ಆ್ಯಪ್ನಗರ

ಲಂಕಾ ಸ್ಫೋಟಗಳ ಹಿಂದೆ ಕೇರಳದ ಐಸಿಸ್‌ ಘಟಕಗಳ ಕೈವಾಡ? ಎನ್‌ಐಎ ತನಿಖೆ

ಶ್ರೀಲಂಕಾ ದಾಳಿಯ ಸಂಚುಕೋರನೆಂದು ಶಂಕಿಸಲಾದ ಝಹ್ರಾನ್ ಹಾಶಿಂಗೆ ಕಳೆದ ಮೂರು ವರ್ಷಗಳಿಂದ ಕೇರಳ ಮತ್ತು ತಮಿಳುನಾಡಿನ ಐಸಿಸ್‌ ಬೆಂಬಲಿಗರ ಜತೆ ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಂತ ಸಾಮಾಜಿಕ ಜಾಲತಾಣಗಳು ಮೂಲಕ ನೇರ ಸಂಪರ್ಕವಿದೆ ಎಂದು ತನಿಖಾ ಸಂಸ್ಥೆ ಹೇಳಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಕ್ಷಿಣ ಭಾರತದಿಂದ ಐಸಿಸ್‌ ಬೆಂಬಲಿಗರಾದ ಮೊಹಮ್ಮದ್ ಆಶಿಕ್, ಇಸ್ಮಾಯಿಲ್, ಸಂಸುದ್ದೀನ್, ಜಫಾರ್ ಸಾದಿಕ್ ಮತ್ತು ಸಾಹುಲ್ ಹಮೀದ್ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದೆ. ಇವರ ಪೈಕಿ ಕೆಲವರು ಹಾಶಿಂ ಜತೆ ನೇರ ಸಂಪರ್ಕ ಹೊಂದಿದ್ದಾರೆ.

Vijaya Karnataka Web 26 Apr 2019, 9:03 am
ಕೋಯಿಕ್ಕೋಡ್: ಶ್ರೀಲಂಕಾದಲ್ಲಿ 350ಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡ ಸರಣಿ ಬಾಂಬ್‌ ಸ್ಫೋಟಗಳ ಹಿಂದೆ ಕೇರಳದಲ್ಲಿರುವ ಐಸಿಸ್ ಜಾಲದ ಕೈವಾಡವಿದೆಯೆ ಎಂಬ ಬಗ್ಗೆ ಭದ್ರತಾ ಪಡೆಗಳು ತನಿಖೆ ಆರಂಭಿಸಿವೆ.
Vijaya Karnataka Web Lanka Terror attack


ಐಸಿಸ್‌ ಜತೆ ಸಂಪರ್ಕದ ಹಿನ್ನೆಲೆಯಲ್ಲಿ ಈ ಹಿಂದೆ ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಬಿಡುಗಡೆ ಮಾಡಲಾಗಿದ್ದ ಹಲವರನ್ನು ಮತ್ತೆ ಲಂಕಾ ದಾಳಿಗೆ ಸಂಬಂಧಿಸಿದ ಸುಳಿವುಗಳಿಗಾಗಿ ವಿಚಾರಣೆ ನಡೆಸಲಾಗುತ್ತಿದೆ.

ಈ ವರೆಗೆ ಮಹತ್ವದ ಸುಳಿವುಗಳೇನೂ ಸಿಕ್ಕಿಲ್ಲ. ಆದರೆ ಶ್ರೀಲಂಕಾದಲ್ಲಿರುವ ಐಸಿಸ್ ಉಗ್ರ ಆದಿಲ್ ಎಎಕ್ಸ್‌ ಎಂಬಾತನ ಫೇಸ್‌ಬುಕ್ ಪೋಸ್ಟ್‌ಗಳನ್ನು ಕೇರಳದ ಐಸಿಸ್‌ ಬೆಂಬಲಿಗರು ಶೇರ್ ಮಾಡಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆದಿಲ್ 'ಡಿಡ್‌ ಯೂ ನೋ' ಎಂಬ ಫೇಸ್‌ಬುಕ್ ಪುಟವನ್ನು ನಿರ್ವಹಿಸುತ್ತಿದ್ದು, ಅದರಲ್ಲಿ 'ಇಸ್ಲಾಂನ ವೈಭವದ ಇತಿಹಾಸ' ಕುರಿತ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದಾನೆ. ಐಸಿಸ್‌ ಕೃತ್ಯಗಳ ಸಮರ್ಥನೆಗೂ ಇದನ್ನು ಬಳಸಿಕೊಳ್ಳುತ್ತಿದ್ದಾನೆ.

ಶ್ರೀಲಂಕಾ ದಾಳಿಯ ಸಂಚುಕೋರನೆಂದು ಶಂಕಿಸಲಾದ ಝಹ್ರಾನ್ ಹಾಶಿಂಗೆ ಕಳೆದ ಮೂರು ವರ್ಷಗಳಿಂದ ಕೇರಳ ಮತ್ತು ತಮಿಳುನಾಡಿನ ಐಸಿಸ್‌ ಬೆಂಬಲಿಗರ ಜತೆ ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಂತ ಸಾಮಾಜಿಕ ಜಾಲತಾಣಗಳು ಮೂಲಕ ನೇರ ಸಂಪರ್ಕವಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಕ್ಷಿಣ ಭಾರತದಿಂದ ಐಸಿಸ್‌ ಬೆಂಬಲಿಗರಾದ ಮೊಹಮ್ಮದ್ ಆಶಿಕ್, ಇಸ್ಮಾಯಿಲ್, ಸಂಸುದ್ದೀನ್, ಜಫಾರ್ ಸಾದಿಕ್ ಮತ್ತು ಸಾಹುಲ್ ಹಮೀದ್ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದೆ. ಇವರ ಪೈಕಿ ಕೆಲವರು ಹಾಶಿಂ ಜತೆ ನೇರ ಸಂಪರ್ಕ ಹೊಂದಿದ್ದಾರೆ.

ಹಾಶಿಂ ಮಾಡುವ ದ್ವೇಷ ಭಾಷಣಕ್ಕೂ ಕೇರಳದ ಉಗ್ರ ಸಲಫಿ ಭಾಷಣಕಾರರು ಮಾಡುವ ಭಾಷಣಕ್ಕೂ ನಿಕಟ ಸಾಮ್ಯತೆ ಇರುವುದು ಕುತೂಹಲಕರವಾಗಿದೆ. 'ಅವಿಶ್ವಾಸಿಗಳ ನಾಡಿನಲ್ಲಿ' ಬದುಕುವ ಮುಸ್ಲಿಮರು ಎದುರಿಸುತ್ತಿರುವ 'ಅಪಾಯ'ಗಳ ಬಗ್ಗೆ ಹಾಗೂ 'ಕಾಫಿರರಿಂದ' ಅಂತರ ಕಾಯ್ದುಕೊಳ್ಳುವ ಅಗತ್ಯದ ಬಗ್ಗೆ ಎರಡೂ ಭಾಷಣಗಳಲ್ಲಿ ಅತ್ಯಂತ ನಿಕಟ ಸಾಮ್ಯತೆ ಇದೆ.

ಮಲಯಾಳಿ ಐಎಸ್‌ ನೇಮಕಾತಿ ಜಾಲದ ವ್ಯಕ್ತಿಗಳು 2016ರಲ್ಲಿ ಶ್ರೀಲಂಕಾದಲ್ಲಿ ಹದೀಸ್ ಅಧ್ಯಯನಕ್ಕೆ ತೆರಳಿದ್ದರು. ಲಂಕಾದ ಹದೀಸ್ ಅಧ್ಯಯನ ಸಂಸ್ಥೆಯನ್ನು ನವಾಸ್ ಅಲ್ ಹಿಂದಿ ಎಂಬ ಸಲಫಿ ಬೋಧಕ ನಡೆಸುತ್ತಿದ್ದ. ಬಳಿಕ ಆತ ಅಫ್ಘಾನಿಸ್ತಾನದ ಐಎಸ್‌ ಪ್ರಾಬಲ್ಯದ ಸ್ಥಳಕ್ಕೆ ವಲಸೆ ಹೋದ.

ಕಾಸರಗೋಡಿನ ಐಸಿಸ್ ಕಾರ್ಯಕರ್ತರಾದ ಅಬ್ದುಲ್ ರಶೀದ್, ಅಶ್ಪಾಕ್ ಮಜೀದ್ ಮತ್ತು ಹಫೀಸುದ್ದೀನ್‌ ಲಂಕಾಗೆ ತೆರಳಿ ಅಲ್ ಹಿಂದಿ ನಡೆಸುತ್ತಿದ್ದ ಕೇಂದ್ರಕ್ಕೆ ಸೇರಿದ್ದರು. ಆದರೆ ಐಸಿಸ್ ಕುರಿತ ವಾಗ್ವಾದದ ಬಳಿಕ ಆ ಕೇಂದ್ರವನ್ನು ತೊರೆದಿದ್ದರು.

ಐಸಿಸ್ ಪರವಾಗಿ ಮಾತನಾಡಿದ ಕಾರಣಕ್ಕೆ ತನ್ನ ಅಧ್ಯಯನ ಕೇಂದ್ರದಿಂದ ಮಲಯಾಳಿಗಳನ್ನು ಹೊರದಬ್ಬಿದ್ದಾಗಿ ನಂತರ ಅಲ್‌-ಹಿಂದಿ ಹೇಳಿದ್ದ. ತನ್ನ ಅಧ್ಯಯನ ಕೇಂದ್ರ ಯಾವ ರೀತಿಯಲ್ಲೂ ಉಗ್ರ ಸಂಘಟನೆಗಳ ಜತೆ ಸಂಪರ್ಕ ಇಟ್ಟುಕೊಳ್ಳಲು ಬಯಸುವುದಿಲ್ಲ ಎಂದು ಅಲ್ ಹಿಂದಿ ಹೇಳಿದ್ದ.

2016ರಲ್ಲಿ ಕಣ್ಣೂರು ಜಿಲ್ಲೆಯ ಕನಕಮಾಲದಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದ 15 ಐಸಿಸ್ ಉಗ್ರರು ವಿಚಾರಣೆ ವೇಳೆ ಅಲ್-ಹಿಂದಿ ಹೇಳಿದ ವಿಚಾರವನ್ನು ಬಾಯಿಬಿಟ್ಟಿದ್ದರು.

ತನಿಖಾ ಸಂಸ್ಥೆಗಳ ಪ್ರಕಾರ, ಕೇರಳದ ಐಸಿಸ್ ಬೆಂಬಲಿಗರು ಕೇರಳದ ಹೊರಗಿನ ಯಹೂದಿಗಳು ಮತ್ತು ರಾಜಕೀಯ ನಾಯಕರ ಮೇಲೆ ದಾಳಿ ನಡೆಸಲು ಸ್ಕೆಚ್ ಹಾಕುತ್ತಿದ್ದರು. ಆದರೆ ಈ ಸಂಚಿನ ಮಾಹಿತಿ ತಿಳಿಯುತ್ತಿದ್ದಂತೆ ಎನ್‌ಐಎ ಉಗ್ರರ ಸಂಚುಗಳನ್ನು ವಿಫಲಗೊಳಿಸಿತ್ತು. ಕನಕಮಾಲದಲ್ಲಿ ಬಂದಿಸಲಾದ ಕೆಲವು ಐಸಿಸ್ ಉಗ್ರರಿಗೆ ತಮಿಳುನಾಡಿನ ಐಸಿಸ್ ಮಾಡ್ಯೂಲ್‌ಗಳ ಜತೆ ಸಂಪರ್ಕವಿತ್ತು.

ತಮಿಳುನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಲಾದ ಐಎಸ್ ಕಾರ್ಯಕರ್ತ ಸುಭಾನಿ ಹಾಜಾ ಮೊಯ್ದೀನ್ ಸಿರಿಯಾದಲ್ಲಿ ಭಯೋತ್ಪಾದನೆ ತರಬೇತಿ ಪಡೆದು ಬಂದಿದ್ದ. 2015ರಲ್ಲಿ ಪ್ಯಾರಿಸ್ ದಾಳಿ ನಡೆಸಿದ್ದ ಸಂಘಟನೆಯೇ ಈತನಿಗೆ ತರಬೇತಿ ನೀಡಿತ್ತು.

ಈ ನಡುವೆ, ಕೇರಳದ ಹಲವು ಮುಸ್ಲಿಂ ಸಂಘಟನೆಗಳು ಶ್ರೀಲಂಕಾ ಸ್ಫೋಟಗಳನ್ನು ಖಂಡಿಸಿವೆ. ಕಾಂತಾಪುರಂ ಸುನ್ನಿ ಮುಖಂಡ ಅಬೂಬಕ್ಕರ್ ಮುಸ್ಲಿಯಾರ್, 'ಈ ದಾಳಿ ನಡೆಸಿದವರಿಗೂ ಇಸ್ಲಾಂಗೂ ಸಂಬಂಧವಿಲ್ಲ' ಎಂದು ಹೇಳಿಕೆ ನೀಡಿದ್ದರು.

'ದಾಳಿಕೋರರು ನಡೆಸಿದ ಕೃತ್ಯ ಇಸ್ಲಾಂಗೆ ವಿರುದ್ಧವಾದುದು. ಆತ್ಮಹತ್ಯಾ ದಾಳಿ ಘೋರ ಅಪರಾಧವಾಗಿದ್ದು, ಯಾವುದೇ ಧರ್ಮವೂ ಅದನ್ನು ಬೆಂಬಲಿಸುವುದಿಲ್ಲ' ಎಂದು ಅವರು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ