ಆ್ಯಪ್ನಗರ

ಕರುಣಾನಿಧಿ ಅಂತ್ಯಕ್ರಿಯೆ ವಿವಾದ: ರಾಜ್ಯ ಮೂಲದವರಿಂದ ವಿಚಾರಣೆ

ಮಂಗಳವಾರ ಮೃತಪಟ್ಟ ಡಿಎಂಕೆ ನಾಯಕ ಕರುಣಾನಿಧಿ ಅಂತ್ಯಕ್ರಿಯೆ ವಿವಾದಕ್ಕೆ ಸಂಬಂಧಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಯನ್ನು ನಡೆಸಿಕೊಡಲಿರುವುದು ಕರ್ನಾಟಕ ಮೂಲದ ನ್ಯಾಯಾಧೀಶರು ಎನ್ನುವುದು ವಿಶೇಷ.

Vijaya Karnataka Web 8 Aug 2018, 12:22 am
ಚೆನ್ನೈ: ಮಂಗಳವಾರ ಮೃತಪಟ್ಟ ಡಿಎಂಕೆ ನಾಯಕ ಕರುಣಾನಿಧಿ ಅಂತ್ಯಕ್ರಿಯೆ ವಿವಾದಕ್ಕೆ ಸಂಬಂಧಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಯನ್ನು ನಡೆಸಿಕೊಡಲಿರುವುದು ಕರ್ನಾಟಕ ಮೂಲದ ನ್ಯಾಯಮೂರ್ತಿಗಳು ಎನ್ನುವುದು ವಿಶೇಷ.
Vijaya Karnataka Web karuna


ಮದ್ರಾಸ್‌ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅವರು ಡಿಎಂಕೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲಿದ್ದಾರೆ. ಇಂದಿರಾ ಮುಖರ್ಜಿ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ರಮೇಶ್‌ ಅವರು ಹಂಗಾಮಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮರೀನಾ ಬೀಚ್‌ ಬಳಿಯ ಅಣ್ಣ ಮೆಮೋರಿಯಲ್‌ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರ ನಡೆಸಲು ಪುತ್ರ ಸ್ಟಾಲಿನ್‌ ತಮಿಳುನಾಡು ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಇದಕ್ಕೆ ಸರಕಾರ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ಡಿಎಂಕೆ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶ ಕೋರಿ ಮನವಿ ಸಲ್ಲಿಸಿತ್ತು.

ಅದರಂತೆ ರಾತ್ರಿ 10.30ಕ್ಕೆ ವಿಚಾರಣೆ ನಡೆಸಲು ಸಮಯ ನಿಗದಿಪಡಿಸಲಾಗಿತ್ತು. ಡಿಎಂಕೆ ಅರ್ಜಿ ಕುರಿತಂತೆ ತಮಿಳುನಾಡು ಸರಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್‌ಗಳಾದ ಅರವಿಂದ್ ಪಾಂಡ್ಯನ್ ಮತ್ತು ಎಸ್‌ ಆರ್‌ ರಾಜಗೋಪಾಲ್ ಪ್ರತಿನಿಧಿಸುತ್ತಿದ್ದಾರೆ. ಇಬ್ಬರು ಕೂಡ ರಾತ್ರಿ ಮದ್ರಾಸ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನಿವಾಸಕ್ಕೆ ಆಗಮಿಸಿದ್ದಾರೆ.

ಮುಖ್ಯ ನ್ಯಾಯಾಧೀಶ ಹುಲುವಾಡಿ ಜಿ. ರಮೇಶ್‌ ಅವರು 1981ರಲ್ಲಿ ವಕೀಲಿ ವೃತ್ತಿಯನ್ನು ಮೈಸೂರು ಮತ್ತು ಬೆಂಗಳೂರಿನಲ್ಲಿ ಆರಂಭಿಸಿದ್ದರು. ನಂತರ 1993ರ ಫೆಬ್ರವರಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಹಾಗು 2004ರ ಸೆ.ನಲ್ಲಿ ರಾಜ್ಯ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾದರು. ಬಳಿಕ 2015ರ ಫೆಬ್ರವರಿಯಲ್ಲಿ ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆಗೊಂಡರು. ಬಳಿಕ 2016ರಲ್ಲಿ ಚೆನ್ನೈಗೆ ವರ್ಗಾವಣೆಯಾಗಿತ್ತು. ಇದೀಗ ಕರುಣಾನಿಧಿ ಅಂತ್ಯಸಂಸ್ಕಾರ ಕುರಿತ ವಿವಾದದ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡುವ ಅವಕಾಶ ನ್ಯಾಯಾಧೀಶ ರಮೇಶ್ ಅವರ ಪಾಲಿಗೆ ಲಭಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ