ಆ್ಯಪ್ನಗರ

ಆಮಂತ್ರಣ ಪತ್ರಿಕೆ ಪಡೆದ ಶರೀಫ್ ಚಾಚಾ ಯಾರು?: ಅನಾಥ ಶವಗಳಿಗೆ ಮುಕ್ತಿಯ ಮಾರ್ಗ ತೋರಿಸಿದವರು!

ಅಯೋಧ್ಯೆಯ ಭೂಮಿ ಪೂಜೆಯ ಆಮಂತ್ರಣ ಪತ್ರಿಕೆ ಸ್ವೀಕರಿಸಿದವರ ಪೈಕಿ ಸುಮಾರು 25 ಸಾವಿರಕ್ಕೂ ಅಧಿಕ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿರುವ ಉತ್ತರಪ್ರದೇಶದ ಮೊಹ್ಮದ್ ಶರೀಫ್ ಕೂಡ ಒಬ್ಬರು.​ ಪದ್ಮಶ್ರೀ ಪುರಸ್ಕೃತ ಮೊಹ್ಮದ್ ಶರೀಫ್‌ರ ಪರಿಚಯ ಇಲ್ಲಿದೆ.

Vijaya Karnataka Web 4 Aug 2020, 5:59 pm
ಲಕ್ನೋ: ನಾಳೆ(ಬುಧವಾರ) ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಪ್ರಧಾನಿ ಮೋದಿ ಭವ್ಯ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ನಗರಿ ಸಿಂಗಾರಗೊಂಡಿದೆ.
Vijaya Karnataka Web Mohammad Sharif
ಮೊಹ್ಮದ್ ಶರೀಫ್


ಈ ಮಧ್ಯೆ ಭೂಮಿ ಪೂಜೆಗೆ ಆಮಂತ್ರಿತರಾದ ಗಣ್ಯರ ಪಟ್ಟಿ ವಿಶೇಷ ಗಮನ ಸೆಳೆದಿದ್ದು, 175 ವಿಶೇಷ ಗಣ್ಯರ ಪೈಕಿ ಹಲವರು ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದವರಾಗಿದ್ದಾರೆ.

ಅಯೋಧ್ಯೆಯ ಭೂಮಿ ಪೂಜೆಯ ಆಮಂತ್ರಣ ಪತ್ರಿಕೆ ಸ್ವೀಕರಿಸಿದವರ ಪೈಕಿ ಸುಮಾರು 25 ಸಾವಿರಕ್ಕೂ ಅಧಿಕ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿರುವ ಉತ್ತರಪ್ರದೇಶದ ಮೊಹ್ಮದ್ ಶರೀಫ್ ಕೂಡ ಒಬ್ಬರು.

ಜನಮಾನಸದಲ್ಲಿ ಶರೀಫ್ ಚಾಚಾ ಎಂದೇ ಖ್ಯಾತನಾಮರಾಗಿರುವ ಮೊಹ್ಮದ್ ಶರೀಫ್, ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುವ ಮೂಲಕ ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದವರು.

25 ಸಾವಿರ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ ಮೊಹ್ಮದ್ ಶರೀಫ್‌ ಕೈ ತಲುಪಿದ ಅಯೋಧ್ಯೆ ಆಮಂತ್ರಣ ಪತ್ರಿಕೆ!

ಮೊಹ್ಮದ್ ಶರೀಫ್ ಪರಿಚಯ:
ಸೈಕಲ್ ರಿಪೇರಿ ಮಾಡುವ ಮೊಹ್ಮದ್ ಶರೀಫ್ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನಡೆಸುವ ಮೂಲಕ ಬೆಳಕಿಗೆ ಬಂದವರು. ಶರೀಫ್ ಹೀಗೆ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನಡೆಸುವ ಉದ್ದೇಶದ ಹಿಂದೆ ನೋವಿನ ಕತೆಯೊಂದಿದೆ.

1992ರಲ್ಲಿ ಮೊಹ್ಮದ್ ಶರೀಫ್ ಅವರ ಕಿರಿಯ ಮಗ ಮೊಹ್ಮದ್ ರಯೀಸ್ ಖಾನ್ ಕೊಲೆಗೀಡಾಗಿದ್ದರು. ಸುಲ್ತಾನ್‌ಪುರ್ ಬಳಿ ಅವರ ಶವ ಅನಾಥವಾಗಿ ಬಿದ್ದಿದ್ದಲ್ಲದೇ, ಬೀದಿನಾಯಿಗಳಿಗೆ ಆಹಾರವಾಗಿತ್ತು.

ಇದರಿಂದ ತೀವ್ರ ಘಾಸಿಗೊಳಗಾಗಿದ್ದ ಮೊಹ್ಮದ್ ಶರೀಫ್ ಅಂದಿನಿಂದ ಯಾವುದೇ ಅನಾಥ ಶವ ದೊರೆತೂ ಅದಕ್ಕೆ ಸಂತ್ಯಸಂಸ್ಕಾರ ನೆರವೇರಿಸುತ್ತಾರೆ. ಪೊಲೀಸ್ ಠಾಣೆ, ರೈಲು ನಿಲ್ದಾಣ, ಆಸ್ಪತ್ರೆಗಳಿಗೆ ಭೇಟಿ ನೀಡಿ ಅನಾಥ ಶವಗಳನ್ನು ತಮ್ಮ ಸುಪರ್ದಿಗೆ ಪಡೆದು ಅವುಗಳಿಗೆ ಅಂತ್ಯಸಂಸ್ಕಾರ ನೆರವೇರಿಸುವುದು ಮೊಹ್ಮದ್ ಶರೀಫ್ ಅವರ ಕಾಯಕ.

ಶವ ದೊರೆತ 72 ಗಂಟೆಯೊಳಗಾಗಿ ಯಾರೂ ವಾರಸುದಾರರು ಬರದಿದ್ದರೆ ಪೊಲೀಸರು ಅಂತಹ ಶವಗಳನ್ನು ಮೊಹ್ಮದ್ ಶರೀಫ್ ಅವರ ಸುಪರ್ದಿಗೆ ಒಪ್ಪಿಸುತ್ತಾರೆ. ಶರೀಫ್ ಮೃತ ವ್ಯಕ್ತಿಯ ಧರ್ಮಕ್ಕನುಸಾರವಾಗಿಯೇ ಎಲ್ಲಾ ವಿಧಿವಿಧಾನಗಳನ್ನು ಪೂರೈಸುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ.

ಭೂಮಿ ಪೂಜೆ ಮೊದಲ ಆಮಂತ್ರಣ ಪತ್ರಿಕೆ ಸೇರಿದ್ದು ಇಕ್ಬಾಲ್ ಅನ್ಸಾರಿ ಕೈಗೆ: ಯಾರಿವರು?
ಶರೀಫ್ ಚಾಚಾಗೆ ಪದ್ಮಶ್ರೀ:

ಇನ್ನು ಮೊಹ್ಮದ್ ಶರೀಫ್ ಅವರ ಈ ವಿಶಿಷ್ಟ ಸೇವೆಯನ್ನು ಗುರುತಿಸಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2020ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಇಂತಹ ಗೌರವಾನ್ವಿತ ವ್ಯಕ್ತಿಗೆ ನಾಳಿನ(ಬುಧವಾರ) ಅಯೋಧ್ಯೆ ಭೂಮಿ ಪೂಜೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡುವ ಮೂಲಕ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕೂಡ ಅವರನ್ನು ಗೌರವಿಸಿರುವುದು ಸಂತಸದ ಸಂಗತಿ ಎಂದು ಹೇಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ