿರಲಿಲ್ಲ" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

"ವಿಶೇಷ ಪರಿಸ್ಥಿತಿಗಳಲ್ಲಿ ಅಸಾಧಾರಣವಾದ ಪ್ರತಿಕ್ರಿಯೆ ಅಗತ್ಯವಿರುತ್ತದೆ. ಆದರೆ ವಿಮಾನಯಾನ ಸಿಬ್ಬಂದಿ ಸಂದರ್ಭಕ್ಕೆ ಅನುಗುಣವಾಗಿ ಸೂಕ್ತವಾಗಿ ಸ್ಪಂದಿಸಿಲ್ಲ. ಹಾಗೆಯೇ, ಈ ಪ್ರಕ್ರಿಯೆ ವೇಳೆ ನಾಗರಿಕ ವಿಮಾನಯಾನ ನಿಯಮಗಳ ಅಗತ್ಯಗಳನ್ನು ಪಾಲಿಸುವಲ್ಲಿ ಲೋಪಗಳನ್ನು ಎಸಗಿದೆ" ಎಂದು ಡಿಜಿಸಿಎ ಹೇಳಿದೆ.
ಎಣ್ಣೆ ಮತ್ತಲ್ಲಿ ವಿಮಾನ ಚಾಲನೆ : ಒಂಬತ್ತು ಪೈಲಟ್‌ ಗಳು ಅಮಾನತು

ಈ ಲೋಪ ಎಸಗುವ ಮೂಲಕ ವಿಶೇಷಚೇತನ ಮಗುವನ್ನು ಅಮಾನವೀಯವಾಗಿ ನಡೆಸಿಕೊಂಡ ಕಾರಣಕ್ಕೆ ವಿಮಾನಯಾನ ಸಂಸ್ಥೆಗೆ 5 ಲಕ್ಷ ರೂ ದಂಡ ವಿಧಿಸಿರುವುದಾಗಿ ತಿಳಿಸಿದೆ. ಅಂತಹ ಸನ್ನಿವೇಶಗಳಲ್ಲಿ ವಿಮಾನಯಾನ ಸಂಸ್ಥೆಯು ತನ್ನ ನಿಯಮಾವಳಿಗಳನ್ನು ಮರು ಪರಿಶೀಲಿಸಬೇಕು ಮತ್ತು ಅಗತ್ಯ ಬದಲಾವಣೆಗಳನ್ನು ತರುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದೆ.
'ಮತ್ತೆ ತರಬೇತಿ ಪಡೆದು ಬನ್ನಿ': 90 ಸ್ಪೈಸ್‌ಜೆಟ್ ಪೈಲಟ್‌ಗಳನ್ನು ನಿರ್ಬಂಧಿಸಿದ ಡಿಜಿಸಿಎ

ಮೇ 7ರಂದು ವಿಶೇಷಚೇತನ ಮಗುವಿಗೆ ರಾಂಚಿ ವಿಮಾನ ನಿಲ್ದಾಣದಿಂದ ವಿಮಾನ ಹತ್ತಲು ಇಂಡಿಗೋ ವ್ಯವಸ್ಥಾಪಕರು ಬಿಟ್ಟಿರಲಿಲ್ಲ. ಈ ಘಟನೆಯನ್ನು ಪ್ರತ್ಯಕ್ಷದರ್ಶಿಗಳು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ವಿಶೇಷಚೇತನ ಮಗುವನ್ನು ವಿಮಾನದಲ್ಲಿ ಕರೆದೊಯ್ಯುವುದು ಅಪಾಯಕಾರಿ ಎಂದು ಇಂಡಿಗೋ ಹೇಳಿದ್ದಾಗಿ ಆರೋಪಿಸಲಾಗಿತ್ತು. ಅಲ್ಲದೆ, ಆ ಮಗು ಮದ್ಯದ ಅಮಲಿನಲ್ಲಿರುವ ಪ್ರಯಾಣಿಕರಂತೆ, ತನ್ನ ಪರವಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ವ್ಯವಸ್ಥಾಪಕ ಹೋಲಿಕೆ ಮಾಡಿದ್ದರು. ಮಗು ಪ್ರಯಾಣಕ್ಕೆ ಅನರ್ಹ ಎಂದು ಅವರು ತೀರ್ಮಾನಿಸಿದ್ದರು. ಕೊನೆಗೆ ಮಗು ಮತ್ತು ಅದರ ಪೋಷಕರನ್ನು ಬಿಟ್ಟು ವಿಮಾನವು ಹೈದರಾಬಾದ್‌ಗೆ ತೆರಳಿತ್ತು. ಇದರ ವಿಡಿಯೋ ವೈರಲ್ ಆದ ಬಳಿಕ ಇಂಡಿಗೋ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅದರ ಆಧಾರದಲ್ಲಿ ಡಿಜಿಸಿಎ ತನಿಖೆಗೆ ಆದೇಶಿಸಿತ್ತು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ