ಆ್ಯಪ್ನಗರ

ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ: ಟರ್ಕಿಗೆ ಭಾರತ ತಾಕೀತು

ಪಾಕಿಸ್ತಾನ ಪ್ರಚೋದಿತ ಭಯೋತ್ಪಾದನೆಯಿಂದಾಗಿ ಜಮ್ಮು- ಕಾಶ್ಮೀರದಲ್ಲಿ ನೆಲೆಸಿರುವ ಗಂಭೀರ ಅಪಾಯದ ಸ್ಥಿತಿಯನ್ನು ಟರ್ಕಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಾರವಾಗಿ ಹೇಳಿದೆ.

Vijaya Karnataka Web 16 Feb 2020, 7:14 am
ಹೊಸದಿಲ್ಲಿ: ಪಾಕಿಸ್ತಾನ ಸಂಸತ್ತಿನಲ್ಲಿ ಭಾಷಣದ ವೇಳೆ ಜಮ್ಮು-ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿರುವ ಟರ್ಕಿ ಅಧ್ಯಕ್ಷ ರೆಸಿಪ್‌ ತಯಿಪ್‌ ಎರ್ಡೋಗಾನ್‌ ಅವರನ್ನು ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಭಾರತದ ಆಂತರಿಕ ವಿಷಯದಲ್ಲಿ ಟರ್ಕಿ ನಾಯಕರು ಮೂಗು ತೂರಿಸುವ ಅಗತ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಾರವಾಗಿ ಹೇಳಿದೆ.
Vijaya Karnataka Web Kashmir


ಜಮ್ಮು ಮತ್ತು ಕಾಶ್ಮೀರದ ಕುರಿತು ಅವರು ನೀಡಿರುವ ಎಲ್ಲಾ ಹೇಳಿಕೆಗಳನ್ನು ಭಾರತ ಸಾರಾಸಗಟಾಗಿ ತಳ್ಳಿ ಹಾಕುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಶನಿವಾರ ತಿಳಿಸಿದ್ದಾರೆ. ''ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಅದನ್ನು ಎಂದಿಗೂ ಬೇರ್ಪಡಿಸಲಾಗದು. ಟರ್ಕಿ ಅಧ್ಯಕ್ಷರು ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಪಾಕಿಸ್ತಾನ ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಪಾಕಿಸ್ತಾನ ಪ್ರಚೋದಿತ ಭಯೋತ್ಪಾದನೆಯಿಂದಾಗಿ ಜಮ್ಮು- ಕಾಶ್ಮೀರದಲ್ಲಿ ನೆಲೆಸಿರುವ ಗಂಭೀರ ಅಪಾಯದ ಸ್ಥಿತಿಯನ್ನು ಟರ್ಕಿ ನಾಯಕರು ಅರ್ಥ ಮಾಡಿಕೊಳ್ಳಬೇಕು,'' ಎಂದು ಅವರು ಕಿಡಿಕಾರಿದ್ದಾರೆ.

ಟರ್ಕಿ ಅಧ್ಯಕ್ಷರು ಶುಕ್ರವಾರ ಪಾಕಿಸ್ತಾನದ ಸಂಸತ್ತಿನಲ್ಲಿ ಭಾಷಣದ ವೇಳೆ ಜಮ್ಮು-ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದರು. ''ಜಮ್ಮು-ಕಾಶ್ಮೀರದ ಜನತೆಯ ಸ್ಥಿತಿಯನ್ನು ಮೊದಲನೇ ಮಹಾಯುದ್ಧದ ವೇಳೆ ವಿದೇಶಿ ಆಕ್ರಮಣದಿಂದ ಟರ್ಕಿ ಜನತೆ ಅನುಭವಿಸಿದ ಸಂಕಷ್ಟದ ಸ್ಥಿತಿ ಅನುಭವಿಸುತ್ತಿದ್ದಾರೆ. ಕಾಶ್ಮೀರದ ಜನರು ಹಲವು ದಶಕಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಕೈಗೊಂಡ ಕೆಲವು ಏಕಪಕ್ಷೀಯ ಕ್ರಮಗಳಿಂದಾಗಿ ಅವರ ದುಸ್ಥಿತಿ ಮತ್ತಷ್ಟು ಹೆಚ್ಚಿದೆ,'' ಎಂದು ಹೇಳಿದ್ದರು.

370ನೇ ವಿಧಿ ರದ್ದು ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಟರ್ಕಿ ಅಧ್ಯಕ್ಷರು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲೂ ಪ್ರಸ್ತಾಪಿಸಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು.

ಸರಳವಾಗಿ ಬಗೆಹರಿಯಬೇಕಿದ್ದ ಕಾಶ್ಮೀರ ಸಮಸ್ಯೆ ಜಟಿಲವಾಗಿದ್ದು ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ