ಆ್ಯಪ್ನಗರ

ಶಬರಿಮಲೆಗೆ ಮಹಿಳೆಯರ ಪ್ರವೇಶ: ಕಾಸರಗೋಡು ಜಿಲ್ಲೆಯಲ್ಲಿ ಹರತಾಳ ಪೂರ್ಣ, ಪ್ರತಿಭಟನೆ, ಇರಿತ, ಅಶ್ರುವಾಯು ಪ್ರಯೋಗ

ಶಬರಿಮಲೆ ಸನ್ನಿದಾನಕ್ಕೆ ಮಹಿಳೆಯರ ಪ್ರವೇಶದ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆ ಕಾಸರಗೋಡಿನಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಕಾಸರಗೋಡುನಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

Vijaya Karnataka Web 3 Jan 2019, 4:31 pm
ಕಾಸರಗೋಡು: ಶಬರಿಮಲೆ ಸನ್ನಿದಾನಕ್ಕೆ ಯುವತಿ ಪ್ರವೇಶದ ಹಿನ್ನೆಲೆಯಲ್ಲಿ ಗುರುವಾರ ಅಯ್ಯಪ್ಪ ಕರ್ಮ ಸಮಿತಿ ಬಿಜೆಪಿ ಬೆಂಬಲದೊಂದಿಗೆ ಆಹ್ವಾನ ನೀಡಿದ ಪ್ರತಿಭಟನೆ ಸಂಪೂರ್ಣ ಯಶಸ್ವಿಯಾಗಿದೆ.
Vijaya Karnataka Web ಪ್ರತಿಭಟನೆ ಜಾಥಾ
ಪ್ರತಿಭಟನೆ ಜಾಥಾ


ಹರತಾಳದಿಂದಾಗಿ ಕೆಎಸ್ಸಾರ್ಟಿಸಿ-ಖಾಸಗಿ ವಾಹನಗಳು ರಸ್ತೆಗಿಳಿಯಲಿಲ್ಲ. ಅಂಗಡಿ ಮುಗ್ಗಟ್ಟುಗಳು ಮುಚ್ಚಿಗೊಂಡಿತ್ತು. ಅಯ್ಯಪ್ಪ ಕರ್ಮ ಸಮಿತಿ ಹಾಗೂ ಬಿಜೆಪಿ ಸಂಘಪರಿವಾರದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನಾ ಜಾಥಾ ನಡೆಯಿತು. ಜಾಥಾಕ್ಕೆ ಅಯ್ಯಪ್ಪ ಕರ್ಮ ಸಮಿತಿ ಹಾಗೂ ಬಿಜೆಪಿ ನೇತಾರರು ನೇತೃತ್ವ ವಹಿಸಿದ್ದರು.

ಈ ಮಧ್ಯೆ ಮೀಪುಗುರಿ ಪಾರೆಕಟ್ಟಾ ನಿವಾಸಿ ಬಿಜೆಪಿ ಮಾಜಿ ನಗರಸಭೆ ಕೌನ್ಸಿಲರ್ ಗಣೇಶ (60) ಎಂಬವರಿಗೆ ನುಳ್ಳಿಪ್ಪಾಡಿಯಲ್ಲಿ ಬೈಕ್‌ನಲ್ಲಿ ಬಂದ ಸಿಪಿಎಂನ ಕಾರ್ಯಕರ್ತರು ಇರಿದು ಗಾಯಗೊಳಿಸಿದ್ದಾರೆ.

ಇವರನ್ನು ನಗರದ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೈಕ್‌ನಲ್ಲಿ ಬಂದ ಇಬ್ಬರು ಸಿಪಿಎಂ ಕಾರ್ಯಕರ್ತರು ನುಳ್ಳಿಪ್ಪಾಡಿಯಲ್ಲಿ ಗಣೇಶ ಅವರನ್ನು ಹೊಡೆದು ಉರುಳಿಸಿ ಬಳಿಕ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಅವರ ಕೈಗಳಿಗೆ ಗಾಯಗಳಾಗಿವೆ.

ಜಿಲ್ಲೆಯ ವಿವಿಧ ನಗರಗಳಲ್ಲಿ ಕರ್ಮ ಸಮಿತಿ ನೇತೃತ್ವದಲ್ಲಿ ವಾಹನ ತಡೆಯಲಾಯಿತು. ಈ ಸಂದರ್ಭದಲ್ಲಿ ಕರ್ಮಸಮಿತಿ ಕಾರ್ಯಕರ್ತರ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಕಾರ್ಯಕರ್ತರನ್ನು ಚದುರಿಸಲು ಅಶ್ರುವಾಯು ಪ್ರಯೋಗ ನಡೆಸಲಾಗಿದೆ.

ನಾನಾ ಕಡೆಗಳಲ್ಲಿ ರಸ್ತೆಯಲ್ಲಿ ಕಲ್ಲು, ಟೈಯರ್‌ಗೆ ಬೆಂಕಿ ಹಾಕಿ ಪ್ರತಿಭಟನೆ ನಡೆಯಿತು. ರಸ್ತೆ ತಡೆ ನಡೆಸಿದ ಹಲವಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬದಿಯಡ್ಕದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಬದಿಯಡ್ಕದಲ್ಲಿನ ಡಿವೈಎಸ್ಪಿ ಕಚೇರಿಗೆ ಕಪ್ಪು ಮಸೆ ಹಾಕಲಾಗಿದೆ. ಅದೇ ರೀತಿಯಲ್ಲಿ ನೀಲೇಶ್ವರ ಬಳಿಯ ಬಿಜೆಪಿ ಕಚೇರಿಯನ್ನು ಸಿಪಿಎಂ ಕಾರ್ಯಕರ್ತರು ಹಾನಿಗೊಳಿಸಿದ್ದಾರೆ. ವಿಎಚ್‌ಪಿ ಜಿಲ್ಲಾ ಧರ್ಮ ಪ್ರಚಾರ್ ಪ್ರಮುಖ್ ಕೆ.ಜಯಕುಮಾರ್ ಅವರ ಬೇಕಲ ಪಳ್ಳಿಕೆರೆಯ ಮನೆಯ ಮುಂದೆ ರೀತ್ ಇಟ್ಟು ಅಸಹ್ಯಯವಾಗಿ ಬರೆದು ಹಾಕಲಾಗಿದೆ. ಇದು ಸಿಪಿಎಂ ಕಾರ್ಯಕರ್ತರ ಕೆಲಸವಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಈ ಬಗ್ಗೆ ಬೇಕಲ ಪೊಲೀಸರಿಗೆ ದೂರು ನೀಡಲಾಗಿದೆ. ಜಿಲ್ಲೆಯ ವಿವಿಧೆಡೆ ಅಲ್ಲಲ್ಲಿ ಕಲ್ಲು, ಟೈಯರ್‌ಗಳಿಗೆ ಬೆಂಕಿ ಹಾಕಿದ ಕಾರಣ ಖಾಸಗಿ ವಾಹನಗಳ ಸಂಚಾರವೂ ಸಾಧ್ಯವಾಗಲಿಲ್ಲ. ದ್ವಿಚಕ್ರ ವಾಹನಗಳ ಸಂಚಾರ ವಿರಳವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ