ಆ್ಯಪ್ನಗರ

ಎಲ್ಲ ಮೋದಿಗಳೂ ಚೋರರು ಎಂದ ರಾಹುಲ್‌ಗೆ ಬಿಸಿ ಮುಟ್ಟಿಸ್ತೇನೆ: ಲಲಿತ್ ಮೋದಿ

2010ರಲ್ಲಿ, 3ನೇ ಐಪಿಎಲ್‌ ವೇಳೆ ಮನಿ ಲಾಂಡರಿಂಗ್‌ ಹಗರಣ ಬೆಳಕಿಗೆ ಬಂದ ಹಿನ್ನೆಲೆ ಐಪಿಎಲ್‌ ಮುಖ್ಯಸ್ಥ ಹುದ್ದೆಯನ್ನು ಕಳೆದುಕೊಂಡಿದ್ದಲ್ಲದೆ, ಬಂಧನದ ಭೀತಿಯಿಂದ ಲಂಡನ್‌ಗೆ ಪಲಾಯನ ಮಾಡಿದ್ದಾರೆ. 2013ರಲ್ಲಿ ಬಿಸಿಸಿಐ ಲಲಿತ್‌ ಮೋದಿಗೆ ಆಜೀವ ನಿಷೇಧ ಹೇರಿದೆ.

Vijaya Karnataka Web 19 Apr 2019, 2:29 pm
Vijaya Karnataka Web Lalit Modi
ಹೊಸದಿಲ್ಲಿ: 'ಕಳ್ಳರೆಲ್ಲ ಏಕೆ ತಮ್ಮ ಹೆಸರನ್ನು ಮೋದಿ ಎಂದು ಇಟ್ಟು ಕೊಂಡಿದ್ದಾರೆ' ಎಂಬುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆಯಿಂದ ಮನಿ ಲಾಂಡರಿಂಗ್‌ ಪ್ರಕರಣದ ಪ್ರಮುಖ ಆರೋಪಿ, ರಾಷ್ಟ್ರ ಬಿಟ್ಟು ಓಡಿಹೋಗಿರುವ ಲಲಿತ್‌ ಮೋದಿಗೆ ಚುರುಕ್‌ ಎಂದಿದ್ದು, ರಾಹುಲ್ ವಿರುದ್ಧ ಕೋರ್ಟ್‌ ಮೆಟ್ಟಿಲೇರುವ ಬೆದರಿಕೆ ಒಡ್ಡಿದ್ದಾರೆ.

ಬಿಹಾರ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ರಾಹುಲ್‌ ವಿರುದ್ಧ ದೂರು ದಾಖಲಿಸಿದ ಬೆನ್ನಲ್ಲೇ ಮೋದಿ ಸರ್‌ನೇಮ್‌ ಹೊಂದಿರುವ ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಕಾಂಗ್ರೆಸ್‌ ಅಧ್ಯಕ್ಷರ ವಿರುದ್ಧ ಲಂಡನ್‌ ಕೋರ್ಟ್‌ನಲ್ಲಿ ದಾವೆ ಹೂಡುವುದಾಗಿ ಟ್ವೀಟ್‌ ಮಾಡಿದ್ದಾರೆ. ವಾಸ್ತವದಲ್ಲಿ ಗಾಂಧಿ ಕುಟುಂಬ ಐದು ದಶಕಗಳಿಂದ ರಾಷ್ಟ್ರವನ್ನು ಲೂಟಿ ಮಾಡಿದೆ ಎಂದು ಟ್ವೀಟ್‌ನಲ್ಲಿ ಲಲಿತ್‌ ಆರೋಪಿಸಿದ್ದಾರೆ.


ರಾಹುಲ್‌ ವಿವಾದಾತ್ಮಕ ಹೇಳಿಕೆ ವಿರುದ್ಧ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರು ಪಟನಾದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಗುರುವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ರಾಹುಲ್‌ ಅವರು ಏಪ್ರಿಲ್‌ 13ರಂದು ಮಹಾರಾಷ್ಟ್ರದ ರ್ಯಾಲಿಯಲ್ಲಿ ನೀಡಿರುವ ನಿಂದಾತ್ಮಕ ಹೇಳಿಕೆಯಿಂದ ನೋವಾಗಿದೆ ಎಂದು ಸುಶೀಲ್‌ ಕುಮಾರ್‌ ದೂರಿನಲ್ಲಿ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ 500ನೇ ವಿಧಿ (ಶಿಕ್ಷಾರ್ಹ ನಿಂದನೆ) ಅನ್ವಯ ಪ್ರಕರಣ ದಾಖಲಾಗಿದೆ. ಹೊಸದಿಲ್ಲಿಯ ಪಟಿಯಾಲಾ ಹೌಸ್‌ ನ್ಯಾಯಲಯದಲ್ಲಿ ಜೋಗಿಂದರ್‌ ತುಲಿ ಎನ್ನುವವರು ಸಹ ರಾಹುಲ್‌ ವಿರುದ್ಧ ಗುರುವಾರ ದೂರು ಸಲ್ಲಿಸಿದ್ದು, ಎಫ್‌ಐಆರ್‌ ದಾಖಲಿಸುವಂತೆ ಕೋರಿದ್ದಾರೆ.

ಲಲಿತ್‌ ಮೋದಿ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭಿಸಿದವರು. 2010ರಲ್ಲಿ, 3ನೇ ಐಪಿಎಲ್‌ ವೇಳೆ ಮನಿ ಲಾಂಡರಿಂಗ್‌ ಹಗರಣ ಬೆಳಕಿಗೆ ಬಂದ ಹಿನ್ನೆಲೆ ಐಪಿಎಲ್‌ ಮುಖ್ಯಸ್ಥ ಹುದ್ದೆಯನ್ನು ಕಳೆದುಕೊಂಡಿದ್ದಲ್ಲದೆ, ಬಂಧನದ ಭೀತಿಯಿಂದ ಲಂಡನ್‌ಗೆ ಪಲಾಯನ ಮಾಡಿದ್ದಾರೆ. 2013ರಲ್ಲಿ ಬಿಸಿಸಿಐ ಲಲಿತ್‌ ಮೋದಿಗೆ ಆಜೀವ ನಿಷೇಧ ಹೇರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ