ಆ್ಯಪ್ನಗರ

ನಾಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಎಲ್ಲೆಡೆ ಭರದ ಸಿದ್ಧತೆ

ಐದನೆಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಾಳೆ (ಜೂ.21) ನಡೆಯಲಿದ್ದು, ದೇಶಾದ್ಯಂತ ಭರದ ಸಿದ್ಧತೆಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಪ್ರಧಾನ ಕಾರ್ಯಕ್ರಮ ಈ ಬಾರಿ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆಯಲಿದೆ. ಕರ್ನಾಟಕದಲ್ಲಿ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಲಿದ್ದು, ಸಿದ್ಧತೆ ಪೂರ್ಣಗೊಂಡಿದೆ.

Vijaya Karnataka Web 20 Jun 2019, 10:24 am
ಹೊಸದಿಲ್ಲಿ: ನಾಳೆ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಿದ್ಧತೆ ಪೂರ್ಣಪ್ರಮಾಣದಲ್ಲಿ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುವ ಪ್ರಧಾನ ಕಾರ್ಯಕ್ರಮವನ್ನು ರಾಂಚಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಹಲವು ದೇಶಗಳ ಗಣ್ಯ ಅತಿಥಿಗಳು, ಯೋಗ ಸಂಘಟನೆಗಳು ಮತ್ತು ಯೋಗ ಗುರುಗಳು ಸೇರಿದಂತೆ 30 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ.
Vijaya Karnataka Web International Yoga Day- PM Modi


2014ರ ಡಿಸೆಂಬರ್‌ 11ರಂದು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದು ಆಚರಿಸುವುದಾಗಿ ಘೋಷಿಸಿತು. ಆ ಮೂಲಕ ಭಾರತದ ಯೋಗಕ್ಕೆ ಅಧಿಕೃತವಾಗಿಯೇ ಜಾಗತಿಕ ಮಾನ್ಯತೆಯ ಮುದ್ರೆ ದೊರೆಯಿತು.

ರಾಜಧಾನಿ ದಿಲ್ಲಿಯಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಿದ್ಧತೆ ನಡೆದಿದೆ. ಪ್ರಮುಖ ಕಾರ್ಯಕ್ರಮ ರಾಜಪಥದಲ್ಲಿ ನಡೆಯಲಿದೆ. ರೋಗ ತಡೆಗೆ ಯೋಗ ಅತ್ಯುಪಯುಕ್ತ ಸಾಧನವಾಗಿದೆ ಎಂದು ದಿಲ್ಲಿ ಮೆಡಿಕಲ್ ಕೌನ್ಸಿಲ್‌ ರಿಜಿಸ್ಟ್ರಾರ್‌ ಹಾಗೂ ದಿಲ್ಲಿ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಡಾ. ಗಿರೀಶ್ ತ್ಯಾಗಿ ಹೇಳಿದರು.

ಯೋಗ ಕಾರ್ಯಕ್ರಮಗಳ ಆಯೋಜನೆಯ ಜತೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಯೋಗ ಗುರುಗಳು ಮತ್ತು ಯೋಗ ವಿದ್ಯಾರ್ಥಿಗಳಿಗೂ ಉಪಯುಕ್ತವಾಗಿದೆ ಎಂದು ವಿಶ್ವಭಾರತಿ ಯೋಗ ಸಂಸ್ಥಾನದ ಪ್ರೇಮ್ ಭಾಟಿಯಾ ಹೇಳಿದರು.

ಜಾರ್ಖಂಡ್‌ನ ರಾಂಚಿಯ ಪ್ರಭಾತ್ ತಾರಾ ಮೈದಾನದಲ್ಲಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, 28 ಸಾವಿರ ಮಂದಿ ಯೋಗ ಪ್ರದರ್ಶನ ನೀಡಲಿದ್ದಾರೆ. ಪ್ರಧಾನ ಕಾರ್ಯಕ್ರಮ ನಡೆಯುವ ಸ್ಥಳ 7 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಅದನ್ನು 47 ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ಯೋಗದಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ವಿಶೇಷ ಗಮನ ಹರಿಸಲಾಗಿದೆ. ಪರಿಸರ ಕಾಳಜಿ ದೃಷ್ಟಿಯಿಂದ ಈ ಬಾರಿ ರಬ್ಬರ್‌ ಮ್ಯಾಟ್ ಬದಲಾಗಿ ಖಾದಿ ಯೋಗ ಮ್ಯಾಟ್‌ಗಳನ್ನು ಬಳಸಲಾಗುತ್ತಿದೆ. ''ಯೋಗ ಫಾರ್ ಹಾರ್ಟ್‌ (ಹೃದಯಕ್ಕಾಗಿ ಯೋಗ) ಎಂಬುದು ಈ ವರ್ಷದ ಯೋಗ ದಿನಾಚರಣೆಯ ಘೋಷವಾಕ್ಯವಾಗಿದೆ.

ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನೌಕಾಪಡೆಯ ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಮತ್ತು ಭಾರತೀಯ ಸೇನೆಯ ಮೂರೂ ಪಡೆಗಳ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಕುಟುಂಬ ವರ್ಗದವರು, ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಪ್ರದೇಶದಲ್ಲಿ ಆಯುಷ್ ಇಲಾಖೆ 'ಯೋಗಾಭ್ಯಾಸ್‌ ಘರ್‌ ಕೇ ಪಾಸ್' (ಮನೆಯ ಬಳಿಯೇ ಯೋಗ) ಎಂಬ ಘೋಷವಾಕ್ಯದಡಿ ಈ ವರ್ಷದ ಯೋಗ ದಿನಾಚರಣೆ ಆಯೋಜಿಸುತ್ತಿದೆ. ರಾಜಭವನವೂ ಸೇರಿದಂತೆ ರಾಜ್ಯದ ಹಲವೆಡೆ ಯೋಗ ದಿನಾಚರಣೆ ನಡೆಸಲಾಗುತ್ತಿದೆ. ರಾಜಭವನದಲ್ಲಿ ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಕಾರ್ಯಕ್ರಮಗಳಲ್ಲಿ ಬರ್ಕತುಲ್ಲಾ ಯುನಿವರ್ಸಿಟಿಯ ವಿದ್ಯಾರ್ಥಿಗಳು ಮತ್ತು ಎಲ್ಲಾ ಸಿಬ್ಬಂದಿ ವರ್ಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ರಾಜಭವನ ಕ್ಯಾಂಪಸ್ ನಿವಾಸಿಗಳು ಭಾಗವಹಿಸಲಿದ್ದಾರೆ.

'ಮನೆಯ ಬಳಿಯೇ ಯೋಗ'ಕ್ಕಾಗಿ ಯೋಗ ತರಬೇತಿ ಪಡೆದ ಸ್ವಯಂಸೇವಕರನ್ನು ತರಬೇತುದಾರರಾಗಿ ಪಾಲ್ಗೊಳ್ಳಲು ಆಯುಷ್ ಇಲಾಖೆ ಆಹ್ವಾನಿಸಿದೆ. ಜನತೆ ತಮಗೆ ಸಮೀಪದ ಆಸ್ಪತ್ರೆಗಳು, ಕಾಲೇಜು ಮತ್ತು ಇತರ ಪ್ರದೇಶಗಳಲ್ಲಿ ಆಯುಷ್ ಇಲಾಖೆ ಆಯೋಜಿಸಿದ ಯೋಗ ದಿನಾಚರಣೆಯಲ್ಲಿ ನಾಗರಿಕರು ಪಾಲ್ಗೊಳ್ಳುವಂತೆ ಇಲಾಖೆ ಕರೆ ನೀಡಿದೆ.

ಹಿಮಾಚಲ ಪ್ರದೇಶದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಶಿಮ್ಲಾದ ರಿಡ್ಜ್ ಮೈದಾನದಲ್ಲಿ ನಡೆಯಲಿದೆ. ಶಾಲೆ-ಕಾಲೇಜುಗಳು ಸೇರಿದಂತೆ ಎಲ್ಲೆಡೆ ಯೋಗ ದಿನಾಚರಣೆ ಯಶಸ್ವಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾಜ್ಯಪಾಲ ಆಚಾರ್ಯ ದೇವವ್ರತ ಮತ್ತು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರೂ ರಿಡ್ಜ್‌ ಮೈದಾನದಲ್ಲಿ ಬೆಳಗ್ಗೆ 6 ಗಂಟೆಗೆ ನಡೆಯುವ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದಿವ್ಯಾಂಗ ಮಕ್ಕಳ ಯೋಗ ಪ್ರದರ್ಶನ ವಿಶೇಷ ಆಕರ್ಷಣೆಯಾಗಿರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ