ಮುಂಬಯಿ: ಪ್ರತಿಯೊಬ್ಬರಿಗೂ ದೇಶ ಮೊದಲು, ಸಿನೆಮಾ, ಕಲಾವಿದರು ಎಲ್ಲವೂ ನಂತರ. ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಕಲಾವಿದರೊಂದಿಗೆ ನಟಿಸುವುದಿಲ್ಲ. ವೇದಿಕೆಯನ್ನೂ ಹಂಚಿಕೊಳ್ಳುವುದಿಲ್ಲ ಎಂದು ಹಿಂದಿ ನಟ ಅಜಯ್ ದೇವಗನ್ ತಿಳಿಸಿದ್ದಾರೆ.
ಉರಿ ಸೇನಾ ಶಿಬಿರದ ಮೇಲೆ ಉಗ್ರ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಲಾವಿದರಿಗೆ ಭಾರತದ ಚಿತ್ರಗಳಲ್ಲಿ ನಟಿಸಲು ಅವಕಾಶ ನೀಡಬೇಕೇ, ಬೇಡವೇ ಎಂಬ ವಿಷಯದಲ್ಲಿ ಹಿಂದಿ ಚಿತ್ರರಂಗ ಇಬ್ಬಾಗವಾಗಿದೆ. ನಿದೇರ್ಶಕ ಕರಣ್ ಜೋಹರ್, ನಟರಾದ ಶಾರೂಖ್ ಖಾನ್, ಸಲ್ಮಾನ್ ಖಾನ್ ಮೊದಲಾದವರು ಪಾಕಿಸ್ತಾನದ ಕಲಾವಿದರ ಪರ ನಿಂತಿದ್ದರೆ, ನಾನಾ ಪಾಟೇಕರ್, ಅಜಯ್ ದೇವಗನ್, ಅವರ ಪತ್ನಿ ಕಾಜೋಲ್, ಹಿರಿಯ ನಟಿ ಹೇಮಮಾಲಿನಿ ಮೊದಲಾದವರು ದೇಶದ ಪರ ನಿಂತಿದ್ದಾರೆ.
ತಮ್ಮ ಶಿವಾಯ್ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ದೇವಗನ್, ''ಪಾಕಿಸ್ತಾನದ ಕಲಾವಿದರಿಂದ ಭಾರತೀಯ ನಟರು ಕಲಿಯುವುದು ಬಹಳಷ್ಟಿದೆ. ಅವರು ಹಣಕ್ಕಾಗಿ ಭಾರತೀಯ ಚಿತ್ರಗಳಲ್ಲಿ ನಟಿಸಿದರೂ, ದೇಶದ ವಿಷಯ ಬಂದಾಗ ಪಾಕ್ ಪರ ನಿಂತಿದ್ದಾರೆ. ಆದರೆ, ನಾವು ಈ ವಿಷಯದಲ್ಲಿ ತಕರಾರು ಮಾಡುತ್ತಿದ್ದೇವೆ. ದೇಶದ ವಿಷಯ ಬಂದಾಗ ಎಲ್ಲಕ್ಕಿಂತಲೂ ಅದೇ ಮೊದಲು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಇದಕ್ಕಾಗಿ ನನ್ನ ಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧಿಸಿದರೂ ಪರವಾಗಿಲ್ಲ,'' ಎಂದು ದೇವಗನ್ ಹೇಳಿದ್ದಾರೆ.
ಪತಿಯ ನಿರ್ಧಾರದಿಂದ ಹೆಮ್ಮೆಯಾಗಿದೆ: ಕಾಜೋಲ್
ಪತಿ ದೇವಗನ್ ನಿರ್ಧಾರದಿಂದ ಹೆಮ್ಮೆಯಾಗಿದೆ. ರಾಜಕೀಯವಲ್ಲದ ಉತ್ತಮ ನಿರ್ಧಾರವೊಂದನ್ನು ನನ್ನ ಪತಿ ತೆಗೆದುಕೊಂಡಿದ್ದಾರೆ ಎಂದು ಅಜಯ್ ದೇವಗನ್ ಅವರ ಪತ್ನಿ, ನಟಿ ಕಾಜೋಲ್ ಹೇಳಿದ್ದಾರೆ.