ಹೊಸದಿಲ್ಲಿ: ಮುಂದಿನ ವರ್ಷ ಫೆ.7ರಿಂದ ಫೆ.26ರ ತನಕ ಹಾಸನದ ಶ್ರವಣಬೆಳಗೊಳದಲ್ಲಿ ಜೈನ್ ಸಮುದಾಯದ ಉತ್ಸವ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಅದಕ್ಕಾಗಿ ಕರ್ನಾಟಕ ಸರಕಾರ ಕೇಂದ್ರದ ನೆರವಿಗಾಗಿ ಕಾದು ಕುಳಿತಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿಯೂ ಆಗಿರುವ ರೇಷ್ಮೆ ಮತ್ತು ಪಶು ಸಂಗೋಪನೆ ಸಚಿವ ಎ. ಮಂಜು ತಿಳಿಸಿದ್ದಾರೆ.
ಶ್ರವಣಬೆಳಗೊಳದ ಗೋಮಟೇಶ್ವರ ಮೂರ್ತಿಗೆ ಪ್ರತೀ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ.
''ಜೈನ ಸಮುದಾಯದ ಮಹೋತ್ಸವಕ್ಕೆ ಭರಪೂರ ತಯಾರಿ ನಡೆದಿದೆ. ಈಗಾಗಲೇ ಶೇ.75ರಷ್ಟು ಕೆಲಸ ಮುಗಿದಿದೆ. ರಸ್ತೆ ಸಂಪರ್ಕ ಮತ್ತಿತರ ಮೂಲಸೌಕರ್ಯಗಳು ಪ್ರಗತಿಯಲ್ಲಿವೆ. ರಾಜ್ಯ ಸರಕಾರದಿಂದ 263 ಕೋಟಿ ಬಿಡುಗಡೆಯಾಗಿದೆ. ಈ ಪೈಕಿ, 88 ಕೋಟಿ ರಸ್ತೆ ಮತ್ತಿತರ ಮೂಲಸೌಕರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ,'' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸಚಿವರು ತಿಳಿಸಿದರು.
ಕೇಂದ್ರದಿಂದ ಹಣ ಬಿಡುಗಡೆಯಾಗಿದೆಯೇ ಎಂದು ಕೇಳಿದ್ದಕ್ಕೆ, ''ಅದಕ್ಕಾಗಿಯೇ ಕಾಯುತ್ತಿದ್ದೇವೆ. ಬಹಳ ಹಿಂದೆಯೇ 500 ಕೋಟಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. 2006ರ ಉತ್ಸವಕ್ಕೆ ಕೇಂದ್ರ 30 ಕೋಟಿ ಬಿಡುಗಡೆ ಮಾಡಿದ್ದರೆ, ರಾಜ್ಯ ಸರಕಾರ 90 ಕೋಟಿ ರೂ. ವಿನಿಯೋಗಿಸಿತ್ತು,'' ಎಂದು ಉತ್ತರಿಸಿದರು.