ಆ್ಯಪ್ನಗರ

ಸಂಧಾನ ಸಮಿತಿಗೆ ಆರೆಸ್ಸೆಸ್‌ ಅಸಮಾಧಾನ

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪಂಚ ಸದಸ್ಯರ ಸಂವಿಧಾನ ಪೀಠ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಜಾಗದ ಒಡೆತನ ವಿವಾದ ಪರಿಹಾರಕ್ಕೆ ತ್ರಿ ಸದಸ್ಯರ ಸಂಧಾನ ಸಮಿತಿ ರಚಿಸಿದ ಬೆನ್ನಲ್ಲೇ ಆರೆಸ್ಸೆಸ್‌ ತನ್ನ ಅಸಮಾಧಾನ ಹೊರಹಾಕಿದೆ.

Vijaya Karnataka 9 Mar 2019, 5:00 am
ಹೊಸದಿಲ್ಲಿ: ದಶಕಗಳಿಂದ ನನೆಗುದಿಗೆ ಬಿದ್ದಿರುವ ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಸಂಧಾನ ಸಮಿತಿ ನೇಮಿಸಿದ ಸುಪ್ರೀಂ ಕೋರ್ಟ್‌ ನಿರ್ಧಾರ ಅಚ್ಚರಿ ತರಿಸಿದೆ ಎಂದು ಬೇಸರ ವ್ಯಕ್ತಪಡಿಸಿರುವ ಆರೆಸ್ಸೆಸ್‌, ತೀರ್ಪು ಪ್ರಕಟಣೆಯ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಮನವಿ ಮಾಡಿದೆ.
Vijaya Karnataka Web ayodhya


ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪಂಚ ಸದಸ್ಯರ ಸಂವಿಧಾನ ಪೀಠ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಜಾಗದ ಒಡೆತನ ವಿವಾದ ಪರಿಹಾರಕ್ಕೆ ತ್ರಿ ಸದಸ್ಯರ ಸಂಧಾನ ಸಮಿತಿ ರಚಿಸಿದ ಬೆನ್ನಲ್ಲೇ ಆರೆಸ್ಸೆಸ್‌ ತನ್ನ ಅಸಮಾಧಾನ ಹೊರಹಾಕಿದೆ. ದಶಕಗಳಿಂದಲೂ ಈ ಪ್ರಕರಣದಲ್ಲಿ ಹಿಂದೂಗಳ ಭಾವನೆಯನ್ನು ನಿರ್ಲಕ್ಷಿಸಿಕೊಂಡು ಬರಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದೆ.

''ನ್ಯಾಯಾಂಗ ವ್ಯವಸ್ಥೆ ಬಗ್ಗೆ ಆರೆಸ್ಸೆಸ್‌ ಅಪಾರ ಗೌರವ ಹೊಂದಿದೆ. ಭಾವನಾತ್ಮಕವಾಗಿ ಸೂಕ್ಷ್ಮವಾಗಿರುವ ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಈಗ ಸುಪ್ರೀಂ ತಾಳಿರುವ ನಿರ್ಧಾರ ಅಚ್ಚರಿ ತರಿಸಿದೆ. ತೀರ್ಪು ಪ್ರಕಟಣೆಯ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವ ಬದಲು ಸಮಿತಿ ರಚಿಸಿರುವುದಕ್ಕೆ ನಮ್ಮ ಆಕ್ಷೇಪವಿದೆ. ಈ ಪ್ರಕರಣದಲ್ಲಿ ಹಿಂದೂಗಳ ಭಾವನೆಯನ್ನು ಮೊದಲಿನಿಂದಲೂ ಕಡೆಗಣಿಸಿಕೊಂಡು ಬರುತ್ತಿರುವ ಭಾವನೆ ನಮಗೆ ಕಾಡುತ್ತಿದೆ,'' ಎಂದು ಆರೆಸ್ಸೆಸ್‌ ಹೇಳಿದೆ.

ಪಂಚ ಸದಸ್ಯರ ಸಂವಿಧಾನ ಪೀಠವು ತೀರ್ಪು ಪ್ರಕಟಣೆಯ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಿರುವ ಕಾನೂನು ಅಡೆತಡೆಗಳ ನಿವಾರಣೆಗೆ ಮುಂದಾಗಬೇಕ ಎಂದು ಆರೆಸ್ಸೆಸ್‌ ಒತ್ತಾಯಿಸಿದೆ.

ಒಂದೇ ಕಲ್ಲಿಗೆ ಎರಡು ಹಕ್ಕಿ

ಸುಪ್ರೀಂ ನಿರ್ಧಾರ ಸ್ವಾಗತಿಸಿರುವ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌, ''ಸಂಧಾನ ಸಮಿತಿ ಮೂಲಕ ಸಂವಿಧಾನ ಪೀಠವು ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದುರುಳಿಸಿದೆ,'' ಎಂದು ಹೇಳಿದ್ದಾರೆ. ''ನ್ಯಾಯಾಲಯವು ಸಂಧಾನ ಪ್ರಕ್ರಿಯೆಗಳನ್ನು ನಡೆಸಲು ಸಮಿತಿಗೆ ಎಂಟು ವಾರಗಳ ಕಾಲಮಿತಿ ನೀಡಿದೆ. ಅಷ್ಟೊತ್ತಿಗೆ ಸಾರ್ವತ್ರಿಕ ಚುನಾವಣೆಯ ಬಿಸಿ ಒಂದು ಹಂತಕ್ಕೆ ಮುಗಿದಿರುತ್ತದೆ ಎಂದು ನನಗನಿಸುತ್ತದೆ. ಇಲ್ಲಿ ತೀರ್ಪು ಶೀಘ್ರ ಹೊರಬರುವ ಸಾಧ್ಯತೆಗಳಿಲ್ಲದ ಹಿನ್ನೆಲೆಯಲ್ಲಿ ಅದು ಚುನಾವಣೆ ವೇಳೆ ರಾಜಕೀಯ ಪಕ್ಷಗಳಿಗೆ ಅಸ್ತ್ರ ವಾಗುವುದು ತಪ್ಪಲಿದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಸುಪ್ರೀಂ ಕೋರ್ಟ್‌ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದಿದೆ,'' ಎಂದು ಖುರ್ಷಿದ್‌ ಹೇಳಿದ್ದಾರೆ.

ಮೂವರು ಸದಸ್ಯರ ಸಂಧಾನ ಸಮಿತಿ ರಚಿಸುವ ಮೂಲಕ ಸುಪ್ರೀಂ ಕೋರ್ಟ್‌ ದಶಕಗಳಿಂದ ಬಗೆಹರಿಯದೇ ಉಳಿದಿರುವ ಅಯೋಧ್ಯೆ ವಿವಾದ ಇತ್ಯರ್ಥ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ನ್ಯಾಯಾಲಯದ ನಿರ್ಧಾರ ಸ್ವಾಗತಾರ್ಹ ಹಾಗೂ ಪ್ರಶಂಸನೀಯ.

- ಮಾಯಾವತಿ, ಬಿಎಸ್ಪಿ ನಾಯಕಿ


ಸುಪ್ರೀಂ ನಿಲುವನ್ನು ಸ್ವಾಗತಿಸುತ್ತೇನೆ. ಆದರೆ ಅಯೋಧ್ಯೆಯಲ್ಲಿ ಮುಸ್ಲಿಮರು ತಮ್ಮ ಹಕ್ಕುಗಳಿಗೆ ಪಟ್ಟು ಬಿದ್ದರೆ ಭಾರತ ಇನ್ನೊಂದು ಸಿರಿಯಾ ಆದೀತು ಎಂದಿದ್ದ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಸಂಧಾನ ಸಮಿತಿಯಲ್ಲಿರುವುದಕ್ಕೆ ಆಕ್ಷೇಪವಿದೆ. ಇವರ ಬದಲಿಗೆ ತಟಸ್ಥ ಮನೋಭಾವದ ಬೇರೊಬ್ಬ ಸಂಧಾನಕಾರರ ನೇಮಕವಾಗಲಿ.

- ಅಸಾದುದ್ದೀನ್‌ ಓವೈಸಿ, ಎಐಎಂಐಎಂ ಮುಖ್ಯಸ್ಥ


ಅಯೋಧ್ಯೆ ವಿವಾದ ಇತ್ಯರ್ಥ ಕುರಿತು ಈ ಹಿಂದೆ ನಡೆದಿರುವ ಸಂಧಾನ ಪ್ರಕ್ರಿಯೆಗಳು ಬಹುತೇಕ ವಿಫಲವಾಗಿವೆ. ಹೊಸ ಸಮಿತಿ ನಡೆಸಲಿರುವ ಸಂಧಾನ ಯಶಸ್ವಿಯಾಗಲಿ ಎಂಬುದು ನಮ್ಮ ಪಕ್ಷದ ಆಶಯ.

-ಬೃಂದಾ ಕಾರಟ್‌, ಸಿಪಿಐ(ಎಂ) ನಾಯಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ