ಹೊಸದಿಲ್ಲಿ: ದೇಶದ ಎಲ್ಲ 132 ಕೋಟಿ ಜನಸಂಖ್ಯೆಯ ಮೇಲೆ ಪರಿಣಾಮ ಬೀರಲಿರುವ, ಭಾರತೀಯ ನ್ಯಾಯಾಂಗ ಇತಿಹಾಸದ ಮೈಲುಗಲ್ಲೆಂದು ಹೇಳಲಾದ ಐತಿಹಾಸಿಕ ತೀರ್ಪನ್ನು ನೀಡಿರುವ ಸರ್ವೋಚ್ಛ ನ್ಯಾಯಾಲಯ, ಖಾಸಗಿತನದ ಹಕ್ಕನ್ನು ಸಂವಿಧಾನದಡಿ ಪ್ರತಿಯೊಬ್ಬರಿಗೂ ನೀಡಲಾದ ಮೂಲಭೂತ ಹಕ್ಕು ಎಂದು ಘೋಷಿಸಿದೆ.
'ಖಾಸಗಿತನ ಮಾನವ ಘನತೆಯ ಸಾಂವಿಧಾನಿಕ ಮೂಲಾಂಶ' ಎಂದು ಗುರುವಾರದ ಮಹತ್ವದ ತೀರ್ಪಿನಲ್ಲಿ ಹೇಳಿರುವ ಸುಪ್ರೀಂಕೋರ್ಟ್, ಖಾಸಗಿತನದ ಹಕ್ಕನ್ನು ಸಂವಿಧಾನದ 21ನೇ ವಿಧಿಯಡಿ ಬರುವ ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಸಹಜ ಭಾಗವಾಗಿ ರಕ್ಷಿಸಬೇಕು ಮತ್ತು ಸಂವಿಧಾನದ ಮೂರನೇ ಭಾಗದಲ್ಲಿ ಖಾತ್ರಿಪಡಿಸಿದ ಸ್ವಾತಂತ್ರ್ಯಗಳ ಭಾಗವಾಗಿ ಸಂರಕ್ಷಿಸಬೇಕು ಎಂದಿದೆ.
ಸಂಪೂರ್ಣವಲ್ಲ: ಇದೇ ವೇಳೆ ಕೋರ್ಟ್ ಇನ್ನೊಂದು ಅಂಶವನ್ನು ಸ್ಪಷ್ಟಪಡಿಸಿದೆ. ಖಾಸಗಿತನದ ಹಕ್ಕು ಇತರ ಹಕ್ಕುಗಳಂತೆ ಪರಿಪೂರ್ಣವೇನಲ್ಲ. ಆದರೆ, ಅದರ ಮೇಲಿನ ಯಾವುದೇ ಅತಿಕ್ರಮ ನಿಗದಿತ ಮಿತಿಯನ್ನು ಮೀರಬಾರದು ಎಂದಿದೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಖಾಸಗಿತನದ ಹಕ್ಕು ಸಂವಿಧಾನದ ಭಾಗವಲ್ಲ ಎಂಬರ್ಥದಲ್ಲಿ 1950 ಮತ್ತು 1962ರಲ್ಲಿ ಎಂ.ಪಿ. ಶರ್ಮ ಮತ್ತು ಖರಕ್ ಸಿಂಗ್ ಅವರು ನೀಡಿದ ಎರಡು ಅತಿ ಪ್ರಮುಖ ತೀರ್ಪುಗಳನ್ನು ಅನೂರ್ಜಿತಗೊಳಿಸಿತು.
ಖಾಸಗಿತನದ ಹಕ್ಕು ಸಂವಿಧಾನದಡಿ ಮೂಲಭೂತ ಹಕ್ಕಲ್ಲ ಎಂಬ ಕೇಂದ್ರ ಸರಕಾರದ ವಾದವನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಆದರೆ, ಆಧುನಿಕ ಯುಗದಲ್ಲಿ ಮಾಹಿತಿ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ದಾರಿಗಳನ್ನು ಕಂಡುಕೊಳ್ಳುವಂತೆ ಸೂಚಿಸಿದೆ.
ಆಧಾರ್ಗೆ ಆಸರೆಯ ಬೆಳಕು?
ಆಧಾರ್ ಕಡ್ಡಾಯದ ಮೂಲಕ ನಾಗರಿಕ ಖಾಸಗಿ ಮಾಹಿತಿಗಳನ್ನು ಬೇಕಾಬಿಟ್ಟಿ ಹಂಚಲಾಗುತ್ತಿದೆ. ಖಾಸಗಿತನಕ್ಕೆ ಅಪಾಯವಿದೆ ಎಂಬ ನೆಲೆಯಲ್ಲಿ ಹುಟ್ಟಿದ ಮೂಲ ವಿವಾದದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತೀರ್ಪು ಆಧಾರ್ ಕಾರ್ಡ್ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಚರ್ಚೆ ಜೋರಾಗಿದೆ.
ತೀರ್ಪಿನಲ್ಲಿ ಆಧಾರ್ನ್ನು ಉಲ್ಲೇಖಿಸದೆ ಹೋದರೂ, ಆಧುನಿಕ ಯುಗದಲ್ಲಿ ಮಾಹಿತಿಗಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸೂಚನೆ ನೀಡಿದೆ. ''ಸರಕಾರದ ಕಾನೂನಾತ್ಮಕ ಅಗತ್ಯತೆ ಮತ್ತು ಜನರ ವೈಯಕ್ತಿಕ ಹಿತಾಸಕ್ತಿಗಳ ನಡುವೆ ಅತ್ಯಂತ ಸೂಕ್ಷ್ಮ ಮತ್ತು ಜಾಗರೂಕ ಸಮತೋಲನವನ್ನು ಕಾಯ್ದುಕೊಳ್ಳುವ ಒಂದು ವ್ಯವಸ್ಥೆಯನ್ನು ರೂಪಿಸಬೇಕು,'' ಎಂದು ತೀರ್ಪಿನಲ್ಲಿ ಹೇಳಿರುವುದು ಆಧಾರ್ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಇರುವ ಅವಕಾಶ ನೀಡಿದಂತೆ ಭಾಸವಾಗುತ್ತಿದೆ.
ಆದರೆ, ಆಧಾರ್ನ್ನು ಸರ್ವ ಸೇವೆಗಳಿಗೆ ಕಡ್ಡಾಯ ಮಾಡುತ್ತಿರುವ ಕೇಂದ್ರದ ಕ್ರಮವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಪ್ರತ್ಯೇಕ ಪಂಚ ಪೀಠ ನಡೆಸುತ್ತಿದ್ದು, ಅದು ಅಂತಿಮ ತೀರ್ಪು ನೀಡಲಿದೆ.
ಸಂವಿಧಾನದ ಮೂರನೇ ಭಾಗದಲ್ಲಿದೆ ಖಾಸಗಿ ಹಕ್ಕು
ಖಾಸಗಿತನಕ್ಕೆ ಮೂಲಭೂತ ಹಕ್ಕಿನ ಮಾನ್ಯತೆ ಇದೆಯೇ ಎಂಬ ಬಹುದೊಡ್ಡ ಪ್ರಶ್ನೆಗೆ ಸುಪ್ರೀಂಕೋರ್ಟ್ ಸ್ಪಷ್ಟ ಉತ್ತರ ನೀಡಿದ್ದು, ಇಂತಹುದೇ ಹಕ್ಕುಗಳ ಉಲ್ಲೇಖವಿರುವ ಸಂವಿಧಾನ ಮೂರನೇ ಭಾಗದಲ್ಲಿ ಮೂಲಭೂತ ಹಕ್ಕಿಗೂ ಮಾನ್ಯತೆ ಇದೆ ಎಂದು ಹೇಳಿದೆ.
ತೀರ್ಪು ನೀಡಿದ ನ್ಯಾಯಮೂರ್ತಿಗಳು
ಸಿಜೆಐ ಜೆ.ಎಸ್. ಖೇಹರ್
ಜಸ್ಟಿಸ್ ಡಿವೈ ಚಂದ್ರಚೂಡ್
ಜಸ್ಟಿಸ್ ಆರ್.ಕೆ. ಅಗರ್ವಾಲ್
ಜಸ್ಟಿಸ್ ಎಸ್.ಎ. ನಜೀರ್
ಜಸ್ಟಿಸ್ ಜೆ. ಚೇಲಮೇಶ್ವರ್
ಜಸ್ಟಿಸ್ ಎಸ್.ಎ. ಬಾಬ್ಡೇ
ಜಸ್ಟಿಸ್ ಅಭಯ ಮನೋಹರ್ ಸಪ್ರೆ
ಜಸ್ಟಿಸ್ ರೋಹಿನ್ಟನ್ ಫಾಲಿ ನಾರಿಮನ್
ಜಸ್ಟಿಸ್ ಸಂಜಯ್ ಕಿಶನ್ ಕೌಲ್
547 ಪುಟಗಳ ತೀರ್ಪು
ಬೆಳಗ್ಗೆ 10.35ಕ್ಕೆ ಪ್ರಕಟ
ಹಿಂದಿನ 2 ತೀರ್ಪುಗಳು ಅನೂರ್ಜಿತ
ಖಾಸಗಿತನದ ಹಕ್ಕಿಗೆ ಸಂವಿಧಾನದ ರಕ್ಷಣೆ ಇಲ್ಲ ಎಂದು 1952ರಲ್ಲಿ ನ್ಯಾಯಮೂರ್ತಿ ಎಂ.ಪಿ. ಶರ್ಮಾ ನೀಡಿದ ತೀರ್ಪು ಮತ್ತು 1962ರಲ್ಲಿ ಖರಕ್ ಸಿಂಗ್ ನೀಡಿದ ತೀರ್ಪುಗಳು ಅನೂರ್ಜಿತಗೊಂಡವು.
ಸಂವಿಧಾನಕ್ಕೆ ಮಾಡಿದ ನಾಲ್ಕನೇ ತಿದ್ದುಪಡಿಯಲ್ಲಿ ಇಂಥ ಯಾವುದೇ ಪ್ರಸ್ತಾವನೆಗಳು ಇಲ್ಲದೆ ಇರುವುದರಿಂದ ಸಂವಿಧಾನ 20(3)ನೇ ವಿಧಿಯ ಪ್ರಸ್ತಾವನೆಗಳಿಗೆ ಖಾಸಗಿತನದ ಹಕ್ಕುಗಳ ಜತೆ ಸಂಬಂಧ ಕಲ್ಪಿಸಲಾಗುವುದಿಲ್ಲ ಎಂದು ಎಂ.ಪಿ. ಶರ್ಮ ಅವರು ಹೇಳಿದ್ದರು. ಆದರೆ, 21 ಮತ್ತು 19ನೇ ವಿಧಿಗಳನ್ನು ಒಳಗೊಂಡಿರುವ ಸಂವಿಧಾನದ ಮೂರನೇ ಭಾಗದಲ್ಲಿ ಖಾತ್ರಿಪಡಿಸಲಾಗಿರುವ ಹಕ್ಕುಗಳಲ್ಲಿ ಒದಗಿಸಿರುವ ಮಾನ್ಯತೆಯನ್ನು ಉಲ್ಲೇಖಿಸಿಲ್ಲ ಎಂದು ಈಗಿನ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ
1962ರ ಖರಕ್ ಸಿಂಗ್ ತೀರ್ಪಿನ ಎರಡನೇ ಭಾಗದಲ್ಲಿ ಖಾಸಗಿ ಹಕ್ಕಿಗಿರುವ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿಯಲಾಗಿದೆಯಾದರೂ ಮೊದಲ ಭಾಗದಲ್ಲಿ ವ್ಯತಿರಿಕ್ತ ಅಂಶಗಳಿವೆ ಎಂದು ತೀರ್ಪು ಹೇಳಿದೆ.