ಕೇಂದ್ರಪಾರ (ಒಡಿಶಾ): ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯ ಕುಗ್ರಾಮಲ್ಲಿ ದಿನಗೂಲಿ ಕಾರ್ಮಿಕನ ಮಗನೊಬ್ಬ ಪ್ರತಿಷ್ಟಿತ ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಯಲ್ಲಿ ಪರಿಶಿಷ್ಠ ಪಂಗಡ ವಿಭಾಗದಲ್ಲಿ 582 ನೇ ರ್ಯಾಂಕ್ ಪಡೆದಿದ್ದಾನೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಬೆಳೆದ ಬಿಕಾಸ್ದಾಸ್, 582 ನೇ ರ್ಯಾಂಕ್ ಪಡೆದು ಐಐಟಿಗೆ ಪ್ರವೇಶ ಪಡೆಯಲು ಅರ್ಹನಾಗಿದ್ದಾನೆ. ಆತನ ತಂದೆ ಬಿಜೋಯ್ ದಾಸ್, ''ಬಿಕಾಸ್ ಯಾವತ್ತೂ ಇಂಗ್ಲಿಷ್ ಮಾಧ್ಯಮದಲ್ಲಿ ಓದಲಿಲ್ಲ. ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಹಳ್ಳಿಯಲ್ಲೇ ಪಡೆದರೂ ಸದಾ ಓದಿನಲ್ಲಿ ಚುರುಕಾಗಿದ್ದ,'' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
'ನಾನು ದಿನಗೂಲಿ ಕಾರ್ಮಿಕ. ಬೇರೆಯವರ ಹೊಲದಲ್ಲಿ ಕೂಲಿ ಮಾಡುತ್ತೇನೆ. ಎಷ್ಟೇ ಕಷ್ಟ ಬಂದರೂ ನನ್ನ ಮಗನ ಶಿಕ್ಷಣಕ್ಕೆ ಮಹತ್ವ ನೀಡಿದೆ. ಮನಾಪುರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಆತ ಚುರುಕಾಗಿದ್ದ, ನಾನು ಆತನ ಶಿಕ್ಷಣಕ್ಕಾಗಿ ಹಣ ಉಳಿಸಿದೆ, ಈಗ ತುಂಬಾ ಸಂತೋಷವಾಗುತ್ತಿದೆ,'ಎಂದು ತಂದೆ ಆನಂದಬಾಷ್ಪ ಸುರಿಸಿದ್ದಾರೆ.
'ನನ್ನ ಅಪ್ಪ ನನಗೆ ಸ್ಪೂರ್ತಿ. ಅವರು ಬಡತನ ನನಗೆ ಸೋಕಲು ಬಿಡಲಿಲ್ಲ. ಕಷ್ಟ ಪಟ್ಟು ನನ್ನ ಓದಿಗೆ ಹಣ ಹೊಂದಿಸಿದರು. ನನ್ನ ಸಾಧನೆಗೆ ಅಪ್ಪನೇ ಕಾರಣ. ಪಾಲಕರ ಬೆಂಬಲ, ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ,' ಎಂದು ಬಿಕಾಸ್ ಹೇಳಿಕೆ ನೀಡಿದ್ದಾರೆ.