ಕೆಲವೇ ನಿಮಿಷದಲ್ಲಿ ಪ್ಲ್ಯಾನ್ ಉಲ್ಟಾ!
ದಿಲ್ಲಿಯ ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿಗಳ ಮೂಲಕ ಹೊರಡುವ ಟ್ರ್ಯಾಕ್ಟರ್ ರಾರಯಲಿಯು ಪೊಲೀಸರು ಅನುಮತಿಸಿದ ಮಾರ್ಗದಲ್ಲಿ ಸಂಚರಿಸಿ, ಮತ್ತದೇ ಗಡಿಗಳಿಗೆ ವಾಪಸಾಗಬೇಕೆಂದು ನಿರ್ಧರಿಸಲಾಗಿತ್ತು. ಆದರೆ, ಮಂಗಳವಾರ ಟ್ರ್ಯಾಕ್ಟರ್ ಪರೇಡ್ ವೇಳೆ, ಕೆಲವೇ ನಿಮಿಷಗಳಲ್ಲಿ ಈ ಯೋಜನೆಯು ಕೈಕೊಟ್ಟಿತು. ನಿಗದಿತ ಮಾರ್ಗಗಳನ್ನು ಬಿಟ್ಟು, ಸಿಕ್ಕ ಸಿಕ್ಕ ಕಡೆಗಳಲ್ಲಿ ಪ್ರತಿಭಟನಾಕಾರರು ನಗರದ ಹೃದಯಭಾಗದತ್ತ ನುಗ್ಗಿದರು. ಸರಕಾರದ ಅಧಿಕೃತ ಗಣರಾಜ್ಯೋತ್ಸವ ಪರೇಡ್ ಮುಗಿದ ಬಳಿಕ ಟ್ರ್ಯಾಕ್ಟರ್ ರಾರಯಲಿ ನಡೆಸಲು ಪೊಲೀಸರು ಸೂಚಿಸಿದ್ದರೂ, ಷರತ್ತು ಉಲ್ಲಂಘಿಘಿಸಿ ಬೆಳಗ್ಗೆ 7 ಗಂಟೆಗೇ ರಾರಯಲಿ ಆರಂಭಿಸಲಾಯಿತು. ಅತ್ತ ಪರೇಡ್ ನಡೆಯುತ್ತಿದ್ದರೆ, ಮತ್ತೊಂದೆಡೆ ಟ್ರ್ಯಾಕ್ಟರ್, ಬೈಕ್, ಕುದುರೆ ಹಾಗೂ ಕಾಲ್ನಡಿಗೆ ಜಾಥಾ ಮೂಲಕ ಜನಸಾಗರವೇ ಕೆಂಪುಕೋಟೆಯತ್ತ ಲಗ್ಗೆ ಇಟ್ಟಿತು. ತಡೆಯಲು ಮುಂದಾದ ಪೊಲೀಸರೊಂದಿಗೆ ಪ್ರತಿಭಟನಾಕಾರರು ತೀವ್ರ ಘರ್ಷಣೆಗೆ ಇಳಿದರು. ಕಲ್ಲುಗಳನ್ನು ತೂರಿದರು, ಸರಕಾರಿ ಬಸ್ಗಳು, ಪೊಲೀಸ್ ವಾಹನಗಳನ್ನು ಜಖಂಗೊಳಿಸಿದರು. ಬ್ಯಾರಿಕೇಡ್ಗಳನ್ನು ಮುರಿದು ಮುನ್ನುಗ್ಗಿದರು. ಕೆಲವೆಡೆ ಖಡ್ಗ, ದೊಣ್ಣೆಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಘಟನೆಯೂ ನಡೆದಿದೆ. ಪೊಲೀಸರ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗಕ್ಕೂ ಬಗ್ಗದ ಪ್ರತಿಭಟನಾಕಾರರು ಮಧ್ಯಾಹ್ನದ ವೇಳೆಗೆ ಕೆಂಪು ಕೋಟೆ ತಲುಪಿ ಹೋರಾಟದ ಧ್ವಜಾರೋಹಣ ನೆರವೇರಿಸಿದರು.ಕೆಂಪು ಕೋಟೆ ಮುಂಭಾಗದಲ್ಲಿರುವ ಧ್ವಜ ಸ್ತಂಭದ ಮೇಲೆ ತಾವು ತಂದಿದ್ದ ಕಿಸಾನ್ ಧ್ವಜ ಹಾಗೂ ಸಿಖ್ ಧ್ವಜವನ್ನು ಹಾರಿಸಿದ ರೈತರು, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಈ ಮಧ್ಯೆ, ಕೆಂಪುಕೋಟೆಯಿಂದ ಶಾಂತಿಯುತವಾಗಿ ನಿರ್ಗಮಿಸುವಂತೆ ಪೊಲೀಸರು ಹಲವು ಬಾರಿ ಮನವಿ ಮಾಡಿದರೂ, ಪ್ರತಿಭಟನಾಕಾರರು ಸೊಪ್ಪು ಹಾಕಲಿಲ್ಲ. ಬಳಿಕ ಲಘು ಲಾಠಿ ಪ್ರಹಾರದ ಮೂಲಕ ಅವರನ್ನು ಚದುರಿಸಲಾಯಿತು. ಕೆಂಪುಕೋಟೆ ಧ್ವಜಾರೋಹಣದ ಬಳಿಕ ರೈತರು ಮತ್ತೆ ತಮ್ಮ ಮೂಲ ಪ್ರತಿಭಟನಾ ಸ್ಥಳಗಳಾದ ದಿಲ್ಲಿಗಡಿಗಳತ್ತ ಹೊರಟರು. ಸಂಜೆ ವೇಳೆಗೆ ರೈತರು ಸಿಂಘು, ಟಿಕ್ರಿ ಹಾಗೂ ಘಾಜಿಪುರ ಗಡಿಗೆ ಮರಳಿದರು.
ದಿನದ ಬೆಳವಣಿಗೆ
ಟಿಕ್ರಿ, ಸಿಂಘು, ಘಾಜಿಪುರ ಗಡಿಗಳ ಮೂಲಕ ದಿಲ್ಲಿಯತ್ತ ಪ್ರತಿಭಟನಾಕಾರರ ಎಂಟ್ರಿ
ತಡೆಯೊಡ್ಡಿದ ಪೊಲೀಸರೊಂದಿಗೆ ಘರ್ಷಣೆ, ಕಲ್ಲುತೂರಾಟ, ವಾಹನಗಳಿಗೆ ಹಾನಿ
ಅಡ್ಡಲಾಗಿ ನಿಲ್ಲಿಸಿದ್ದ ಬಸ್ಗಳಿಗೆ ಟ್ರ್ಯಾಕ್ಟರ್ಗಳಿಂದ ಗುದ್ದಿಸಿ ಆಕ್ರೋಶ
ನಡು ರಸ್ತೆಯಲ್ಲೇ ಪೊಲೀಸರ ಮೇಲೆ ಟ್ರ್ಯಾಕ್ಟರ್ ನುಗ್ಗಿಸಿ ಬೆದರಿಕೆ
ಪೊಲೀಸರ ಮುಂದೆ ಖಡ್ಗ ಮತ್ತಿತರ ಮಾರಕಾಸ್ತ್ರ ಝಳಪಿಸಿ ಬೆದರಿಕೆ
ಟ್ರ್ಯಾಕ್ಟರ್ ಮಗುಚಿ ರೈತನ ಸಾವು, ಮೃತದೇಹವಿಟ್ಟು ರೈತರ ಪ್ರತಿಭಟನೆ
ಹಿಂಸಾಚಾರ ಹಬ್ಬದಂತೆ ತಡೆಯಲು ಇಂಟರ್ನೆಟ್ ಸಂಪರ್ಕ ಬಂದ್
ಗೃಹ ಸಚಿವ ಅಮಿತ್ ಶಾ ತುರ್ತು ಸಭೆ, ಹೆಚ್ಚುವರಿ ಪಡೆ ನಿಯೋಜನೆಗೆ ಆದೇಶ
ಇನ್ನು ಪೊಲೀಸರು ನಿಗದಿಪಡಿಸಿದ್ದ ಮಾರ್ಗ ಬಿಟ್ಟು ಬೇರೆ ಹಾದಿಯಲ್ಲಿ ನಗರ ಪ್ರವೇಶ ರೈತರು ಮಾಡಿರುವುದು, ಗಣರಾಜ್ಯೋತ್ಸವ ಮುಗಿಯುವ ಮುನ್ನವೇ ರಾರಯಲಿ ಆರಂಭಿಸಿ ಷರತ್ತು ಉಲ್ಲಂಘಿಸಿರುವುದು, ರೈತರ ಹೆಸರಲ್ಲಿ ಸಿಖ್ ಹೋರಾಟಗಾರರು, ರಾಜಕೀಯ ಪಕ್ಷಗಳ ಕಾರ್ಯಕರ್ತರ ಹಿಂಸಾಚಾರ ನಡೆಸಿರುವುದು ಪ್ರತಿಭಟನೆ ವಿಕೋಪಕ್ಕೆ ತಿರುಗಲು ಕಾರಣವಾಗಿದೆ.
ಟ್ರ್ಯಾಕ್ಟರ್ ರ್ಯಾಲಿ ಹಿನ್ನೆಲೆ: ಮಂಗಳವಾರದ ದಿಲ್ಲಿ ರೈಲುಗಳ ಟಿಕೆಟ್ ಹಣ ವಾಪಸ್
ಖಲಿಸ್ತಾನ್ ಸಂಘಟನೆ ಕೈವಾಡ?
ಪ್ರತಿಭಟನೆಯಲ್ಲಿ ಪ್ರತ್ಯೇಕತಾವಾದಿ ಖಲಿಸ್ತಾನ್ ಸಂಘಟನೆಯ ಕಿಡಿಗೇಡಿಗಳು ಭಾಗಿಯಾಗಿದ್ದರೇ ಎನ್ನುವ ಚರ್ಚೆ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ. ಆರಂಭದಿಂದಲೂ ಈ ಬಗ್ಗೆ ಹಲವರಿಂದ ಶಂಕೆ ವ್ಯಕ್ತವಾಗಿತ್ತು. ಸರಕಾರ ಕೂಡ ಖಲಿಸ್ತಾನ್ ಬಣಗಳ ಪ್ರವೇಶದ ಕುರಿತು ಸಂಶಯ ತಳೆದಿದೆ. ಮಂಗಳವಾರ ನಡೆದ ಹಿಂಸಾಚಾರದ ಘಟನೆಯು ಆ ಎಲ್ಲಾ ಸಂಶಯಗಳಿಗೆ ಪುಷ್ಠಿ ನೀಡಿದೆ. ಇನ್ನು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದು, ರಾಷ್ಟ್ರಧ್ವಜದ ಹೊರತಾಗಿ ಇತರೆ ಧ್ವಜವನ್ನು ಕೆಂಪು ಕೋಟೆಯ ಮೇಲೆ ಹಾರಿಸಿದ ಘಟನೆ ಇದೇ ಮೊದಲು. ಅದರಲ್ಲೂ ಗಣರಾಜ್ಯೋತ್ಸವದ ದಿನವೇ ಇಂತಹ ಉದ್ಧಟತನ ತೋರಿ, ರಾಷ್ಟ್ರ ಗೌರವಕ್ಕೆ ಮಸಿ ಬಳಿಯಲಾಗಿದೆ. ರೈತರ ಹೆಸರಿನಲ್ಲಿ ಕಿಡಿಗೇಡಿಗಳು, ಸಮಾಜಘಾತುಕ ಶಕ್ತಿಗಳು ನಡೆಸಿರುವ ಈ ಕೃತ್ಯಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ.