ಆ್ಯಪ್ನಗರ

ಮಿನಿಸ್ಟರ್ VS ಆಫೀಸರ್: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಅಂದರ್-ಬಾಹರ್!

ಬಾಲಿವುಡ್ ಕಿಂಗ್ ಖಾನ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧದ ಡ್ರಗ್ಸ್ ಪ್ರಕರಣ, ಎನ್‌ಸಿಪಿ ನಾಯಕ ನವಾಬ್ ಮಲಿಕ್ ಮತ್ತು ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ನಡುವಿನ ವೈಯಕ್ತಿಕ ಕದನವಾಗಿ ಮಾರ್ಪಟ್ಟಿದೆ.

Vijaya Karnataka Web 26 Oct 2021, 1:45 pm
ಮುಂಬಯಿ: ಬಾಲಿವುಡ್ ಕಿಂಗ್ ಖಾನ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧದ ಡ್ರಗ್ಸ್ ಪ್ರಕರಣ, ಎನ್‌ಸಿಪಿ ನಾಯಕ ನವಾಬ್ ಮಲಿಕ್ ಮತ್ತು ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ನಡುವಿನ ವೈಯಕ್ತಿಕ ಕದನವಾಗಿ ಮಾರ್ಪಟ್ಟಿದೆ. ನವಾಬ್ ಮಲಿಕ್ ಮತ್ತು ಸಮೀರ್ ವಾಂಖೆಡೆ ಅವರ ಪರಸ್ಪರ ಆರೋಪ-ಪ್ರತ್ಯಾರೋಪ ಪ್ರಹಸನ ಡ್ರಗ್ಸ್ ಪ್ರಕರಣವನ್ನೇ ಮರೆ ಮಾಡುತ್ತಿದೆ.
Vijaya Karnataka Web Malik VS Wankhede
ಸಂಗ್ರಹ ಚಿತ್ರ


ಡ್ರಗ್ಸ್ ಪ್ರಕರಣ ಸುದ್ದಿಯಾಗುತ್ತಿದ್ದಂತೇ, ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ತಿರುಗಿ ಬಿದ್ದಿರುವ ಮಹಾರಾಷ್ಟ್ರದ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್, ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಆರ್ಯನ್ ಖಾನ್ ಅವರನ್ನು ಎಳೆದು ತರಲಾಗಿದೆ ಎಂದು ಆರೋಪಿಸಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಪ್ರಭಾವಿಗಳನ್ನು ರಕ್ಷಿಸಲು ಆರ್ಯನ್ ಖಾನ್ ಅವರನ್ನು ಬಲಿಪಶು ಮಾಡಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ವಾಂಖೆಡೆ ನಡೆ ಅನುಮಾನಾಸ್ಪದವಾಗಿದೆ ಎಂದು ನವಾಬ್ ಮಲಿಕ್ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಸಮೀರ್ ವಾಂಖೆಡೆ ಓರ್ವ ಭ್ರಷ್ಟ ಅಧಿಕಾರಿ ಎಂದೂ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.


ಇನ್ನು ಪ್ರಕರಣದ ಪ್ರಮುಖ ಸಾಕ್ಷಿದಾರ ಕೆಸಿ ಗೋಸಾವಿ ಅವರ ಭದ್ರತಾ ಸಿಬ್ಬಂದಿ ಎಂದು ಹೇಳಿಕೊಂಡಿರುವ ಪ್ರಭಾಕರ್ ಸೈಲ್ ಎಂಬಾತ, ಆರ್ಯನ್ ಖಾನ್ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಲು ಶಾರೂಕ್ ಖಾನ್ ಅವರ ಮ್ಯಾನೇಜರ್ ಹಾಗೂ ಗೋಸಾವಿ ನಡುವೆ 18 ಕೋಟಿ ರೂ. ಡೀಲ್ ನಡೆದಿದೆ ಎಂದು ಆರೋಪಿಸಿದ್ದಾನೆ. ಅಲ್ಲದೇ ಈ ಪೈಕಿ 8 ಕೋಟಿ ರೂ.ಗಳನ್ನು ಸಮೀರ್ ವಾಂಖೆಡೆ ಅವರಿಗೆ ನೀಡಬೇಕು ಎಂದು ಒಪ್ಪಂದವಾಗಿದೆ ಎಂದೂ ಸೈಲ್ ಹೇಳಿಕೆ ನೀಡಿದ್ದಾನೆ.

ಸೈಲ್‌ನ ಈ ಹೇಳಿಕೆ ನವಾಬ್ ಮಲಿಕ್ ಆರೋಪಗಳಿಗೆ ಪುಷ್ಠಿ ನೀಡುವಂತಿದ್ದು, ಇದೇ ಕಾರಣಕ್ಕೆ ನವಾಬ್ ಮಲಿಕ್ ಇದೀಗ ಇನ್ನೂ ಆಕ್ರಮಣಕಾರಿಯಾಗಿ ಸಮೀರ್ ವಾಂಖೆಡೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಲ್ಲದೇ ವಾಂಖೆಡೆ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡಿರುವ ಮಲಿಕ್, ತನಿಖೆ ಮಾಡುವಂತೆ ಎನ್‌ಸಿಬಿಗೆ ಪತ್ರ ಬರೆದಿದ್ದಾರೆ.

ವಾಂಖೆಡೆ ತಿರುಗೇಟು:
ಇನ್ನು ನವಾಬ್ ಮಲಿಕ್ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿರುವ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ, ನವಾಬ್ ಮಲಿಕ್ ತಮ್ಮ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಎಂಬಾತನನ್ನು ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣವನ್ನು ಮುಚ್ಚಿ ಹಾಕಲು ನವಾಬ್ ಮಲಿಕ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂಬುದು ಸಮೀರ್ ವಾಂಖೆಡೆ ವಾದ.

ಬಂಧನದ ಭೀತಿಯಿಂದ ಆ ರಾಜಕಾರಣಿ ನಲುಗಿದ್ದಾರೆ: ಸಮೀರ್ ವಾಂಖೆಡೆ ಆಕ್ರೋಶ!
ಅಲ್ಲದೇ ತಮ್ಮ ಮೇಲೆ ಭ್ರಷ್ಟಾಚಾರ ಆರೋಪ ಮಾಡಿರುವುದು ಡ್ರಗ್ಸ್ ಪ್ರಕರಣದ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಎಂದೂ ವಾಂಖೆಡೆ ಕಿಡಿಕಾರಿದ್ದಾರೆ. ಈ ಕುರಿತು ಮುಂಬಯಿ ಪೊಲೀಸ್ ಆಯಕ್ತ ಮತ್ತು ಇತರ ತನಿಖಾ ಸಂಸ್ಥೆಅಗಳಿಗೆ ವಾಂಖೆಡೆ ಪತ್ರ ಬರೆದಿದ್ದಾರೆ.

ಸದ್ಯ ಸಮೀರ್ ವಾಂಖೆಡೆ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಗಳನ್ನು ತನಿಖೆ ಮಾಡಲು ಎನ್‌ಸಿಬಿ ನಿರರ್ಧರಿಸಿದೆ. ಆದರೆ ನವಾಬ್ ಮಲಿಕ್ ಮತ್ತು ಸಮೀರ್ ವಾಂಖೆಡೆ ನಡುವಿನ ಈ ಜಂಗಿ ಕುಸ್ತಿ, ಡ್ರಗ್ಸ್ ಪ್ರಕರಣವನ್ನು ಮರೆಮಾಚುತ್ತಿದೆ ಎಂಬುದು ಸತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ