ಆ್ಯಪ್ನಗರ

GSLV MK IIIನಲ್ಲಿ ಹೀಲಿಯಂ ಸೋರಲು ಕಾರಣವೇನು?

ಚಂದ್ರಯಾನ-2 ಉಡಾವಣೆಯ ವೇಳೆ ಸಂಭವಿಸಿದ ತಾಂತ್ರಿಕ ದೋಷಕ್ಕೆ ನಿಖರ ಕಾರಣ ಕಂಡುಹಿಡಿಯುವ ನಿಟ್ಟಿನಲ್ಲಿ ಇಸ್ರೋ ತಲ್ಲೀನವಾಗಿದೆ. ಜಿಎಸ್‌ಎಲ್‌ವಿ ಎಂಕೆ-3ಯ ಕ್ರಯೋಜೆನಿಕ್‌ ಎಂಜಿನ್‌ನಿಂದ ನಿಪ್ಪಲ್‌ ಜಾಯಿಂಟ್‌ನಲ್ಲಿ ಹೀಲಿಯಂ ಸೋರಿಕೆ ಏಕೆ ಆಯಿತು ಎಂಬ ಅಧ್ಯಯನದಲ್ಲಿ ಇಸ್ರೋ ವಿಜ್ಞಾನಿಗಳ ತಂಡ ಪರಿಶ್ರಮಿಸುತ್ತಿದೆ.

TIMESOFINDIA.COM 17 Jul 2019, 12:27 pm
[This story originally published in Times of India on July 17,2019]
Vijaya Karnataka Web chandrayaan


ಚೆನ್ನೈ:
ಚಂದ್ರಯಾನ-2 ಉಡಾವಣೆ ವೇಳೆ ಉಂಟಾದ ತಾಂತ್ರಿಕ ದೋಷವನ್ನು ಇಸ್ರೋ ವಿಜ್ಞಾನಿಗಳು ಪತ್ತೆ ಹಚ್ಚಿದ್ದರೂ, ಈ ದೋಷಕ್ಕೆ ಕಾರಣವೇನು ಎಂಬುದನ್ನು ಇನ್ನಷ್ಟೇ ಅರಿತುಕೊಳ್ಳಬೇಕಿದೆ!

ಉಡಾವಣೆ ರದ್ದುಗೊಂಡ ಬಳಿಕ ಸಮಸ್ಯೆಯ ಅನ್ವೇಷಣೆಗೆ ಇಳಿದಿರುವ ವಿಜ್ಞಾನಿಗಳು ತಂಡ 24 ಗಂಟೆಗಳಲ್ಲಿ ಉಡ್ಡಯನ ವಾಹನ ಜಿಎಸ್‌ಎಲ್‌ವಿ ಎಂಕೆ-3ಯ ಕ್ರಯೋಜೆನಿಕ್‌ ಎಂಜಿನ್‌ನಿಂದ ನಿಪ್ಪಲ್‌ ಜಾಯಿಂಟ್‌ನಲ್ಲಿ ಹೀಲಿಯಂ ಸೋರಿಕೆ ಇರುವುದನ್ನು ಪತ್ತೆ ಹಚ್ಚಿದೆ. ಇದನ್ನು ಸರಿಪಡಿಸುವುದೂ ಕಷ್ಟದ ಕೆಲಸ ಅಲ್ಲ. ಆದರೆ ಈ ಸೋರಿಕೆಗೆ ಕಾರಣ ಏನೆಂಬುದನ್ನು ಇಸ್ರೋ ಕಂಡುಕೊಳ್ಳಬೇಕಿದೆ. ಇಲ್ಲವಾದಲ್ಲಿ ಮತ್ತೆ ಇದೇ ಸಮಸ್ಯೆ ಮರುಕಳಿಸುವ ಸಾಧ್ಯತೆಗಳಿವೆ.

ಸೋಮವಾರ ಮುಂಜಾನೆ ಉಡಾವಣೆಗೆ 51 ನಿಮಿಷಗಳಿರುವ ಹಂತದಲ್ಲಿ ತಾಂತ್ರಿಕ ದೋಷವನ್ನು ಗುರುತಿಸಿದ ವಿಜ್ಞಾನಿಗಳು, ಉಡಾವಣೆಯನ್ನು ರದ್ದುಗೊಳಿಸಿದ್ದರು.

ಸರಿಪಡಿಸೋದು ಹೇಗೆ?
ಉಡಾವಣೆ ರದ್ದುಗೊಂಡ ಬೇಸರ ಇದೆಯಾದರೂ, ವಿಜ್ಞಾನಿಗಳ ಮುಂಜಾಗೃತಾ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಪ್ರಸ್ತುತ ರಾಕೆಟ್‌ ಇರುವ ಜಾಗದಲ್ಲೇ ಕ್ರಯೋಎಂಜಿನ್‌ನ ಹೀಲಿಯಂ ಸೋರಿಕೆಯನ್ನು ಸರಿಪಡಿಸಬಹುದು. ಇದಕ್ಕೆ ಸಂಪೂರ್ಣ ಬೇರ್ಪಡಿಸುವ ಅಗತ್ಯವಿಲ್ಲ ಎಂದು ಇಸ್ರೋ ಹಿರಿಯ ವಿಜ್ಞಾನಿಯೋರ್ವರು ತಿಳಿಸಿದ್ದಾರೆ. ಆದರೆ ಈ ಸೋರಿಕೆಯಾಗಲು ಕಾರಣವೇನೆಂಬುದನ್ನು ಮೊದಲು ಕಂಡುಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ. ದೋಷದ ಕುರಿತು ವಿಶ್ಲೇಷಣಾ ತಂಡ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದು, ಸಂಪೂರ್ಣ ವರದಿ ನೀಡಲಿದೆ. ಈ ಬಳಿಕವೇ ಮುಂದಿನ ಉಡಾವಣೆಯ ದಿನಾಂಕ ನಿಗದಿ ಪಡಿಸಲಾಗುತ್ತದೆ ಎನ್ನಲಾಗಿದೆ.

ನಿಪ್ಪಲ್‌ ಜಾಯಿಂಟ್‌ ಕ್ರಮ ಬದ್ಧವಾಗಿರದಿರುವುದೇ ಸೋರಿಕೆಗೆ ಕಾರಣ ಎಂದೆನಿಸುತ್ತದೆ. ದ್ರವರೂಪದ ಆಕ್ಸಿಜನ್‌ನ್ನು ಮೈನಸ್‌ 183 ಡಿಗ್ರಿ ಸೆಲ್ಸಿಯಸ್‌ನಲ್ಲಿ ತುಂಬಲಾಗುತ್ತದೆ. ಇಷ್ಟು ಕಡಿಮೆ ತಾಪಮಾನದಲ್ಲಿ ನಿಪ್ಪಲ್‌ ಜಾಯಿಂಟ್‌ ಕುಗ್ಗಿಕೊಳ್ಳುವ ಸಾಧ್ಯತೆಗಳಿರುತ್ತದೆ. ಇದನ್ನು ತಡೆಯಲು ಜಾಯಿಂಟ್‌ಗೆ ಅಗತ್ಯ ಇನ್ಸುಲೇಷನ್‌ ಮಾಡಬೇಕಾಗುತ್ತದೆ. ಈ ವಿಭಾಗದಲ್ಲಿ ಸಮಸ್ಯೆಯಾಗಿರುವ ಸಾಧ್ಯತೆಗಳಿರುತ್ತದೆ ಎಂದು ಇಸ್ರೋದ ಹಿರಿಯ ಯೋಜನೆ ವೈಫಲ್ಯ ವಿಶ್ಲೇಷಕ ವಿಜ್ಞಾನಿಯೋರ್ವರು ಮಾಹಿತಿ ನೀಡಿದ್ದಾರೆ.

ಚಂದ್ರಯಾನ-2 ಉಡ್ಡಯನ ರದ್ದುಗೊಳ್ಳಲು ನಿಖರ ಕಾರಣ ಏನು?

ಹೆಚ್ಚು ಪ್ರಮಾಣದ ಸೋರಿಕೆಯಿಂದ ರಾಕೆಟ್‌ ಉಡಾವಣೆಯ ವೇಳೆಯೇ ವಿಫಲಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. 34 ಲೀಟರ್‌ನಷ್ಟು ಹೀಲಿಯಂ ಗ್ಯಾಸ್‌ ಬಾಟಲ್‌ನಲ್ಲಿ ತುಂಬಿಸಲಾಗುತ್ತದೆ. ಅತಿ ಹೆಚ್ಚು ಒತ್ತಡವನ್ನು ಇವುಗಳು ಹೊರಹಾಕುತ್ತವೆ. ಪ್ರತಿ ನಿಮಿಷಕ್ಕೆ 4 ಬಾರ್‌ನಷ್ಟು ಪ್ರೆಶರ್‌ ಕಡಿಮೆಯಾಗುತ್ತಿದ್ದುದರಿಂದ ಮುಂಜಾಗೃತಾ ಕ್ರಮವಾಗಿ ಉಡಾವಣೆಯನ್ನು ರದ್ದುಗೊಳಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ