ಆ್ಯಪ್ನಗರ

ವ್ಯಾಟಿಕನ್‌ ತಲುಪಿದ ಲೈಂಗಿಕ ಹಗರಣ: ಬಿಷಪ್‌ ವಿರುದ್ಧ ದೂರು

ಅತ್ಯಾಚಾರ ಆರೋಪ ಎದುರಿಸುತ್ತಿರುವ ರೋಮನ್‌ ಕ್ಯಾಥೋಲಿಕ್‌ ಪಾದ್ರಿ ವಿರುದ್ಧ ಸಂತ್ರಸ್ತ ಸನ್ಯಾಸಿನಿ ಭಾರತದಲ್ಲಿನ ವ್ಯಾಟಿಕನ್‌ ಪ್ರತಿನಿಧಿಗೆ ದೂರು ನೀಡಿದ್ದು, ಧರ್ಮ ರಕ್ಷಣೆ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ತಮ್ಮ ‘ರಾಜಕೀಯ ಪ್ರಭಾವ ಮತ್ತು ಹಣಬಲ’ ಬಳಸಿ ದಬ್ಬಾಳಿಕೆ ಮೆರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka 12 Sep 2018, 11:53 am
ಕೊಟ್ಟಾಯಂ /ಕೊಚ್ಚಿ: ಅತ್ಯಾಚಾರ ಆರೋಪ ಎದುರಿಸುತ್ತಿರುವ ರೋಮನ್‌ ಕ್ಯಾಥೋಲಿಕ್‌ ಪಾದ್ರಿ ವಿರುದ್ಧ ಸಂತ್ರಸ್ತ ಸನ್ಯಾಸಿನಿ ಭಾರತದಲ್ಲಿನ ವ್ಯಾಟಿಕನ್‌ ಪ್ರತಿನಿಧಿಗೆ ದೂರು ನೀಡಿದ್ದು, ಧರ್ಮ ರಕ್ಷಣೆ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ತಮ್ಮ ‘ರಾಜಕೀಯ ಪ್ರಭಾವ ಮತ್ತು ಹಣಬಲ’ ಬಳಸಿ ದಬ್ಬಾಳಿಕೆ ಮೆರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web kerala nuns protest


ಧರ್ಮದ ಹೆಸರಲ್ಲಿ ಅನಾಚಾರ ನಡೆಸುತ್ತಿರುವ ವ್ಯಕ್ತಿಯನ್ನು ದಂಡಿಸುವ ಅಗತ್ಯ ಇದ್ದು ಅವರನ್ನು ಬಿಷಪ್‌ ಸ್ಥಾನದಿಂದ ತುರ್ತಾಗಿ ತೆರವುಗೊಳಿಸಿ ಎಂದು ಸಂತ್ರಸ್ತೆ, ವ್ಯಾಟಿಕನ್‌ನ ಪೋಪ್‌ ಪ್ರತಿನಿಧಿ ಗಿಯಂಬಟಿ ಸ್ಟಾ ಡಿಕ್ವಟ್ರೊ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪ್ರತಿಷ್ಠಿತ ಜಲಂಧರ್‌ ಡಯಸಿಸ್‌ ಬಿಷಪ್‌ ಸ್ಥಾನದಲ್ಲಿರುವ ಫ್ರಾಂಕೊ ಮುಲಕ್ಕಲ್‌ ತಾವು ಎಸಗಿರುವ ಅನಾಚಾರವನ್ನು ಒಪ್ಪಿಕೊಂಡು ತಿದ್ದಿ ನಡೆಯುವ ಬದಲು ದಬ್ಬಾಳಿಕೆ ಮೂಲಕ, ಪ್ರಶ್ನಿಸುವವರ ಬಾಯಿ ಮುಚ್ಚಿಸಲು ನೋಡುತ್ತಿದ್ದಾರೆ. ಚರ್ಚಿಗೆ ಇರುವ ಪ್ರಭಾವವನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗೆ ತಕ್ಕಂತೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಣಬಲದಿಂದ ಅನ್ಯಾಯ ಗೆಲ್ಲಲು ನೋಡುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ.

2014ರಿಂದ 2016ರ ಅವಧಿಯಲ್ಲಿ ಆರೋಪಿ ಮುಲಕ್ಕಲ್‌ ತಮ್ಮ ಮೇಲೆ 13 ಬಾರಿ ಅತ್ಯಾಚಾರ ಎಸಗಿದ್ದಾರೆ. ಅನೈಸರ್ಗಿಕ ಲೈಂಗಿಕ ಕ್ರಿಯೆಗೂ ತಮ್ಮನ್ನು ಬಳಸಿಕೊಂಡಿದ್ದಾರೆ. ಆತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಂತ್ರಸ್ತೆ ಬಹಿರಂಗವಾಗಿ ಅಳಲು ತೋಡಿಕೊಂಡ ತರುವಾಯ ರಾಜ್ಯದಲ್ಲಿ ಅನೇಕ ಕಡೆ ಪ್ರತಿಭಟನೆಗಳಾಗಿವೆ. ಬಿಷಪ್‌ ವಿರುದ್ಧದ ಕ್ರಮಕ್ಕೆ ಒತ್ತಾಯಿಸಿ ಕ್ರೈಸ್ತ ಸನ್ಯಾಸಿನಿಯರು ಕೂಡ ಧರಣಿ, ಪ್ರತಿಭಟನೆಗಳನ್ನು ನಡೆಸಿದ್ದರು.

‘‘ಆರೋಪಿ ವಿರುದ್ಧ ಬಲವಾದ ಪುರಾವೆಗಳಿದ್ದರೂ ಪೊಲೀಸರು ಕ್ರಮಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆ. ಇದಕ್ಕೆ ಕಾರಣ, ಹಣ ಮತ್ತು ಅಧಿಕಾರ ಬಲ. ಆ ಮೂಲಕ ನಮ್ಮನ್ನು ಮುಗಿಸಲು ಯತ್ನಿಸುತ್ತಿದ್ದಾರೆ,’’ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಬಿಷಪ್‌ ವಿರುದ್ಧ ಎರಡು ತಿಂಗಳ ಹಿಂದೆಯೇ ಅತ್ಯಾಚಾರ ಆರೋಪದ ದೂರು ದಾಖಲಾಗಿದ್ದು ಪ್ರಕರಣದ ವಿಚಾರಣೆಗೆ ವಿಶೇಷ ತನಿಖಾ ತಂಡ ಕೂಡ ರಚನೆಯಾಗಿದೆ. ಆದರೆ, ಈವರೆಗೆ ಆರೋಪಿಯನ್ನು ಬಂಧಿಸಿಲ್ಲ. ಕನಿಷ್ಠ ಪಕ್ಷ ವಿಚಾರಣೆಯಲ್ಲಿಯೂ ಪ್ರಾಮಾಣಿಕತೆ ಪ್ರದರ್ಶಿಸಿಲ್ಲ ಎನ್ನುವ ಆರೋಪಗಳೂ ಕೇಳಿ ಬಂದಿವೆ.

ಏತನ್ಮಧ್ಯೆ, ಬಿಷಪ್‌ ಮುಲಕ್ಕಲ್‌ ಬೆಂಬಲಕ್ಕೆ ನಿಂತಿರುವ ಚರ್ಚಿನ ಕ್ಯಾಥೋಲಿಕ್‌ ಫೆಡರೇಷನ್‌ ಆಫ್‌ ಇಂಡಿಯಾ, ಭಗಿನಿಯ ಪ್ರಾಮಾಣಿಕತೆಯನ್ನೇ ಪ್ರಶ್ನೆ ಮಾಡಿದೆ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಸನ್ನಿವೇಶವನ್ನು ಬಳಸಿಕೊಳ್ಳುತ್ತಿದ್ದಾರೆ. ಅವರ ಹಿಂದೆ ಕಾಣದ ಕೈಗಳ ಪಿತೂರಿ ಅಡಗಿದೆ ಎಂದು ಫೆಡರೇಷನ್‌ ಆರೋಪಿಸಿದೆ.

ಮಲತಾಯಿ ಧೋರಣೆ: ನಾವು ಚರ್ಚ್‌ಗಳ ಬಗ್ಗೆ ಅಪಾರ ನಂಬಿಕೆ ಇರಿಸಿದ್ದೇವೆ. ಚರ್ಚ್‌ ಎಂದರೆ ತಾಯಿಗೆ ಸಮ ಎನ್ನುವ ತಿಳಿವಳಿಕೆ ನಮ್ಮಲ್ಲಿ ಬಾಲ್ಯದಿಂದಲೇ ರೂಪುಗೊಂಡಿದೆ. ಆದರೆ ಬೆಳೆದು ದೊಡ್ಡವರಾದ ನಮ್ಮಲ್ಲಿ ಈಗ ಆ ನಂಬಿಕೆ ಉಳಿದಿಲ್ಲ. ಕಾರಣ, ಅಲ್ಲಿ ನಡೆಯುತ್ತಿರುವ ಅನಾಚಾರ. ಬಿಷಪ್‌ ಮುಲಕ್ಕಲ್‌ರಂಥವರು ಅತ್ಯಾಚಾರದಂತಹ ದುಷ್ಕೃತ್ಯ ಎಸಗಿದರೂ ವ್ಯಾಟಿಕನ್‌ ಸಿಟಿಯ ಪೋಪ್‌ ಕಣ್ಣುಮುಚ್ಚಿ ಕುಳಿತಿದ್ದಾರೆ. ಇದೆಲ್ಲವನ್ನು ನೋಡಿದರೆ, ಮಹಿಳೆಯರ ಬಗ್ಗೆ ಚರ್ಚ್‌ಗಳು ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಅತ್ಯಾಚಾರ ಸಂತ್ರಸ್ತ ಸನ್ಯಾನಿಸಿ ಅಳಲು ತೋಡಿಕೊಂಡಿದ್ದಾರೆ. ‘‘ಚರ್ಚ್‌ ಆವರಣದಲ್ಲಿ ಇವತ್ತು ಪರಿಶುದ್ಧತೆ ಉಳಿದಿಲ್ಲ. ನನ್ನಂಥ ಅನೇಕ ಸಿಸ್ಟರ್‌ಗಳು ಹಾಗೂ ಇತರೆ ಮಹಿಳೆಯರು ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ. ಆದರೆ, ಪ್ರತಿಭಟಿಸುವ ಶಕ್ತಿ ಸಾಲದೇ ಅವರು ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದಾರೆ,’’ ಎಂದು ಅವರು ದೂರಿದ್ದಾರೆ.

ಚರ್ಚ್‌ ತೊರೆದ ಭಗಿನಿಯರ ಸಂಖ್ಯೆ 20

ಜಲಂಧರ್‌ ಡಯಾಸಿಸ್‌ ಬಿಷಪ್‌ ಫ್ರಾಂಕೊ ಶುದ್ಧ ಹೆಣ್ಣುಬಾಕ ಎಂದು ಆರೋಪಿಸಿರುವ ಸಂತ್ರಸ್ತೆ, ತಮ್ಮ ಆರೋಪಕ್ಕೆ ಪೂರಕ ನಿದರ್ಶನಗಳನ್ನೂ ಒದಗಿಸಿದ್ದಾರೆ. ಚರ್ಚಿನಲ್ಲಿ ಏನೇ ಅನಾಚಾರ ನಡೆದರೂ ಫ್ರಾಂಕೊ ಅವರಿಗೆ ದಕ್ಕಿಸಿಕೊಳ್ಳುವ ಸಾಮರ್ಥ್ಯ‌ ಇದೆ. ಯಾರನ್ನು ಬೇಕಾದರೂ ಎದುರು ಹಾಕಿಕೊಂಡು ದುರ್ಮಾಗದಲ್ಲಿ ಜಯಿಸಬಲ್ಲರು. ಇವರ ಇಂತಹ ವರ್ತನೆಗೆ ಅಂಜಿ ಕಳೆದ ಐದು ವರ್ಷಗಳಲ್ಲಿ 20 ಭಗಿನಿಯರು ಚರ್ಚ್‌ ತೊರೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ