ಆ್ಯಪ್ನಗರ

ಏಕಾಏಕಿ ರಾತ್ರಿ ಅಜಾನ್‌ನಿಂದ ಕಂಗಾಲಾದ ಜಮ್ಮು-ಕಾಶ್ಮೀರದ ಜನ!

​ಜಗತ್ತಿನಾದ್ಯಂತ ಮುಸ್ಲಿಮರು ಬುಧವಾರ ರಾತ್ರಿ 10 ಗಂಟೆಗೆ ಮನೆಯಿಂದ ಹೊರಬಂದು ಪ್ರಾರ್ಥನೆ ಸಲ್ಲಿಸುವಂತೆ ಪಾಕಿಸ್ತಾನದ ಮುಸ್ಲಿಂ ಸಂಘಟನೆಯೊಂದು ಕರೆ ನೀಡಿತ್ತು. ಜಮ್ಮು-ಕಾಶ್ಮೀರದ ಮಸೀದಿಗಳ ಮೌಲ್ವಿಗಳು ಅದನ್ನು ಚಾಚೂ ತಪ್ಪದೆ ಪಾಲಿಸಿ ‘ಅಜಾನ್‌’ ಕೂಗಿದ್ದು ಜನರನ್ನು ಅರೆಕ್ಷಣ ಆತಂಕಕ್ಕೆ ದೂಡಿತ್ತು.

Agencies 26 Mar 2020, 8:40 pm
ಶ್ರೀನಗರ: ಪಾಕಿಸ್ತಾನದ ಮುಸ್ಲಿಂ ಸಂಘಟನೆಯೊಂದು ನೀಡಿದ್ದ ಕರೆಗೆ ಸ್ಪಂದಿಸಿ ಬುಧವಾರ ಜಮ್ಮು-ಕಾಶ್ಮೀರದ ಮಸೀದಿಗಳು ಹೊತ್ತಲ್ಲದ ಹೊತ್ತಲ್ಲಿ ‘ಅಜಾನ್‌’ ಕೂಗಿದ್ದರಿಂದ ಜನ ರಾತ್ರೋರಾತ್ರಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ವಿಲಕ್ಷಣ ವಿದ್ಯಮಾನ ನಡೆದಿದೆ.
Vijaya Karnataka Web Jammu and Kashmir
ಸಾಂದರ್ಭಿಕ ಚಿತ್ರ


ಬುಧವಾರ ರಾತ್ರಿ 10 ಗಂಟೆಗೆ ಮಸೀದಿಯ ‘ಅಜಾನ್‌’ (ಪ್ರಾರ್ಥನೆ ಸಲ್ಲಿಸುವ ಸಮಯ ನೆನಪಿಸುವ ಕೂಗು) ಕೇಳಿದ ಸಾವಿರಾರು ಜನ ದೇಶದಲ್ಲಿ ಲಾಕ್‌ಡೌನ್‌ ಘೋಷಣೆಯಾಗಿರುವುದನ್ನೂ ಲೆಕ್ಕಿಸದೇ ಮಸೀದಿಗೆ ತೆರಳಿದರು. ಕೆಲವರು ಏನೋ ಅನಾಹುತ ಸಂಭವಿಸಿರಬೇಕು ಎಂಬ ಆತಂಕದಲ್ಲಿ ದೌಡಾಯಿಸಿದರು. ವಿಷಯ ತಿಳಿದ ಬಳಿಕ ಕೆಲಕಾಲ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ತೆರಳಿದರು.

ಜಗತ್ತಿನಾದ್ಯಂತ ಮುಸ್ಲಿಮರು ಬುಧವಾರ ರಾತ್ರಿ 10 ಗಂಟೆಗೆ ಮನೆಯಿಂದ ಹೊರಬಂದು ಪ್ರಾರ್ಥನೆ ಸಲ್ಲಿಸುವಂತೆ ಪಾಕಿಸ್ತಾನದ ಮುಸ್ಲಿಂ ಸಂಘಟನೆಯೊಂದು ಕರೆ ನೀಡಿತ್ತು. ಜಮ್ಮು-ಕಾಶ್ಮೀರದ ಮಸೀದಿಗಳ ಮೌಲ್ವಿಗಳು ಅದನ್ನು ಚಾಚೂ ತಪ್ಪದೆ ಪಾಲಿಸಿ ‘ಅಜಾನ್‌’ ಕೂಗಿದರು. ಇಡೀ ವಿಶ್ವ ‘ಮನೆಯಲ್ಲಿರಿ, ಸುರಕ್ಷಿತವಾಗಿರಿ’ ಎಂಬ ಅಭಿಯಾನ ನಡೆಸುತ್ತಿದ್ದರೆ ಪಾಕಿಸ್ತಾನದ ಈ ಸಂಘಟನೆ ಮಾತ್ರ ಮನೆಯಿಂದ ಹೊರಬರುವಂತೆ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿತ್ತು.

"ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಸಹ ಮಸೀದಿಯಲ್ಲಿ ಸಲ್ಲಿಸುವ ಪ್ರಾರ್ಥನೆಯಷ್ಟೇ ಪವಿತ್ರ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಇಡೀ ವಿಶ್ವದಲ್ಲಿ ಮನೆಯಿಂದ ಹೊರಬರದಂತೆ ಜನರನ್ನು ಮನವೊಲಿಸುವ ಪ್ರಯತ್ನ ನಡೆಯುತ್ತಿರುವಾಗ ಯಾವ ಧಾರ್ಮಿಕ ಸಂಘಟನೆಯೂ ಮನೆಯಿಂದ ಹೊರ ಬರುವಂತೆ ಜನರಿಗೆ ಕರೆ ನೀಡಬಾರದು. ಜನ ಸಹ ಆರೋಗ್ಯದ ಮಹತ್ವ ಅರ್ಥ ಮಾಡಿಕೊಂಡು ಮನೆಯಿಂದ ಹೊರಬರಬಾರದು," ಎಂದು ಶ್ರೀನಗರ ಜಿಲ್ಲಾಧಿಕಾರಿ ಶಾಹಿದ್‌ ಚೌಧರಿ ಮನವಿ ಮಾಡಿದ್ದಾರೆ.

"ನಮ್ಮ ಮನವಿಗೆ ಸ್ಪಂದಿಸಿ ಅನೇಕ ಮಸೀದಿಗಳಿಗೆ ಗುರುವಾರದಿಂದ ಬೀಗ ಹಾಕಲಾಗಿದೆ. ಎಲ್ಲ ಪ್ರಾರ್ಥನಾ ಸ್ಥಳಗಳನ್ನೂ ಬಂದ್‌ ಮಾಡಲು ಆಡಳಿತ ಮಂಡಳಿಗಳು ಮುಂದಾಗಬೇಕು,’’ ಎಂದು ಅವರು ತಿಳಿಸಿದ್ದಾರೆ.

20 ಜನರ ವಿರುದ್ಧ ಎಫ್‌ಐಆರ್‌

ಲಾಕ್‌ಡೌನ್‌ ಉಲ್ಲಂಘಿಸಿ ಉತ್ತರ ಪ್ರದೇಶದ ಬಹರಿಚ್‌ನಲ್ಲಿ ಬುಧವಾರ ರಾತ್ರಿ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಆಗಮಿಸಿದ್ದ 20 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಮಸೀದಿಯ ಮೌಲ್ವಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದಲ್ಲದೇ, ಜಿಲ್ಲೆಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಸಂಚರಿಸುತ್ತಿದ್ದ 195 ವಾಹನಗಳಿಗೆ ದಂಡ ವಿಧಿಸಲಾಗಿದ್ದು, 90 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

3,000 ಪ್ರಕರಣಮಹಾರಾಷ್ಟ್ರದಲ್ಲಿ ಕಳೆದ ಮೂರು ದಿನಗಳಲ್ಲಿ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ 3,000 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ