ಆ್ಯಪ್ನಗರ

ಕಾಶ್ಮೀರಿ ಉಗ್ರರಿಗೆ ಈಗ ಮುಸ್ಲಿಮರೇ ಟಾರ್ಗೆಟ್‌

ಕಾಶ್ಮೀರ ಕಣಿವೆಯಲ್ಲಿ ಈದ್‌ ಪ್ರಾರ್ಥನೆಗೆಂದು ಭದ್ರತೆಯಲ್ಲಿ ತೋರಿಸಿದ ಅಲ್ಪ ಸಡಿಲಿಕೆಯನ್ನೇ ದುರ್ಬಳಕೆ ಮಾಡಿಕೊಂಡ ಉಗ್ರಗಾಮಿಗಳು ಬುಧವಾರ ಇಬ್ಬರು ಪೊಲೀಸ್‌ ಅಧಿಕಾರಿಗಳು ಮತ್ತು ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಕೊಂದು ಹಾಕಿದ್ದಾರೆ.

Vijaya Karnataka 23 Aug 2018, 7:22 am
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಈದ್‌ ಪ್ರಾರ್ಥನೆಗೆಂದು ಭದ್ರತೆಯಲ್ಲಿ ತೋರಿಸಿದ ಅಲ್ಪ ಸಡಿಲಿಕೆಯನ್ನೇ ದುರ್ಬಳಕೆ ಮಾಡಿಕೊಂಡ ಉಗ್ರಗಾಮಿಗಳು ಬುಧವಾರ ಇಬ್ಬರು ಪೊಲೀಸ್‌ ಅಧಿಕಾರಿಗಳು ಮತ್ತು ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಕೊಂದು ಹಾಕಿದ್ದಾರೆ. ಇವರೆಲ್ಲರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಕಾಶ್ಮೀರದಲ್ಲಿ ಈಗ ದೇಶಸೇವೆಯಲ್ಲಿ ತೊಡಗಿಕೊಂಡಿರುವ ಮತ್ತು ಬಿಜೆಪಿ ಜತೆ ಸಂಪರ್ಕ ಹೊಂದಿರುವ ಮುಸ್ಲಿಮರನ್ನು ಗುರಿಯಾಗಿಟ್ಟು ದಾಳಿ ಹೆಚ್ಚುತ್ತಿರುವುದಕ್ಕೆ ನಿದರ್ಶನವಾಗಿದೆ. ಇದು ಉಗ್ರರ ಆಟಕ್ಕೆ ತಿರುಗೇಟು ನೀಡುವ ದೇಶಭಕ್ತರಲ್ಲಿ ಭಯ ಹುಟ್ಟಿಸುವ ತಂತ್ರವೆಂದು ವಿಶ್ಲೇಷಿಸಲಾಗಿದೆ.
Vijaya Karnataka Web kashmir attack


ಪ್ರಾರ್ಥನೆ ಸಲ್ಲಿಸಿ ಮರಳುತ್ತಿದ್ದ ವೇಳೆ ಕುಲ್ಗಾಂವ್‌ನಲ್ಲಿ ಈದ್‌ ಪ್ರಾರ್ಥನೆ ಸಲ್ಲಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್‌ ಅಧಿಕಾರಿ ಫಯಾಜ್‌ ಅಹ್ಮದ್‌ (34), ಪುಲ್ವಾಮಾದಲ್ಲಿ ಮೊಹಮ್ಮದ್‌ ಯಾಕೂಬ್‌ ಶಾ ಮತ್ತು ಬಿಜೆಪಿ ಕಾರ್ಯಕರ್ತ ಶಬ್ಬೀರ್‌ ಅಹ್ಮದ್‌ ಭಟ್‌ ಬುಧವಾರ ಹತ್ಯೆಯಾದವರು. ಜತೆಗೆ, ಈದ್‌ ಪ್ರಾರ್ಥನೆಗೆ ಹೋಗಿದ್ದ ಸಾಮಾನ್ಯ ಮುಸ್ಲಿಮರ ಮೇಲೂ ದಾಳಿ ನಡೆದಿದೆ.

ಬಿಜೆಪಿಯೂ ಟಾರ್ಗೆಟ್‌

ಕಣಿವೆ ರಾಜ್ಯದಲ್ಲಿ ಬಿಜೆಪಿ ನಾಯಕರನ್ನೂ ಉಗ್ರರು ಟಾರ್ಗೆಟ್‌ ಮಾಡುತ್ತಿದ್ದಾರೆ. 2018ರಲ್ಲಿ ನಾಲ್ಕು ದಾಳಿಗಳು ನಡೆದಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಏಪ್ರಿಲ್‌ 25ರಂದು ಬಿಜೆಪಿ ಮುಖಂಡ ಗುಲಾಂ ನಬಿ ಪಟೇಲ್‌ ಅವರನ್ನು ಕೊಲ್ಲಲಾಗಿತ್ತು. 2012ರಿಂದಲೇ ಈ ದಾಳಿಗಳು ನಡೆಯುತ್ತಿದ್ದು, 2012ರಲ್ಲಿ ದೋಡಾದಲ್ಲಿ ಬಿಜೆಪಿ ರಾರ‍ಯಲಿ ಮೇಲೆ ದಾಳಿ ನಡೆದರೆ, 2017ರಲ್ಲಿ ಶ್ರೀನಗರದ ಬಿಜೆಪಿ ಕಚೇರಿಯಲ್ಲೇ ಸ್ಫೋಟ ಸಂಭವಿಸಿತ್ತು.

ಔರಂಗಜೇಬ್‌, ಫಯಾಜ್‌ ನೆನಪು

ಇದೇ ವರ್ಷದ ಜೂನ್‌ 15ರಂದು ಪುಲ್ವಾಮಾದಲ್ಲಿ ರೈಫಲ್‌ಮ್ಯಾನ್‌ ಔರಂಗಜೇಬ್‌ ಅವರನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ಈದ್‌ ಉಲ್‌ ಫಿತ್ರ್‌ ಹಬ್ಬಕ್ಕೆ ರಜೆಯಲ್ಲಿ ಬಂದಿದ್ದ ಔರಂಗಜೇಬ್‌ ಅವರ ಜರ್ಜರಿತ ದೇಹ ಅಪಹರಣವಾದ ಸ್ಥಳದಿಂದ 10 ಕಿ.ಮೀ. ದೂರದಲ್ಲಿ ಪತ್ತೆಯಾಗಿತ್ತು.

2017ರ ಮೇ ತಿಂಗಳಲ್ಲಿ ಬಂಧುಗಳ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ, 22 ವರ್ಷದ ಲೆಫ್ಟಿನೆಂಟ್‌ ಉಮರ್‌ ಫಯಾಜ್‌ ಅವರನ್ನು ಅಪಹರಿಸಿ ಕೊಲ್ಲಲಾಗಿತ್ತು. ಅವರ ಶವವನ್ನೂ ಕತ್ತರಿಸಿ ಎಸೆಯುವ ಮೂಲಕ ಉಗ್ರರು ಕ್ರೌರ್ಯ ಮೆರೆದಿದ್ದರು. ಉಗ್ರರ ವಿರುದ್ಧ ಗಟ್ಟಿ ಹೋರಾಟ ನಡೆಸಿದ್ದ ಸ್ಥಳೀಯರಾದ ಯೋಧರು ರಜೆಗೆ ಬಂದ ಸಂದರ್ಭವನ್ನೇ ಬಳಸಿಕೊಂಡು ಉಗ್ರರು ಇಂಥ ಕೃತ್ಯ ನಡೆಸುತ್ತಿರುವುದು ಸ್ಪಷ್ಟವಾಗಿದೆ.

ಶೂಜಾತ್‌ ಬುಖಾರಿ ಕೊಲೆ

ಉಗ್ರ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಿದ 'ರೈಸಿಂಗ್‌ ಕಾಶ್ಮೀರ್‌' ಪತ್ರಿಕೆ ಸಂಪಾದಕ ಶೂಜಾತ್‌ ಬುಖಾರಿ ಅವರನ್ನು ಜೂನ್‌ 15ರಂದು ಅವರ ಕಚೇರಿಯಲ್ಲೇ ಉಗ್ರರು ಗುಂಡಿಕ್ಕಿ ಸಾಯಿಸಿದ್ದರು.

ಯಾಕೆ ಟಾರ್ಗೆಟ್‌?

- ಭದ್ರತಾ ಪಡೆ, ಪೊಲೀಸ್‌ ಇಲಾಖೆಯಲ್ಲಿ ಸೇರಿ ಸ್ಥಳೀಯ ಉಗ್ರ ಚಟುವಟಿಕೆಗಳನ್ನು ದಮನಿಸುತ್ತಾರೆ ಎಂಬ ಸಿಟ್ಟು.

- ಸೇನೆ, ಪೊಲೀಸರ ಜತೆ ಸೇರುವವರಿಗೆ ಎಚ್ಚರಿಕೆ ನೀಡಿ ಭಯ ಹುಟ್ಟಿಸುವ ತಂತ್ರ

-ಸಾರ್ವಜನಿಕರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಹುನ್ನಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ