ಆ್ಯಪ್ನಗರ

ಅತೃಪ್ತರ ರಾಜೀನಾಮೆ ಕುರಿತು ನಿರ್ಧಾರ ನಿಮ್ಮದೇ, ಆದರೆ ಕಾಲಮಿತಿಯಲ್ಲಿ ತೀರ್ಪು ಪ್ರಕಟಿಸಿ: ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ಆದೇಶ

ಕರ್ನಾಟಕ ರಾಜಕೀಯ ಬಿಕ್ಕಟ್ಟು ಮಹತ್ವದ ಘಟ್ಟ ತಲುಪಿದೆ. ಅತೃಪ್ತ ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆಗಳ ಕುರಿತು ಕರ್ನಾಟಕದ ವಿಧಾನಸಭೆ ಸ್ಪೀಕರ್ ಕಾಲಮಿತಿಯೊಳಗೆ ತೀರ್ಪು ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Vijaya Karnataka Web 17 Jul 2019, 12:39 pm
ಹೊಸದಿಲ್ಲಿ: ಅತೃಪ್ತ ಶಾಸಕರ ರಾಜೀನಾಮೆ ಕುರಿತು ಕಾಲಮಿತಿಯೊಳಗೆ ತೀರ್ಪು ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನಿರ್ದೇಶನ ನೀಡಿದೆ.
Vijaya Karnataka Web Supreme Court


ರಾಜೀನಾಮೆಗೆ ಕಾರಣ ನೀಡುವಂತೆ ಒತ್ತಾಯಿಸುವಂತಿಲ್ಲ. ಅಧಿವೇಶನಕ್ಕೆ ಭಾಗವಹಿಸಬೇಕೆ ಬೇಡವೆ ಎಂಬುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ನಿರ್ದಿಷ್ಟ ಕಾಲಮಿತಿಯೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದಿರುವ ಕೋರ್ಟ್, ಕಾಲಮಿತಿ ಎಷ್ಟು ಎಂಬುದನ್ನು ನಿಗದಿಪಡಿಸಿಲ್ಲ. ಸಂವಿಧಾನ ಸಮತೋಲನ ಅಗತ್ಯ ಎಂದಿರಿವ ಸುಪ್ರೀಂ ಕೋರ್ಟ್ ರಾಜೀನಾಮೆಗಳ ಕುರಿತು ಸ್ಪೀಕರ್ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶಿಸಿದೆ.

ಎರಡು ವಾಕ್ಯಗಳಲ್ಲಿ ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್‌, ರಾಜೀನಾಮೆ ಬಗ್ಗೆ ಸ್ಪೀಕರ್ ನಿರ್ಧರಿಸಲಿ ಎಂದು ಸೂಚಿಸಿದರು.

ಸುಪ್ರೀಂ ಕೋರ್ಟ್ ನನ್ನ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುತ್ತೇನೆ. ನನಗೆ ಅವರು ಸ್ವೇಚ್ಛಾಚಾರದಿಂದ ನಡೆದುಕೊಳ್ಳುವಂತೆ ಹೇಳಿಲ್ಲ.
ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್‌

ಅತೃಪ್ತ ಶಾಸಕರ ರಾಜೀನಾಮೆ ಕುರಿತು ತೀರ್ಮಾನಿಸುವಲ್ಲಿ ಮನಸೋ ಇಚ್ಚೆ ವಿಳಂಬ ಮಾಡುವ ಉದ್ದೇಶವಿಲ್ಲ. ಶಾಸಕರನ್ನು ವಿಧಾನಸಭೆಗೆ ಹಾಜರಾಗುವಂತೆ ಮಾಡುವುದು ನನ್ನ ಕೆಲಸವಲ್ಲ, ಅದು ಆಯಾ ಪಕ್ಷಗಳ ಕೆಲಸ. ಬಂದ ದಿನಕ್ಕೆ ಹಾಜರಾತಿ ಸಿಗುತ್ತದೆ, ಬಾರದ ದಿನಕ್ಕೆ ಗೈರು ಹಾಜರಿ ಎಂದು ಪರಿಗಣಿಸಲಾಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.


ಸುಪ್ರೀಂ ತೀರ್ಪಿಗೆ ಬಿಜೆಪಿ ಸ್ವಾಗತ

'ನಾನೇನಿದ್ದರೂ ಅಂಪೈರ್ ಅಷ್ಟೇ. ನನ್ನ ಕರ್ತವ್ಯ ನಾನು ಮಾಡುತ್ತೇನೆ. ಸಂವಿಧಾನದ ಚೌಕಟ್ಟು, ನಿಯಮಾವಳಿ ಬಿಟ್ಟು ಒಂದು ಅಂಗುಲವೂ ಕದಲುವುದಿಲ್ಲ. ಸುಪ್ರೀಂ ಕೋರ್ಟ್ ಮಾರ್ಮಿಕವಾಗಿ ಹೇಳಿರುವುದನ್ನು ಗೌರವಿಸಿ ನಡೆದುಕೊಳ್ಳುತ್ತೇನೆ' ಎಂದು ಸ್ಪೀಕರ್ ರಮೇಶ್ ಕುಮಾರ್ ಖಾಸಗಿ ವಾಹಿನಿ ಜತೆ ಮಾತನಾಡುತ್ತ ಸ್ಪಷ್ಟಪಡಿಸಿದರು.

ಸುಪ್ರೀಂ ತೀರ್ಪು ಗೌರವಿಸುವೆ, ಮನಸೋ ಇಚ್ಛೆ ವಿಳಂಬಿಸಲ್ಲ: ಸ್ಪೀಕರ್ ರಮೇಶ್ ಕುಮಾರ್


ಸುಪ್ರೀಂ ಕೋರ್ಟಿನ ತೀರ್ಪಿನ ಅನುಸಾರ, ನಾಳೆ ಸದನಕ್ಕೆ ಹಾಜರಾಗುವಂತೆ ಜಾರಿಗೊಳಿಸಲಾಗುವ ಮೂರು ಸಾಲುಗಳ ವಿಪ್‌ ಬಂಡಾಯ ಶಾಸಕರಿಗೆ ಅನ್ವಯವಾಗುವುದಿಲ್ಲ. ಎರಡನೆಯದಾಗಿ ಸ್ಪೀಕರ್‌ ತಮಗೆ ಸೂಕ್ತವೆನಿಸಿದ ಸಮಯದಲ್ಲಿ ರಾಜೀನಾಮೆಗಳ ಬಗ್ಗೆ ತೀರ್ಮಾನಿಸಬಹುದು.
ಮುಕುಲ್ ರೋಹ್ಟಗಿ, ಅತೃಪ್ತ ಶಾಸಕರ ಪರ ವಕೀಲ

ಹಗ್ಗ ಜಗ್ಗಾಟದಲ್ಲಿ ನಿರತರಾದವರನ್ನು ತೃಪ್ತಿಪಡಿಸುವುದು ನನ್ನ ಕೆಲಸವಲ್ಲ. ನಾಳೆ ಹೇಗೆ ಬೆಳವಣಿಗೆಗಳು ನಡೆಯುತ್ತವೆಯೋ ಇಂದೇ ಊಹಿಸಲು ಸಾಧ್ಯವಿಲ್ಲ. ಚರ್ಚೆ ನಡೆಯಲಿ ಎಂದು ಸದಸ್ಯರು ಹೇಳಿದರೆ ಅವಕಾಶ ನೀಡುತ್ತೇನೆ. ಚರ್ಚೆ ಇಲ್ಲದೆ ವಿಶ್ವಾಸಮತ ಯಾಚನೆ ನಿರ್ಣಯವನ್ನು ಮತಕ್ಕೆ ಹಾಕಿ ಎಂದರೆ ಅದಕ್ಕೂ ಅವಕಾಶ ನೀಡುತ್ತೇನೆ ಎಂದು ರಮೇಶ್ ಕುಮಾರ್ ತಿಳಿಸಿದರು.

ಸುಪ್ರೀಂ ತೀರ್ಪಿನಿಂದ ಅತೃಪ್ತರಿಗೆ 'ಬಿಗ್ ರಿಲೀಫ್

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಅತೃಪ್ತ ಶಾಸಕರಿಗೆ ಪಕ್ಷಗಳ ವಿಪ್ ಅನ್ವಯವಾಗುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ವಿಶ್ವಾಸಮತ ಯಾಚನೆ ಸಂದರ್ಭ ಈ ಶಾಸಕರು ಕಲಾಪಕ್ಕೆ ಹಾಜರಾಗಬೇಕು ಎಂದು ಯಾರೂ ಒತ್ತಡ ಹೇರುವಂತಿಲ್ಲ. ಹಾಜರಾಗುವುದು ಅವರ ವಿವೇಚನೆ ಬಿಟ್ಟ ವಿಷಯ ಎಂದು ಕೋರ್ಟ್ ತಿಳಿಸಿದೆ.

ಕಾಂಗ್ರೆಸ್ ಬಂಡಾಯ ಶಾಸಕರಿಗೆ ವಿಪ್ ಜಾರಿ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಯಾವುದೇ ಪ್ರಸ್ತಾಪ ಮಾಡಿಲ್ಲ. ಶಾಸಕರ ಅನರ್ಹತೆ ವಿಷಯ ಸಂಪೂರ್ಣ ಭಿನ್ನವಾಗಿದ್ದು, ಈ ಪ್ರಕರಣದಲ್ಲಿ ಅದು ಅನ್ವಯವಾಗುವುದಿಲ್ಲ.
ಸಚಿವ ಡಿ.ಕೆ ಶಿವಕುಮಾರ್‌

ಸುಪ್ರೀಂ ತೀರ್ಪಿಗೆ ಬಿಜೆಪಿ ಸ್ವಾಗತ:
ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಗೆಲುವು. ನಾಳೆ ಸಮ್ಮಿಶ್ರ ಸರಕಾರ ರಾಜೀನಾಮೆ ನೀಡಲೇಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ವಿಶ್ವಾಸಮತ ಯಾಚನೆಗೆ ಅತೃಪ್ತ ಶಾಸಕರು ಭಾಗವಹಿಸುವುದು ಕಡ್ಡಾಯವಲ್ಲ ಎಂದು ಕೋರ್ಟ್ ಹೇಳಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಪತನ ಖಚಿತ. ಬಿಜೆಪಿಗೆ ಪೂರ್ಣ ‌ಬಹುಮತ ಇದೆ. ಕುಮಾರಸ್ವಾಮಿ ರಾಜೀನಾಮೆ ‌ನೀಡಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

ಸುಪ್ರೀಂಕೋರ್ಟ್ ತೀರ್ಪು ಗೌರವಿಸಿ ಕುಮಾರಸ್ವಾಮಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ‌ನೀಡಬೇಕು ಎಂದು ಬಿಜೆಪಿ ನಾಯಕ ವಿ.ಸೋಮಣ್ಣ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ