ಆ್ಯಪ್ನಗರ

ಮತ್ತೊಂದು ಪುಲ್ವಾಮಾ ಮಾದರಿ ದಾಳಿಗೆ ಜೈಷೆ ಸಂಚು

ಫೆ.14ರ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಬಾಲಾಕೋಟ್‌ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಗೆ ಸೇಡು ತೀರಿಸಿಕೊಳ್ಳಲು ಜೈಷೆ ಉಗ್ರ ಸಂಘಟನೆ ಸಂಚು ಹೂಡಿದೆ.

Vijaya Karnataka 8 Mar 2019, 9:20 pm
ಶ್ರೀನಗರ/ಇಸ್ಲಾಮಾಬಾದ್‌: ಪಾಕಿಸ್ತಾನ ಕೃಪಾಪೋಷಿತ ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆ ಜಮ್ಮು-ಕಾಶ್ಮೀರದಲ್ಲಿ ಮುರ್ನಾಲ್ಕು ದಿನದಲ್ಲಿಯೇ ಪುಲ್ವಾಮಾ ಮಾದರಿಯ ಮತ್ತೊಂದು ದಾಳಿ ನಡೆಸಲ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
Vijaya Karnataka Web Terror


ಫೆ.14ರ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಬಾಲಾಕೋಟ್‌ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಗೆ ಸೇಡು ತೀರಿಸಿಕೊಳ್ಳಲು ಜೈಷೆ ಉಗ್ರ ಸಂಘಟನೆ ಸಂಚು ಹೂಡಿದೆ. ಅನಂತನಾಗ್‌ ಜಿಲ್ಲೆಯ ಖ್ವಾಜಿಗುಂದ್‌ನಲ್ಲಿ ಪುಲ್ವಾಮಾ ಮಾದರಿಯಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿದೆ. ಈ ಸಲ ಆತ್ಮಾಹುತಿ ದಾಳಿಕೋರ ಕಾರಿನ ಬದಲು ಟಾಟಾ ಸುಮೋವನ್ನು ಬಳಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಕಣಿವೆ ರಾಜ್ಯದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಜಮ್ಮು ಬಸ್‌ ನಿಲ್ದಾಣದಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಗ್ರೆನೇಡ್‌ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಗುಪ್ತಚರ ಇಲಾಖೆ ಇಂತಹದ್ದೊಂದು ಎಚ್ಚರಿಕೆ ರವಾನಿಸಿದೆ. ಜಮ್ಮು-ಕಾಶ್ಮೀರದಲ್ಲಿರುವ ಸೇನಾ ನೆಲೆಗಳು ಹಾಗೂ ವಾಯನೆಲೆಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಇನ್ನೊಂದೆಡೆ ಸೇನೆಯು ಉಗ್ರರ ದಮನ ಕಾರ್ಯಾಚರಣೆಯನ್ನು ಬಿರುಸುಗೊಳಿಸಿದೆ.

3ನೇ ಸಲ ಪಾಕ್‌ ನಿರ್ಬಂಧ: ಭಾರತದ ವಾಯುದಾಳಿಗೆ ಉಗ್ರ ಶಿಬಿರಗಳು ಚಿಂದಿಯಾಗಿರುವ ಖೈಬರ್‌ ಪಂಖ್ತುಖ್ವಾ ಪ್ರಾಂತ್ಯದ ಬಾಲಾಕೋಟ್‌ ಪ್ರದೇಶಕ್ಕೆ ಭೇಟಿ ನೀಡಲು ಹೋಗಿದ್ದ ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಪಾಕಿಸ್ತಾನ ಸತತ 3ನೇ ಸಲ ನಿರ್ಬಂಧಿಸಿದೆ.

ಉಗ್ರರಿಗೆ ಬೆಂಬಲವಾಗಿ ನಿಂತು ಜಗತ್ತಿನ ಮುಂದೆ ಬೆತ್ತಲಾಗಿರುವ ಪಾಕ್‌ ಈಗ ಭದ್ರತೆಯ ಕಾರಣಗಳ ನೆಪವೊಡ್ಡಿ ಬಾಂಬ್‌ ದಾಳಿಯಿಂದ ಹಾನಿಗೊಂಡಿರುವ ಪ್ರದೇಶಕ್ಕೆ ಮಾಧ್ಯಮಗಳನ್ನು ಬಿಡುತ್ತಿಲ್ಲ. ಗುರುವಾರ ಸಾಕ್ಷಾತ್‌ ವರದಿಗೆಂದು ಬಂದಿದ್ದ ರಾಯಿಟರ್ಸ್‌ ಸುದ್ದಿ ಸಂಸ್ಥೆಯ ವರದಿಗಾರರಿಗೆ ಘಟನಾ ಸ್ಥಳ ಪ್ರವೇಶಿಸಲು ಅವಕಾಶ ನೀಡಲಾಗಿಲ್ಲ. ಕೆಲವು ದಿನಗಳ ಹಿಂದಷ್ಟೇ ಹವಾಮಾನ ಹಾಗೂ ಭದ್ರತೆ ಹಿನ್ನೆಲೆಯಲ್ಲಿ ಪಾಕ್‌ ಸೇನೆ, ಮಾಧ್ಯಮಗಳ ಪ್ರವೇಶವನ್ನು ಎರಡು ಸಲ ತಡೆದಿತ್ತು. ಇತ್ತ ಅಮೆರಿಕ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನವನ್ನು ಮತ್ತೊಮ್ಮೆ ಎಚ್ಚರಿಸಿದೆ.

ಮೋದಿ ಸರಕಾರಕ್ಕೆ ಆರೆಸ್ಸೆಸ್‌ ಶಹಬ್ಬಾಸ್‌
ಉಗ್ರರ ದಮನ ಕಾರ್ಯಾಚರಣೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ತೋರಿರುವ ದಿಟ್ಟತನಕ್ಕೆ ಆರೆಸ್ಸೆಸ್‌ ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಗ್ವಾಲಿಯರ್‌ನಲ್ಲಿ ನಡೆಯುತ್ತಿರುವ ಮೂರು ದಿನಗಳ ಆರೆಸ್ಸೆಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಮಾವೇಶದಲ್ಲಿ ಬಾಲಾಕೋಟ್‌ ವಾಯುದಾಳಿಗೆ ಅಭಿನಂದನೆ ಸಲ್ಲಿಸುವ ಪ್ರಸ್ತಾವ ಅಂಗೀಕರಿಸಲಾಗಿದೆ.

''ಸಹಿಷ್ಣುತೆಯೇ ಭಾರತದ ದೌರ್ಬಲ್ಯ ಎಂದು ಭಾವಿಸಿದ ದುರುಳರಿಗೆ ಪ್ರಧಾನಿ ಮೋದಿ ಸರಕಾರ, ವಾಯುದಾಳಿಯಂತಹ ದಿಟ್ಟ ನಿರ್ಧಾರದ ಮೂಲಕ ತಕ್ಕ ಪಾಠ ಕಲಿಸಿದೆ,'' ಎಂದು ಆರೆಸ್ಸೆಸ್‌ ಪ್ರಧಾನ ಕಾರ‍್ಯದರ್ಶಿ ಮನಮೋಹನ್‌ ವೈದ್ಯ ನಿರ್ಣಯ ಮಂಡಿಸಿದರು. ಸಮಾವೇಶದಲ್ಲಿ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌, ಸರಕಾರ್ಯವಾಹ ಭಯ್ಯಾಜಿ ಜೋಶಿ ಸೇರಿ ಹಲವು ಮುಖಂಡರು ಪಾಲ್ಗೊಳ್ಳುತ್ತಿದ್ದು, ಶಬರಿಮಲೆ ಹಾಗೂ ಅಯೋಧ್ಯೆ ವಿವಾದ ಕುರಿತೂ ಚರ್ಚೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ