ಆ್ಯಪ್ನಗರ

ಐರ್ಲೆಂಡ್‌: ಗರ್ಭಪಾತ ಕಾನೂನುಬದ್ಧ

ಗರ್ಭಪಾತಕ್ಕೆ ನಿರಾಕರಿಸಿದ್ದರಿಂದ ಮೃತಪಟ್ಟ ಕರ್ನಾಟಕ ಮೂಲದ ದಂತ ವೈದ್ಯೆ ಸವಿತಾ ಹಾಲಪ್ಪನವರ್‌ ಸಾವಿನ ಪ್ರಕರಣದ ಬೆನ್ನಲ್ಲೇ ಶುರುವಾದ ಜನಾಂದೋಲನ ಸರಕಾರ ಈ ಸುಧಾರಣೆ ಕೈಗೊಳ್ಳುವಂತೆ ಮಾಡಿದೆ.

Vijaya Karnataka 15 Dec 2018, 5:00 am
ಐತಿಹಾಸಿಕ ವಿಧೇಯಕ ಅಂಗೀಕಾರ | ಸವಿತಾ ಹಾಲಪ್ಪನವರ್‌ ಸಾವಿನ ಪ್ರಕರಣಕ್ಕೆ ನ್ಯಾಯ
Vijaya Karnataka Web savitha


ಏಜೆನ್ಸೀಸ್‌ ಲಂಡನ್‌

ಕ್ರಿಶ್ಚಿಯನ್‌ ಕ್ಯಾಥೋಲಿಕ್‌ ಪಂಥದವರೇ ಹೆಚ್ಚಿರುವ ಐರ್ಲೆಂಡ್‌ ಇದೇ ಮೊದಲ ಬಾರಿಗೆ ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಮಹತ್ವದ ವಿಧೇಯಕವನ್ನು ಅಂಗೀಕರಿಸಿ, ಐತಿಹಾಸಿಕ ಸುಧಾರಣೆಗೆ ಸಾಕ್ಷಿಯಾಗಿದೆ. ಗರ್ಭಪಾತಕ್ಕೆ ನಿರಾಕರಿಸಿದ್ದರಿಂದ ಮೃತಪಟ್ಟ ಕರ್ನಾಟಕ ಮೂಲದ ದಂತ ವೈದ್ಯೆ ಸವಿತಾ ಹಾಲಪ್ಪನವರ್‌ ಸಾವಿನ ಪ್ರಕರಣದ ಬೆನ್ನಲ್ಲೇ ಶುರುವಾದ ಜನಾಂದೋಲನ ಸರಕಾರ ಈ ಸುಧಾರಣೆ ಕೈಗೊಳ್ಳುವಂತೆ ಮಾಡಿದೆ.

ಕ್ಯಾಥೋಲಿಕ್‌ ಪಂಥದವರಿಗೆ ಗರ್ಭಪಾತ ಒಂದು ಮಹಾಪಾಪ. ಈ ಹಿನ್ನೆಲೆಯಲ್ಲಿ ಐರ್ಲೆಂಡ್‌ನಲ್ಲಿ ಗರ್ಭಪಾತಕ್ಕೆ ನಿಷೇಧವಿತ್ತು. 2012ರಲ್ಲಿ 31 ವರ್ಷದ ದಂತ ವೈದ್ಯೆ, ಗರ್ಭಿಣಿ ಸವಿತಾ ಹಾಲಪ್ಪನವರ್‌ ತಮಗೆ ಚಿಕಿತ್ಸೆ ನೀಡುತ್ತಿದ್ದ ಗಾಲ್ವೆ ಆಸ್ಪತ್ರೆಯ ವೈದ್ಯರಲ್ಲಿ ಗರ್ಭಪಾತ ಮಾಡಿ ತಮ್ಮ ಜೀವ ಉಳಿಸುವಂತೆ ಮನವಿ ಮಾಡಿಕೊಂಡಿದ್ದರು. ತಾಯಿಯ ಜೀವಕ್ಕೆ ಅಪಾಯವಿದ್ದರೂ ನಿಷೇಧದ ಕಾರಣದಿಂದ ವೈದ್ಯರು ಗರ್ಭಪಾತ ಮಾಡಲೊಪ್ಪಲಿಲ್ಲ. ಪರಿಣಾಮ ರಕ್ತದಲ್ಲಿ ವಿಷ ಸೇರಿಕೊಂಡು ಅವರು ಮೃತಪಟ್ಟರು.

ಈ ಘಟನೆಯ ಬಳಿಕ ಐರ್ಲೆಂಡ್‌ನಲ್ಲಿ ಗರ್ಭಪಾತ ಕಾನೂನುಬದ್ಧ ಗೊಳಿಸಬೇಕೆಂಬ ಆಗ್ರಹ ತೀವ್ರಗೊಂಡು ಪ್ರತಿಭಟನೆ ಜನಾಂದೋಲನದ ರೂಪ ಪಡೆಯಿತು. ಅದರ ಪರಿಣಾಮ ಈಗ ಐರ್ಲೆಂಡ್‌ ಸಂಸತ್ತು ಗರ್ಭಪಾತಕ್ಕೆ ಅವಕಾಶ ಒದಗಿಸುವ 'ದಿ ರೆಗ್ಯೂಲೇಷನ್‌ ಆಫ್‌ ಟರ್ಮಿನೇಷನ್‌ ಆಫ್‌ ಪ್ರೆಗ್ನೆನ್ಸಿ' ವಿಧೇಯಕವನ್ನು ಅಂಗೀಕರಿಸಿದೆ. ಅಧ್ಯಕ್ಷ ಮೈಕೆಲ್‌ ಡಿ ಹಿಗ್ಗಿನ್ಸ್‌ ಅವರ ಸಹಿಬಿದ್ದ ನಂತರ ವಿಧೇಯಕ ಕಾಯಿದೆಯಾಗಿ ಜಾರಿಗೆ ಬರಲಿದೆ.

ಶೇಕಡ 66.4 ಮತ: ಗರ್ಭಪಾತವನ್ನು ಕಾನೂನುಬದ್ಧ ಗೊಳಿಸುವ ನಿಟ್ಟಿನಲ್ಲಿ ಎಂಟನೇ ತಿದ್ದುಪಡಿಯನ್ನು ರದ್ದುಗೊಳಿಸುವ ಮೂಲಕ ಸಂವಿಧಾನಕ್ಕೆ ಬದಲಾವಣೆ ತರುವ ಪ್ರಸ್ತಾವನೆ ಪರ ಐರ್ಲೆಂಡ್‌ ಸಂಸತ್ತು ಶೇಕಡ 66.4ರಷ್ಟು ಮತ ಹಾಕಿದೆ.

-------

ಐತಿಹಾಸಿಕ ಕ್ಷಣ

ಐರಿಷ್‌ ಮಹಿಳೆಯರಿಗೆ ಇದೊಂದು ಐತಿಹಾಸಿಕ ಕ್ಷಣ. ಐರ್ಲೆಂಡ್‌ ಸಂಸತ್ತಿನ ಉಭಯ ಸದನಗಳಲ್ಲಿ ವಿಧೇಯಕ ಪಾಸಾಗಿರುವುದಕ್ಕೆ ಆರೋಗ್ಯ ಸಚಿವ ಸೈಮನ್‌ ಹ್ಯಾರಿಸ್‌ ಅವರಿಗೆ ಬೆಂಬಲ ನೀಡಿದ ಎಲ್ಲರಿಗೂ ನನ್ನ ಧನ್ಯವಾದಗಳನ್ನು ಸಲ್ಲಿಸುವೆ ಎಂದು 39 ವರ್ಷದ ಭಾರತೀಯ ಮೂಲದ ಪ್ರಧಾನಿ ಲಿಯೋ ವರದ್‌ಕರ್‌ ಹೇಳಿದ್ದಾರೆ. ಇವರು ಐರ್ಲೆಂಡ್‌ನ ಅತಿ ಕಿರಿಯ ಮತ್ತು ಮುಕ್ತವಾಗಿ ಘೋಷಿಸಿಕೊಂಡ ದೇಶದ ಪ್ರಥಮ ಸಲಿಂಗಿ ಪ್ರಧಾನಿಯಾಗಿದ್ದಾರೆ. ಕಳೆದ ಜೂನ್‌ನಲ್ಲಿ ಅಧಿಕಾರ ಸ್ವೀಕರಿಸಿದ್ದರು.

----------

ವಿಧೇಯಕದಲ್ಲಿ ಏನಿದೆ?

'ದಿ ರೆಗ್ಯೂಲೇಷನ್‌ ಆಫ್‌ ಟರ್ಮಿನೇಷನ್‌ ಆಫ್‌ ಪ್ರೆಗ್ನೆನ್ಸಿ' ಬಿಲ್‌ನಲ್ಲಿ 12ನೇ ವಾರದವರೆಗಿನ ಗರ್ಭಿಣಿಯರಿಗೆ ಪ್ರತಿಕೂಲ ಸನ್ನಿವೇಶದಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬೆಳವಣಿಗೆ ಕುಂಠಿತಗೊಂಡ ಭ್ರೂಣ ಅಥವಾ ತಾಯಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಂದರ್ಭಗಳಲ್ಲಿ ಗರ್ಭಪಾತ ಮಾಡಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ