ಆ್ಯಪ್ನಗರ

ದಿಶಾ ಅತ್ಯಾಚಾರಿಗಳ ಎನ್ಕೌಂಟರನ್ನು ದೇಶವೇ ಕೊಂಡಾಡುತ್ತಿದ್ದರೆ ಕಾರ್ತಿ ಚಿದಂಬರಂ ಅಪಸ್ವರ!

ಬರ್ಬರವಾಗಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದ ಪಶುವೈದ್ಯೆ ದಿಶಾಳ ಮೇಲೆ ಹೇಯ ಕೃತ್ಯ ಎಸಗಿದವರನ್ನು ಎನ್ಕೌಂಟರ್ ಮಾಡಿದ್ದನ್ನು ಇಡೀ ದೇಶವೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದರೆ, ಕಾರ್ತಿ ಚಿದಂಬರಂ ಅವರು ಕಟುವಾಗಿ ಟೀಕಿಸಿದ್ದಾರೆ.

Vijaya Karnataka Web 6 Dec 2019, 3:50 pm
ಚೆನ್ನೈ : ತೆಲಂಗಾಣದ ದಿಶಾ ಅತ್ಯಾಚಾರಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ಇಡೀ ದೇಶದ ಜನತೆ ಕೊಂಡಾಡುತ್ತಿರುವಾಗ, ಎಐಸಿಸಿ ಸದಸ್ಯ, ಶಿವಗಂಗಾ ಸಂಸದ ಕಾರ್ತಿ ಚಿದಂಬರಂ ಅವರು ಎನ್ ಕೌಂಟರ್ ಅನ್ನು ತೀವ್ರವಾಗಿ ಟೀಕಿಸಿದ್ದಾರೆ.
Vijaya Karnataka Web ಕಾರ್ತಿ ಚಿದಂಬರಂ


ಈ ಕುರಿತು ಅವರು ಟ್ವೀಟ್ ಮಾಡಿದ್ದು, "ಅತ್ಯಾಚಾರ ಮಾಡುವುದು ಅತ್ಯಂತ ಹೇಯ ಕೃತ್ಯ. ಕಾನೂನಿನ ಚೌಕಟ್ಟಿನಲ್ಲಿ ಇಂಥವರ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಬೇಕು. ಅತ್ಯಾಚಾರದಂಥ ಹೇಯ ಕೃತ್ಯ ಮಾಡಿದವರನ್ನು ನಾನು ಬೆಂಬಲಿಸದಿದ್ದರೂ ಎನ್ ಕೌಂಟರ್ ಮೂಲಕ ಅವರನ್ನು ಹತ್ಯೆ ಮಾಡುವುದು ಸಮಾಜಕ್ಕೆ ಅಂಟಿದ ಕಳಂಕ. ಅನ್ಯಾಯಕ್ಕೊಳಗಾದವರಿಗೆ ತ್ವರಿತಗತಿಯಲ್ಲಿ ನ್ಯಾಯ ದೊರಕಿಸಿಕೊಡಬೇಕಾಗಿರುವುದು ನಿಜವಾದರೂ ಈ ರೀತಿ (ಎನ್ ಕೌಂಟರ್) ರೀತಿ ಬೇಕಾಗಿಲ್ಲ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಈ ಅಭಿಪ್ರಾಯಕ್ಕೆ ಟ್ವಿಟ್ಟರ್ ನಲ್ಲಿ ವ್ಯತಿರಿಕ್ತ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. "ಕ್ಷಮಿಸಿ ಬ್ರದರ್, ಅಮಾಯಕರಿಗೆ ಅನ್ಯಾಯವಾಗದಂತೆ ಅತ್ಯಾಚಾರಿಗಳನ್ನು ಹತ್ಯೆಗೈಯುವುದೇ ನಿಜವಾದ ದಾರಿ. ಅತ್ಯಾಚಾರಿಗಳ ಎನ್ಕೌಂಟರ್ ನಂತರ ಭ್ರಷ್ಟ ರಾಜಕಾರಣಿಗಳನ್ನು ಇದೇ ರೀತಿ ಎನ್ ಕೌಂಟರ್ ಮಾಡಬೇಕು. ಒಂದಿಬ್ಬರಿಗೆ ಇದೇ ರೀತಿ ಗತಿ ಕಾಣಿಸಿದರೆ, ರಾಜಕೀಯದಲ್ಲಿ ತಾನಾಗಿಯೇ ಬದಲಾವಣೆ ಬರುತ್ತದೆ" ಎಂದು ಟ್ವಿಟ್ಟಿಗರೊಬ್ಬರು ತಿರುಗೇಟು ನೀಡಿದ್ದಾರೆ.

ಹೈದರಾಬಾದ್ ದಿಶಾ ಅತ್ಯಾಚಾರಿಗಳ ಎನ್‌ಕೌಂಟರ್ ಸ್ಪೆಷಲಿಸ್ಟ್ ಹುಬ್ಬಳ್ಳಿ ಕನ್ನಡಿಗ

ಹಿರಿಯ ವಕೀಲೆಯಿಂದ ಟೀಕಾಪ್ರಹಾರ : ವೃಂದಾ ಗ್ರೋವರ್ ಎಂಬ ಹಿರಿಯ ನ್ಯಾಯವಾದಿ ಕೂಡ ಈ ಎನ್ ಕೌಂಟರ್ ಅನ್ನು ಟೀಕಿಸಿದ್ದಾರೆ. "ಇದು ಸರ್ವಥಾ ಒಪ್ಪುವಂಥದ್ದಲ್ಲ. ಇಂಥ ಕ್ರಮವನ್ನೇ ಎಲ್ಲ ರಾಜ್ಯಗಳೂ ಪಾಲಿಸುತ್ತವೆ. ಪ್ರತಿಬಾರಿ ಎನ್ ಕೌಂಟರ್ ಆದಾಗ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಬೇಕು, ವಿಚಾರಣೆ ಮತ್ತು ಸ್ವತಂತ್ರವಾಗಿ ನ್ಯಾಯಾಂಗ ವಿಚಾರಣೆಯನ್ನೂ ನಡೆಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವೇ ಹೇಳಿದೆ. ಮಹಿಳೆಯ ಹೆಸರಿನಲ್ಲಿ ಯಾವುದೇ ಎನ್ ಕೌಂಟರ್ ಆಗಬಾರದು" ಎಂದು ಅವರು ತಿಳಿಸಿದ್ದಾರೆ.


ಗೋಪಾಲ್ ಹೊಸೂರ್ ಹೇಳುವುದೇನು? : ಕರ್ನಾಟಕದ ಮಾಜಿ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರ್ ಅವರು ಟಿವಿ ವಾಹಿನಿಯೊಂದಿಗೆ ಮಾತನಾಡುತ್ತ, ಎನ್ಕೌಂಟರ್ ನಡೆದಾಗ ಎಫ್ಐಆರ್ ದಾಖಲಿಸಲಾಗುತ್ತದೆ, ಇದರಲ್ಲಿ ಭಾಗಿಯಾದವರನ್ನು ವಿಚಾರಣೆಗೆ ಗುರಿಪಡಿಸಲಾಗುತ್ತದೆ, ನ್ಯಾಯಾಂಗ ವಿಚಾರಣೆ ನಡೆಸಲಾಗುತ್ತದೆ, ಬಳಸಿದ ಶಸ್ತ್ರಾಸ್ತ್ರಗಳನ್ನು ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ, ಸಾಕ್ಷಿಗಳ ವಿಚಾರಣೆ ನಡೆಸಲಾಗುತ್ತದೆ, ನಂತರವೇ ಎನ್ ಕೌಂಟರ್ ನ ಸತ್ಯಾಸತ್ಯತೆ ಬಗ್ಗೆ ತಿಳಿಯುತ್ತದೆ ಎಂದು ತಿಳಿಸಿದ್ದಾರೆ.

ಪಶುವೈದ್ಯೆಯನ್ನು ಹತ್ಯೆ ಮಾಡಿದ ಜಾಗದಲ್ಲೇ ಎಲ್ಲ ನಾಲ್ವರು ಆರೋಪಿಗಳ ಎನ್‌ಕೌಂಟರ್‌!

ಈ ಎನ್ ಕೌಂಟರ್ ನಲ್ಲಿ ಭಾಗಿಯಾಗಿರುವುದು, ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಗಳಿಸಿರುವ, ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್ ಅವರು. ಅವರು ಹುಬ್ಬಳ್ಳಿಯ ಜೆಜಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಸಜ್ಜನರ್ ಅವರು ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಇಡೀ ದೇಶದ ಜನರು ಕೊಂಡಾಡುತ್ತಿದ್ದಾರೆ, ಅವರು ಮಾಡಿದ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ಮಗ ಕಾರ್ತಿ ನಂತರ ಅಪ್ಪ ಚಿದಂಬರಂ ಅವರಿಂದಲೂ ಎನ್ಕೌಂಟರ್ ಗೆ ಅಪಸ್ವರ

ಬೆಳಿಗ್ಗೆ 3.30ಕ್ಕೆ ಆಗಿದ್ದೇನು? : ಆಗಿದ್ದೇನೆಂದರೆ, ಅತ್ಯಾಚಾರ ನಡೆದ ಸ್ಥಳಕ್ಕೆ ನಾಲ್ವರು ಅತ್ಯಾಚಾರಿಗಳಾದ ಮೊಹಮ್ಮದ್ (26), ಜೊಲ್ಲು ಶಿವ (20), ಜೊಲ್ಲು ನವೀನ್ (20) ಮತ್ತು ಚಿಂತಕುಂಟ ಚನ್ನಕೇಶವಲು (20) ರನ್ನು, ಘಟನೆಯ ಮರುಸೃಷ್ಟಿಗಾಗಿ ಕರೆದೊಯ್ಯುತ್ತಿದ್ದಾಗ ಅತ್ಯಾಚಾರಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ನಾಲ್ವರನ್ನೂ ಎನ್ ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ.

ಈ ನಾಲ್ವರು ಪಶುವೈದ್ಯೆ ದಿಶಾಳನ್ನು ಅಪಹರಿಸಿ, ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಲ್ಲದೆ, ಹೈದರಾಬಾದ್ ನಿಂದ 60 ಕಿ.ಮೀ. ದೂರದ ಪ್ರದೇಶದಲ್ಲಿ ಜೀವಂತ ಸುಟ್ಟುಹಾಕಿದ್ದರು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ದಿಶಾಳ ವಾಹನದ ಪಂಕ್ಚರ್ ಹಾಕಿದ್ದ ಮೆಕ್ಯಾನಿಕ್ ವಿಚಾರಣೆಯಿಂದ ಅತ್ಯಾಚಾರಿಗಳು ಎರಡು ದಿನಗಳ ನಂತರ ಸಿಕ್ಕಿಬಿದ್ದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ