ಆ್ಯಪ್ನಗರ

ಜೈಲಿನಿಂದನೇ ಶಾಸಕರಿಗೆ ಲಾಲೂ ಪ್ರಸಾದ್‌ ಯಾದವ್‌ ಕರೆ, ಜಾರ್ಖಂಡ್‌ನಿಂದ ತನಿಖೆಗೆ ಆದೇಶ

ಬುಧವಾರ ಟ್ಟೀಟ್‌ ಮಾಡಿದ್ದ ಬಿಹಾರದ ಮಾಜಿ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ, ಲಾಲೂ ಪ್ರಸಾದ್‌ ಯಾದವ್‌ ಫೋನ್‌ ಕರೆ ಮಾಡಿ ಎನ್‌ಡಿಎ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

Agencies 26 Nov 2020, 1:41 pm
ರಾಂಚಿ: ಜೈಲಿನಿಂದಲೇ ಲಾಲೂ ಪ್ರಸಾದ್‌ ಯಾದವ್‌ ಎನ್‌ಡಿಎ ಶಾಸಕರಿಗೆ ಫೋನ್‌ ಕರೆ ಮಾಡಿ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಜಾರ್ಖಂಡ್‌ ಸರಕಾರ ಆದೇಶಿಸಿದೆ.
Vijaya Karnataka Web lalu prasad yadav


ಈ ಬಗ್ಗೆ ತನಿಖೆ ನಡೆಸುವಂತೆ ರಾಂಚಿ ಡೆಪ್ಯುಟಿ ಕಮಿಷನರ್‌, ಎಸ್‌ಪಿ ಹಾಗೂ ಬಿರ್ಸಾ ಮುಂಡ ಜೈಲು ಸೂಪರಿಂಟೆಂಡೆಂಟ್‌ಗೆ ಸೂಚನೆ ನೀಡಿರುವುದಾಗಿ ಬಂಧೀಖಾನೆ ವಿಭಾಗದ ಐಜಿಪಿ ವೀರೇಂದ್ರ ಭೂಷಣ್‌ ಹೇಳಿದ್ದಾರೆ. ಒಂದೊಮ್ಮೆ ಆರೋಪ ಸಾಬೀತಾದಲ್ಲಿ ಕಾನೂನು ರೀತಿ ಕ್ರಮ ಜರುಗಿಸುವಂತೆಯೂ ಅವರು ಆದೇಶಿಸಿದ್ದಾರೆ.

ಲಾಲೂ ಪ್ರಸಾದ್‌ ಯಾದವ್‌ ಮತ್ತು ಶಾಸಕರ ನಡುವಿನ ಸಂಭಾಷಣೆಯ ಧ್ವನಿ ಮುದ್ರಿಕೆಯನ್ನು ಸ್ವತಃ ತಾನೇ ಕೇಳಿದ ಬಳಿಕ ಈ ಆದೇಶ ನೀಡಿರುವುದಾಗಿ ಅವರು ವಿವರಿಸಿದ್ದಾರೆ.

ಜೈಲಿನ ಕೈಪಿಡಿ ಪ್ರಕಾರ ನ್ಯಾಯಾಂಗ ಬಂಧನದ ವೇಳೆ ಮೊಬೈಲ್‌ ಫೋನ್‌ ಆಗಲಿ, ಫೋನ್‌ ಆಗಲಿ ಬಳಸಲು ಅವಕಾಶವಿಲ್ಲ. ಒಂದೊಮ್ಮೆ ಆರೋಪ ಸಾಬೀತಾದಲ್ಲಿ ಲಾಲೂ ಪ್ರಸಾದ್‌ ಯಾದವ್‌ ಕೈಗೆ ಮೊಬೈಲ್‌ ಫೋನ್‌ ಬಂದಿದ್ದು ಹೇಗೆ, ಇದಕ್ಕೆ ಯಾರು ಜವಾಬ್ದಾರಿ ಎಂಬ ಬಗ್ಗೆಯೂ ತನಿಖೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಎನ್‌ಡಿಎ ಶಾಸಕರಿಗೆ ಲಾಲು ಕರೆ, ಪಕ್ಷಕ್ಕೆ ಸೆಳೆಯಲು ಯತ್ನ - ಸುಶೀಲ್‌ ಮೋದಿ ಆರೋಪ
ಜಿಲ್ಲಾಡಳಿತದ ಅನುಮತಿ ಮೇರೆಗೆ ಲಾಲೂ ಪ್ರಸಾದ್‌ ಯಾದವ್‌ ಅವರು ರಿಮ್ಸ್‌ ಆಸ್ಪತ್ರೆ ನಿರ್ದೇಶಕರ ಬಂಗಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ವ್ಯಕ್ತಿ ನ್ಯಾಯಾಂಗ ಬಂಧನದಲ್ಲಿದ್ದಾಗ ಯಾವುದೇ ರೀತಿಯ ರಾಜಕೀಯ ಚರ್ಚೆಯನ್ನೂ ನಡೆಸುವಂತಿಲ್ಲ ಎಂದು ಅವರು ವಿವರಿಸಿದ್ದಾರೆ.

ಲಾಲೂ ಪ್ರಸಾದ್‌ ಯಾದವ್‌ ಅವರನ್ನು ಯಾರೆಲ್ಲ ಭೇಟಿಯಾಗಬಹುದು ಎಂಬುದರ ಬಗ್ಗೆ ರಾಂಚಿ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಳ್ಳುತ್ತದೆ. ಈಗಾಗಲೇ ಹೈಕೋರ್ಟ್‌ನಲ್ಲಿ‌ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿದ್ದು, ಲಾಲೂ ಪ್ರಸಾದ್‌ ಅವರ ಅನಾರೋಗ್ಯದ ಬಗ್ಗೆ ವಿವರವಾದ ತಪಾಸಣೆ ನಡೆಸಿ ಅವರನ್ನು ಮತ್ತೆ ಜೈಲಿಗೆ ಕಳುಹಿಸಬೇಕು ಎಂದು ಈ ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

ಬುಧವಾರ ಟ್ಟೀಟ್‌ ಮಾಡಿದ್ದ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ, ಲಾಲೂ ಪ್ರಸಾದ್‌ ಯಾದವ್‌ ಫೋನ್‌ ಕರೆ ಮಾಡಿ ಎನ್‌ಡಿಎ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ನಂತರ ಅವರು ಲಾಲೂ ಮತ್ತು ಬಿಜೆಪಿ ಶಾಸಕ ಲಲನ್‌ ಪಾಸ್ವಾನ್‌ ನಡುವಿನ ಸಂಭಾಷಣೆಯ ಒಂದೂವರೆ ನಿಮಿಷಗಳ ಆಡಿಯೋ ಕ್ಲಿಪ್‌ನ್ನೂ ಬಿಡುಗಡೆ ಮಾಡಿದ್ದರು.

ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ 2017ರಿಂದ ರಾಂಚಿ ಜೈಲಿನಲ್ಲಿದ್ದು, ಅನಾರೋಗ್ಯ ಸಂಬಂಧ ರಾಜೇಂದ್ರ ಪ್ರಸಾದ್‌ ಇನ್ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಅವರ ಸಹಾಯಕರು ಕೊರೊನಾಕ್ಕೆ ತುತ್ತಾದ ಹಿನ್ನೆಲೆಯಲ್ಲಿ ರಿಮ್ಸ್‌ ನಿರ್ದೇಶಕರ ಬಂಗಲೆಗೆ ಲಾಲೂ ಅವರನ್ನು ಶಿಫ್ಟ್‌ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ