ಆ್ಯಪ್ನಗರ

ಪಠ್ಯಕ್ರಮದಿಂದ ಅರುಂಧತಿ ರಾಯ್ ಕೃತಿ ಹಿಂಪಡೆದ ತಮಿಳುನಾಡು ವಿವಿ: ಲೇಖಕಿ ಪ್ರತಿಕ್ರಿಯೆ ಏನು?

ತಮಿಳುನಾಡಿನ ವಿಶ್ವವಿದ್ಯಾಲಯವೊಂದು ಖ್ಯಾತ ಲೇಖಕಿ ಅರುಂಧತಿ ರಾಯ್ ಬರೆದ 'ವಾಕಿಂಗ್ ವಿತ್ ದಿ ಕಾಮ್ರೇಡ್ಸ್' ಎಂದ ಕೃತಿಯನ್ನು ತನ್ನ ಪಠ್ಯಕ್ರಮದಿಂದ ಹಿಂಪಡೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರುಂಧತಿ ರಾಯ್, ವಿವಿ ನಿರ್ಧಾರದಿಂದ ತಮಗೆ ಆಶ್ಚರ್ಯವೇನು ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Vijaya Karnataka Web 12 Nov 2020, 10:03 pm
ಚೆನ್ನೈ: ತಮಿಳುನಾಡಿನ ವಿಶ್ವವಿದ್ಯಾಲಯವೊಂದು ಖ್ಯಾತ ಲೇಖಕಿ ಅರುಂಧತಿ ರಾಯ್ ಬರೆದ 'ವಾಕಿಂಗ್ ವಿತ್ ದಿ ಕಾಮ್ರೇಡ್ಸ್' ಎಂದ ಕೃತಿಯನ್ನು ತನ್ನ ಪಠ್ಯಕ್ರಮದಿಂದ ಹಿಂಪಡೆದಿದೆ.
Vijaya Karnataka Web Arundhati Roy. Photo: ANI
ಸಂಗ್ರಹ ಚಿತ್ರ


ಅರುಂಧತಿ ರಾಯ್ ಅವರ ಕೃತಿ ವಿವಿ ಪಠ್ಯಕ್ರಮದ ಭಾಗವಾಗಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ತೀವ್ರವಾಗಿ ಖಂಡಿಸಿತ್ತು. ಅರುಂಧತಿ ಅವರ ಕೃತಿಯಲ್ಲಿ ಉಗ್ರ ಸಂಘಟನೆಗಳ ಪರ ಅಭಿಪ್ರಾಯವಿದ್ದು, ಇದು ದೇಶದ್ರೋಹಿ ವಿಚಾರಗಳನ್ನು ಒಳಗೊಂಡಿದೆ ಎಂದು ಎಬಿವಿಪಿ ತೀವ್ರ ಅಸಮಾಧಾನ ಹೊರಹಾಕಿತ್ತು.

ವಿದ್ಯಾರ್ಥಿ ಸಂಘಟನೆಗಳ ಆಗ್ರಹಕ್ಕೆ ಮಣಿದಿರುವ ತಮಿಳುನಾಡಿನ ತಿರುನಲ್ವೆಲಿಯ ಮನೋನ್ಮಯಿಯಂ ಸುಂದರನರ್‌ ವಿವಿ, ತನ್ನ ಅಧೀನದಲ್ಲಿ ಬರುವ ಎಲ್ಲಾ ಕಾಲೇಜುಗಳ ಇಂಗ್ಲೀಷ್ ಮೂರನೇ ಸೆಮಿಸ್ಟರ್ ಪಠ್ಯಕ್ರಮದಿಂದ 'ವಾಕಿಂಗ್ ವಿತ್ ದಿ ಕಾಮ್ರೇಡ್ಸ್‌ನ್ನು ಹಿಂಪಡೆದಿದೆ.

ವಿದ್ಯಾರ್ಥಿ ಸಂಘಟನೆಗಳು ಮತ್ತು ಸಿಂಡಿಕೇಟ್ ಸದಸ್ಯರ ದೂರನ್ನು ಆಧರಿಸಿ ಶಿಕ್ಷಣ ತಜ್ಞರ ಉನ್ನತ ಸಮಿತಿ, ಅರುಂಧತಿ ರಾಯ್ ಅವರ ಕೃತಿಯನ್ನು ಪಠ್ಯಕ್ರಮದಿಂದ ಹಿಂಪಡೆಯುವ ನಿರ್ಧಾರ ಕೈಗೊಂಡಿದೆ ಎಂದು ಎಂಎಸ್‌ಯು ಕುಲಪತಿ ಕೆ.ಪಿಚುಮಣಿ ಸ್ಪಷ್ಟಪಡಿಸಿದ್ದಾರೆ.

ನ್ಯಾಯಾಂಗ ನಿಂದನೆ: ಅರುಂಧತಿ ರಾಯ್ ಕೋರ್ಟ್ ಮುಂದೆ ಹಾಜರಾಗೋದು ಅನಿವಾರ್ಯ

ಅರುಂಧತಿ ರಾಯ್ ಪ್ರತಿಕ್ರಿಯೆ:

ಇನ್ನು ವಿವಿ ಪಠ್ಯಕ್ರಮದಿಂದ ತಮ್ಮ ಕೃತಿಯನ್ನು ಹಿಂಪಡೆದಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಲೇಖಕಿ ಅರುಂಧತಿ ರಾಯ್, ಈ ಕ್ರಮವನ್ನು ನಿರೀಕ್ಷಿಸಿದ್ದಾಗಿ ಹೇಳಿದ್ದಾರೆ.

ಅಲ್ಲದೇ ತಮ್ಮ ಕೃತಿ ಈ ವಿವಿಯ ಪಠ್ಯಕ್ರಮದ ಭಾಗವಾಗಿರುವ ಕುರಿತು ತಮಗೆ ಮಾಹಿತಿಯೇ ಇರಲಿಲ್ಲ ಎಂದಿರುವ ಅರುಂಧತಿ ರಾಯ್, ಇಷ್ಟು ವರ್ಷಗಳ ಕಾಲ ತಮ್ಮ ಕೃತಿಯನ್ನು ಎಂಎಸ್‌ಯು ವಿವಿ ಪಠ್ಯವನ್ನಾಗಿ ಭೋಧಿಸಿದ್ದಕ್ಕೆ ತಮಗೆ ತುಂಬ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಓರ್ವ ಲೇಖಕಿಯಾಗಿ ನಾನು ಈ ದೇಶದ ಒಂದು ವರ್ಗದ ಕಾರ್ಯಚಟುವಟಿಕೆಗಳನ್ನು ದಾಖಲಿಸಿದ್ದೇನೆ. ಆದರೆ ಅದು ವಿವಿಯಲ್ಲಿ ಪಠ್ಯಕ್ರಮವಾಗಿ ಭೋಧಿಸಲ್ಪಡಬೇಕು ಎಂದು ಬಯುಸುವುದು ತಪ್ಪಾಗುತ್ತದೆ ಎಂದು ಅರುಂಧತಿ ರಾಯ್ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರಕಾರ ಬ್ರಾಹ್ಮಣತ್ವ ಪಸರಿಸುತ್ತಿದೆ: ಅರುಂಧತಿ

ಏನಿದು ವಾಕಿಂಗ್ ವಿತ್ ದಿ ಕಾಮ್ರೇಡ್ಸ್?:
ದಂಡಕಾರಣ್ಯದ ನಕ್ಸಲ್ ಚಟುವಟಿಕೆಗಳ ಕುರಿತು ಅರುಂಧತಿ ರಾಯ್ 'ವಾಕಿಂಗ್ ವಿತ್ ದಿ ಕಾಮ್ರೇಡ್ಸ್' ಎಂಬ ಕೃತಿಯನ್ನು ರಚಿಸಿದ್ದರು. ನಕ್ಸಲೀಯ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ, ಅವರ ಕಾರ್ಯಚಟುವಟಿಕೆಗಳು, ಅವರ ಬೇಡಿಕೆಗಳ ಕುರಿತು ಅರುಂಧತಿ ರಾಯ್ ಕೃತಿಯ ಮೂಲಕ ಬೆಳಕು ಚೆಲ್ಲಿದ್ದರು.


ಡಿಎಂಕೆ ವಿರೋಧ:
ಇನ್ನು ಅರುಂಧತಿ ರಾಯ್ ಅವರ ಕೃತಿಯನ್ನು ಪಠ್ಯಕ್ರಮದಿಂದ ಹಿಂಪಡೆದ ಎಂಎಸ್‌ಯು ನಡೆಯನ್ನು ಡಿಎಂಕೆ ವಿರೋಧಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಡಿಎಂಕೆ ನಾಯಕಿ ಕನಿಮೋಳಿ, ವಿದ್ಯಾರ್ಥಿಗಳು ಏನು ಓದಬೇಕು ಎಂಬುದನ್ನು ಸರ್ಕಾರ ಮತ್ತ ರಾಜಕೀಯ ನಿರ್ಧಾರ ಮಾಡುವುದು ಉತ್ತಮ ಬೆಳವಣಿಗೆಯಲ್ಲ ಎಂದು ಕಿಡಿಕಾರಿದ್ದಾರೆ.

ಮಹಾತ್ಮಗಾಂಧಿ ಜಾತಿವಾದಿ: ಅರುಂಧತಿ ರಾಯ್

ಇಷ್ಟೇ ಅಲ್ಲದೇ ಸಿಪಿಎಂ ಕೂಡ ಎಂಎಸ್‌ಯು ನಿರ್ಧಾರವನ್ನು ಟೀಕಿಸಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕಿನ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಹರಿಹಾಯ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ