ಆ್ಯಪ್ನಗರ

ಕೃಷ್ಣಾ ನೀರಿಗೆ ಆಂಧ್ರ-ತೆಲಂಗಾಣ ಜಟಾಪಟಿ

ರಾಜ್ಯದಲ್ಲಿ ಕಾವೇರಿ ವಿವಾದ ಭುಗಿಲೆದ್ದಿರುವ ಬೆನ್ನಿಗೇ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ನಡುವೆ ಕೃಷ್ಣೆಯ ನೀರಿಗಾಗಿ ಕಲಹ ಶುರುವಾಗಿದೆ.

ಏಜೆನ್ಸೀಸ್ 22 Sep 2016, 4:19 am
ಹೊಸದಿಲ್ಲಿ: ರಾಜ್ಯದಲ್ಲಿ ಕಾವೇರಿ ವಿವಾದ ಭುಗಿಲೆದ್ದಿರುವ ಬೆನ್ನಿಗೇ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ನಡುವೆ ಕೃಷ್ಣೆಯ ನೀರಿಗಾಗಿ ಕಲಹ ಶುರುವಾಗಿದೆ.
Vijaya Karnataka Web krishna water from andhra telangana flair
ಕೃಷ್ಣಾ ನೀರಿಗೆ ಆಂಧ್ರ-ತೆಲಂಗಾಣ ಜಟಾಪಟಿ


ಕೃಷ್ಣಾ ನದಿಗೆ ಅಡ್ಡಲಾಗಿ ತೆಲಂಗಾಣ ಸರಕಾರ ಎರಡು ಅಕ್ರಮ ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ ಎಂದು ಆಂಧ್ರ ಪ್ರದೇಶ ಆರೋಪಿಸಿದೆ.

ನೀರಾವರಿ ಉದ್ದೇಶಕ್ಕೆ ತೆಲಂಗಾಣ ನಿರ್ಮಿಸುತ್ತಿರುವ ಈ ಅಣೆಕಟ್ಟುಗಳಿಂದ ಪ್ರಸ್ತುತ ಆಂಧ್ರದಲ್ಲಿರುವ ನೀರಾವರಿ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಳವಳ ವ್ಯಕ್ತಪಡಿಸಿದ್ದಾರೆ.

ಆದರೆ, ಬಾಬು ಆರೋಪಗಳನ್ನು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಅವರು ಆಧಾರರಹಿತ ಎಂದು ತಳ್ಳಿ ಹಾಕಿದ್ದಾರೆ.

ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಉನ್ನತ ಜಲ ಮಂಡಳಿಯ ಮೊದಲ ಸಭೆಯಲ್ಲಿ ಚಂದ್ರಬಾಬು ಹಾಗೂ ಕೆಸಿಆರ್‌ ಈ ಕುರಿತು ಪರಸ್ಪರ ವಾದ ಮಂಡಿಸಿದ್ದಾರೆ.

ಪ್ರಸ್ತುತ ಚಂದ್ರಬಾಬು ಅವರು ಆರೋಪಿಸಿರುವ ನೀರಾವರಿ ಯೋಜನೆಗಳಿಗೆ ರಾಜ್ಯ ವಿಭಜನೆಗೆ ಮುನ್ನವೇ ಆಂಧ್ರ ಪ್ರದೇಶ ಸರಕಾರ ಚಾಲನೆ ನೀಡಿತ್ತು. ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ ಅನುಮತಿ ಮೇರೆಗೆ ಅವುಗಳನ್ನು ಕೈಗೆತ್ತಿಕೊಳ್ಳಲಾಗಿರುವುದರಿಂದ ಅಕ್ರಮದ ಪ್ರಶ್ನೆ ಬರುವುದಿಲ್ಲ ಎಂದು ಕೆಸಿಆರ್‌ ಸಮರ್ಥಿಸಿಕೊಂಡಿದ್ದಾರೆ.

ತೆಲಂಗಾಣ ರಾಜ್ಯ ತನ್ನ ಪಾಲಿನ 299 ಟಿಎಂಸಿ ಕೃಷ್ಣಾ ನೀರಿನಲ್ಲಿ ಈಗಾಗಲೇ 295.86 ಟಿಎಂಸಿ ನೀರನ್ನು ಬಳಸಿಕೊಂಡಿದೆ. ಹಾಗಾಗಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಅಕ್ರಮ ಎಂದು ಆಂಧ್ರ ಸರಕಾರ ಹೇಳಿದೆ.

ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಹಾಗೂ ಮಹಾನದಿ ವಿಚಾರವಾಗಿ ಒಡಿಶಾ ಮತ್ತು ಛತ್ತೀಸ್‌ಗಢ ರಾಜ್ಯಗಳ ನಡುವೆ ವಿವಾದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಉನ್ನತ ಜಲ ಮಂಡಳಿ ಸಭೆ ಕರೆಯಲಾಗಿತ್ತು.

ಜಂಟಿ ಸಮಿತಿ ರಚನೆ:

ಉಭಯ ರಾಜ್ಯಗಳ ಜಟಾಪಟಿ ಹಿನ್ನೆಲೆಯಲ್ಲಿ ಕೃಷ್ಣ ಕೊಳ್ಳದಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ತಿಳಿಯಲು ಜಂಟಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಕೇಂದ್ರ ಹಾಗೂ ಉಭಯ ರಾಜ್ಯಗಳ ಅಧಿಕಾರಿಗಳು ಈ ಸಮಿತಿಯಲ್ಲಿ ಇರಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ