ಆ್ಯಪ್ನಗರ

‘ನಮ್ಮನ್ನೇಕೆ ಉಳಿಸಿದ್ದೀರಿ, ಎಲ್ಲರನ್ನೂ ಕೊಂದು ಬಿಡಿ’

ಉಗ್ರರಿಗೆ ಹುತಾತ್ಮ ಪೊಲೀಸ್‌ ಸಂಬಂಧಿಕರ ಬಹಿರಂಗ ಪತ್ರ | ಸಾಮಾಜಿಕ ಜಾಲತಾಣದಲ್ಲಿ ವೈರಲ್‌

Vijaya Karnataka 31 Oct 2018, 8:10 pm
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸಿಐಡಿ ಸಬ್‌ ಇನ್ಸ್‌ಪೆಕ್ಟರ್‌ ಇಮ್ತಿಯಾಜ್‌ ಮಿರ್‌ (30) ಅವರನ್ನು ಉಗ್ರರು ಅಪಹರಿಸಿ, ಹತ್ಯೆ ಮಾಡಿದ ಬೆನ್ನಲ್ಲೇ, ಮಿರ್‌ ಸಂಬಂಧಿಕರೊಬ್ಬರು ಉಗ್ರರಿಗೆ ಬರೆದ ಭಾವುಕ ಮತ್ತು ನೋವಿನ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Vijaya Karnataka Web ಜಮ್ಮು ಕಾಶ್ಮೀರ
ಜಮ್ಮು ಕಾಶ್ಮೀರ


ಮಿರ್‌ ಅವರ ಸಹೋದರ ಬರೆದಿರಬಹುದೆಂದು ಹೇಳಲಾದ ಈ ಅನಾಮಿಕ ಪತ್ರದಲ್ಲಿ, ಮೃತನ ಕುಟುಂಬ ಸದಸ್ಯರನ್ನೆಲ್ಲರನ್ನೂ ಕೊಲ್ಲುವಂತೆ ಉಗ್ರರಿಗೆ ಕರೆ ನೀಡಲಾಗಿದೆ.

''ಮಿರ್‌ ಅವರನ್ನು ಕೊಂದ ಮೇಲೆ ನಮ್ಮನ್ನೇಕೆ ಕೊಂದಿಲ್ಲ? ಮಿರ್‌ ಜತೆ ಇಡೀ ಜೀವನ ಕಳೆಯುವ ಕನಸು ಹೊಂದಿದ್ದ ಆತನ ತಾಯಿ, ತಂದೆ, ಸಹೋದರಿ, ಸಹೋದರರು ಎಲ್ಲರನ್ನೂ ಏಕೆ ಉಳಿಸಿದ್ದೀರಿ? ದಯವಿಟ್ಟು ಬಂದು ನಮ್ಮೆಲ್ಲರನ್ನೂ ಕೊಂದು ಬಿಡಿ, ಅವರಿಲ್ಲದೆ ನಾವ್ಯಾರು ಬದುಕಲಾರೆವು,'' ಎಂದು ಫೇಸ್‌ಬುಕ್‌ನಲ್ಲಿ ಬರೆದ ಪತ್ರದಲ್ಲಿ ಕುಟುಂಬ ಸದಸ್ಯರೊಬ್ಬರು ನೋವು ಹಾಗೂ ಅಸಹಾಯಕತೆ ತೋಡಿಕೊಂಡಿದ್ದಾರೆ.

ಶ್ರೀನಗರದ ಸಿಐಡಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಿರ್‌, ಕಳೆದ ಭಾನುವಾರ ಸಂಬಂಧಿಕರು, ಸ್ನೇಹಿತರ ಜತೆ ಕೆಲ ದಿನಗಳನ್ನು ಕಳೆಯುವ ನಿರೀಕ್ಷೆಯೊಂದಿಗೆ ಪುಲ್ವಾಮಾ ಜಿಲ್ಲೆಯ ತನ್ನ ತವರೂರಿಗೆ ವಾಪಸಾಗುತ್ತಿದ್ದರು. ಮಾರ್ಗಮಧ್ಯೆ ವಾಹಿಭಾಗ್‌ ಎಂಬಲ್ಲಿ ಕಾರು ಅಡ್ಡಗಟ್ಟಿದ ಉಗ್ರರು, ಮಿರ್‌ ಅವರನ್ನು ವಾಹನದಿಂದ ಹೊರಗೆಳೆದು ಗುಂಡಿಟ್ಟು ಹತ್ಯೆ ಮಾಡಿದ್ದರು.

ಕುಟುಂಬ ಪ್ರೇಮದ ಸೆಳೆತ: ಕಾಶ್ಮೀರದಲ್ಲಿ ಉಗ್ರರು ಮುಸ್ಲಿಂ ಪೊಲೀಸ್‌ ಅಧಿಕಾರಿಗಳನ್ನು ಟಾರ್ಗೆಟ್‌ ಮಾಡುತ್ತಿರುವ ಹಿನ್ನೆಲೆಯಲ್ಲಿ, ಒಬ್ಬರೇ ಹೋಗುವುದು ಬೇಡ ಎಂದು ಹಿರಿಯ ಅಧಿಕಾರಿಗಳು ಮಿರ್‌ ಅವರಿಗೆ ಎಚ್ಚರಿಸಿದ್ದರು. ಆದರೆ, ಆದಷ್ಟು ಬೇಗ ಮನೆಗೆ ಹೋಗಿ, ಕುಟುಂಬ ಸದಸ್ಯರನ್ನು ನೋಡುವ ತುಡಿತ ಹೊಂದಿದ್ದ ಮಿರ್‌ ಅವರು ಈ ಕಿವಿಮಾತುಗಳಿಗೆ ಲಕ್ಷ್ಯ ಕೊಟ್ಟಿರಲಿಲ್ಲ.

''ನಾನು ಉಗ್ರರು ಗುರುತು ಹಿಡಿಯುವುದನ್ನು ತಪ್ಪಿಸಲು ಗಡ್ಡ ತೆಗೆದಿದ್ದೇನೆ. ಕ್ಲೀನ್‌ ಶೇವ್‌ ಮಾಡಿ, ನನ್ನ ರೂಪವನ್ನು ಬದಲಿಸಿಕೊಂಡಿದ್ದೇನೆ'' ಎಂದು ಹೇಳಿದ್ದ ಮಿರ್‌ ಊರಿಗೆ ಹೊರಟಿದ್ದರು.

''ನೀವು (ಉಗ್ರರು) ಕೊಂದಿರುವುದು ಕೇವಲ ಒಬ್ಬ ವ್ಯಕ್ತಿಯನ್ನಲ್ಲ, ವೃದ್ಧ ತಾಯಿಯೊಬ್ಬರ ಪ್ರೀತಿಪಾತ್ರ ಮಗ... ತಂದೆಯೊಬ್ಬರ ವಿಧೇಯ ಪುತ್ರ... ಸೋದರರು, ಸೋದರಿಯರಿಗೆ ಆಧಾರವಾಗಿದ್ದ ಅಣ್ಣನನ್ನು ಕೊಂದು ಬಿಟ್ಟಿದ್ದೀರಿ. ಆತನನ್ನು ವರಿಸಲು ಬಯಸಿದ್ದ ಯುವತಿಯೊಬ್ಬಳ ಕನಸನ್ನು ನುಚ್ಚುನೂರು ಮಾಡಿದ್ದೀರಿ'' ಎಂದು ಪತ್ರದಲ್ಲಿ ಬರೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ