ಆ್ಯಪ್ನಗರ

ಪ್ರತ್ಯೇಕತಾವಾದಿಗಳ ಬಂಧನದ ಬಳಿಕ ಗೊಂದಲ, ಆತಂಕಗಳ ಮಡುವಿನಲ್ಲಿ ಶ್ರೀನಗರ

ಹಠಾತ್ತನೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅರೆಸೇನಾ ಪಡೆಗಳ ನಿಯೋಜನೆಗೆ ಸೂಕ್ತ ಕಾರಣ ನೀಡಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಹಾಗಿದ್ದರೂ, ಮುಂದಿನ ವಾರ ಸುಪ್ರೀಂ ಕೋರ್ಟಿನಲ್ಲಿ 35ಎ ವಿಧಿಯ ಸಿಂಧುತ್ವ ಕುರಿತು ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಅಲ್ಲದೆ ಸುಗ್ರೀವಾಜ್ಞೆ ಮೂಲಕ ವಿಧಿಯನ್ನು ರದ್ದುಪಡಿಸಲು ಕೇಂದ್ರ ಸನ್ನಾಹ ನಡೆಸಿದೆ ಎಂದೂ ಕಾಶ್ಮೀರ ಕಣಿವೆಯಲ್ಲಿ ವದಂತಿಗಳು ಹಬ್ಬಿವೆ.

Vijaya Karnataka Web 24 Feb 2019, 10:46 am
ಶ್ರೀನಗರ: ಕೇಂದ್ರ ಸರಕಾರ ಶನಿವಾರ ಕೈಗೊಂಡ ಕೆಲವು 'ತುರ್ತು' ಕ್ರಮಗಳಿಂದ ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರ ವದಂತಿ, ಗೊಂದಲ ಮತ್ತು ಆತಂಕದ ಗೂಡಾಯಿತು. ಪಾಕ್‌ ಪರ ಸಂಘಟನೆ ಜಮಾತೆ ಇಸ್ಲಾಮಿ ಮತ್ತು ಹುರಿಯತ್ ಕಾನ್ಫರೆನ್ಸ್‌ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಹಾಗೂ 10,000 ಅರೆಸೇನಾ ಪಡೆಗಳ ನಿಯೋಜನೆ ಮೂಲಕ ಕೇಂದ್ರ ಸರಕಾರ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದದ ವಿರುದ್ಧ ನಿರ್ಣಾಯಕ ಸಮರ ಸಾರುವ ಮುನ್ಸೂಚನೆ ನೀಡಿದೆ.
Vijaya Karnataka Web CRPF


ಹಠಾತ್ತನೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅರೆಸೇನಾ ಪಡೆಗಳ ನಿಯೋಜನೆಗೆ ಸೂಕ್ತ ಕಾರಣ ನೀಡಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಹಾಗಿದ್ದರೂ, ಮುಂದಿನ ವಾರ ಸುಪ್ರೀಂ ಕೋರ್ಟಿನಲ್ಲಿ 35ಎ ವಿಧಿಯ ಸಿಂಧುತ್ವ ಕುರಿತು ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಅಲ್ಲದೆ ಸುಗ್ರೀವಾಜ್ಞೆ ಮೂಲಕ ವಿಧಿಯನ್ನು ರದ್ದುಪಡಿಸಲು ಕೇಂದ್ರ ಸನ್ನಾಹ ನಡೆಸಿದೆ ಎಂದೂ ಕಾಶ್ಮೀರ ಕಣಿವೆಯಲ್ಲಿ ವದಂತಿಗಳು ಹಬ್ಬಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರಗಿನವರು ಸ್ಥಿರಾಸ್ತಿ ಖರೀದಿಸುವುದು ಮತ್ತು ಕಾಯಂ ವಾಸ್ತವ್ಯ ಹೂಡುವುದನ್ನು ಹಾಗೂ ರಾಜ್ಯ ಸರಕಾರದ ಯೋಜನೆಗಳ ಲಾಭ ಪಡೆಯುವುದನ್ನು 35ಎ ವಿಧಿ ನಿಷೇಧಿಸುತ್ತದೆ.

ಜೆಕೆಎಲ್‌ಎಫ್‌ ಮುಖ್ಯಸ್ಥ ಯಾಸಿನ್ ಮಲಿಕ್ ಬಂಧನದ ಬಳಿಕ ಕೇಂದ್ರ ಗೃಹಸಚಿವಾಲಯ 'ತುರ್ತಾಗಿ' 100 ಕಂಪನಿಗಳಷ್ಟು (10,000 ಮಂದಿ) ಸಿಆರ್‌ಪಿಎಫ್ ಯೋಧರನ್ನು ನಿಯೋಜಿಸಲು ಆದೇಶ ಹೊರಡಿಸಿತು. ಸಿಆರ್‌ಪಿಎಫ್‌ನ 45, ಬಿಎಸ್ಸೆಫ್‌ 35, ಎಸ್‌ಎಸ್‌ಬಿ 10 ಮತ್ತು ಐಟಿಬಿಪಿ 10 ಕಂಪನಿಗಳಷ್ಟು ಯೋಧರನ್ನು ತಕ್ಷಣದಿಂದಲೇ ನಿಯೋಜಿಸಲಾಗಿದೆ. ಈ ನಿರ್ಧಾರಕ್ಕೆ ಯಾವುದೇ ನಿರ್ದಿಷ್ಟ ಕಾರಣವನ್ನು ಸರಕಾರ ತನ್ನ ಆದೇಶ ಪತ್ರದಲ್ಲಿ ಉಲ್ಲೇಖಿಸಿಲ್ಲ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಆದೇಶದಲ್ಲಿ, ಸಿಆರ್‌ಪಿಎಫ್‌ ಕಂಪನಿಗಳ ಸ್ಥಿರ ಕಾವಲು ಕರ್ತವ್ಯಗಳನ್ನು ವಹಿಸಿಕೊಳ್ಳುವಂತೆ ಬಿಎಸ್ಸೆಫ್‌ ಮತ್ತು ಐಟಿಬಿಪಿ ಕಂಪನಿಗಳಿಗೆ ಸೂಚಿಸಲಾಗಿದೆ.

ಶುಕ್ರವಾರ ತಡರಾತ್ರಿ ಜಮಾತೆ ಇಸ್ಲಾಮಿ ಮುಖ್ಯಸ್ಥ ಡಾ. ಅಬ್ದುಲ್ ಹಮೀದ್ ಫಯಾಜ್ ಸಹಿತ ಹಲವು ಪ್ರತ್ಯೇಕತಾವಾದಿ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಅನಂತನಾಗ್, ಪಹಲ್ಗಾಂವ್, ದಿಯಾಲ್‌ಗಾಂವ್ ಮತ್ತು ದಕ್ಷಿಣ ಕಾಶ್ಮೀರದ ತ್ರಾಲ್‌ ಸೇರಿದಂತೆ ಹಲವು ಕಡೆಗಳಿಂದ ಈ ನಾಯಕರನ್ನು ಬಂಧಿಸಲಾಗಿದೆ.

ಪ್ರತ್ಯೇಕತಾವಾದಿಗಳ ಮೇಲೆ ಮುಗಿಬಿದ್ದ ಸರಕಾರ, 150ಕ್ಕೂ ಹೆಚ್ಚು ಬಂಧನ: ಕಾಶ್ಮೀರ ಉದ್ವಿಗ್ನ

ಅನಂತನಾಗ್ ಮತ್ತು ಬಂಡೀಪುರ ಜಿಲ್ಲೆ ಹಾಗೂ ಶ್ರೀನಗರ ಕೆಲವು ಕಡೆಗಳಲ್ಲಿ ಶನಿವಾರ ಸ್ಥಳೀಯರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದ ವರದಿಯಾಗಿದೆ. ಸಾಮೂಹಿಕ ಬಂಧನ ಮತ್ತು ರಾತ್ರಿ ರೇಡ್‌ಗಳನ್ನು ಪ್ರತಿಭಟಿಸಿ ಭಾನುವಾರ ಸಂಪೂರ್ಣ ಬಂದ್ ಆಚರಿಸುವಂತೆ ಪ್ರತ್ಯೇಕತಾವಾದಿ ಸಯ್ಯದ್ ಆಲಿ ಶಾ ಗಿಲಾನಿ ಮತ್ತು ಮಿರ್‌ವಾಯಿಜ್‌ ಉಮರ್ ಫಾರೂಕ್‌ ಕರೆ ನೀಡಿದ್ದಾರೆ.

ಕಾಶ್ಮೀರ ಸಮಸ್ಯೆಯ ಬೇರು ಆರ್ಟಿಕಲ್‌ 370
370ನೇ ವಿಧಿಯ ವಿಶೇಷ ಸ್ಥಾನಮಾನದ ಪರಿಣಾಮಗಳೇನು? ಇಲ್ಲಿದೆ ವಿವರ

ಪ್ರತ್ಯೇಕತಾವಾದಿ ನಾಯಕರ ಬಂದ್‌ ಕರೆ ಹಿನ್ನೆಲೆಯಲ್ಲಿ ಶ್ರೀನಗರ ಜಿಲ್ಲಾಡಳಿತ ಜನರ ಸಂಚಾರದ ಮೇಲೆ ಕೆಲವೊಂದು ನಿರ್ಬಂಧಗಳನ್ನು ಹೇರಿದೆ. 'ಎಲ್ಲ ಸುರಕ್ಷಿತ ಗಣ್ಯರು' ಕೂಡ ಸಂಚಾರ ನಿರ್ಬಂಧಿಸಬೇಕು ಎಂದು ಪೊಲೀಸ್ ಇಲಾಖೆ ಸಲಹೆ ನೀಡಿದೆ.

ಎಲ್ಲ ಜಿಲ್ಲೆಗಳಿಗೂ ತುರ್ತಾಗಿ ಅಗತ್ಯ ಔಷಧಗಳನ್ನು ಪೂರೈಸುವಂತೆ ರಾಜ್ಯ ಸರಕಾರ ಸಾರ್ವಜನಿಕ ಆರೋಗ್ಯದ ಮುಖ್ಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ. ಎಲ್ಲ ಸರಕಾರಿ ನೌಕರರ ರಜೆಗಳನ್ನು ರದ್ದುಪಡಿಸಲಾಗಿದೆ. ಆಹಾರ ಧಾನ್ಯ ಹಾಗೂ ರೇಷನ್ ಇಂಧನ ಪೂರೈಕೆಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಹಾಗೂ ಕಾಳಸಂತೆಕೋರರನ್ನು ಮಟ್ಟಹಾಕುವಂತೆ ನಾಗರಿಕ ಪೂರೈಕೆ ಇಲಾಖೆ ತನ್ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

'ಕಣಿವೆಯ ಜನ, ವಿಶೇಷವಾಗಿ ನಗರಗಳು ಮತ್ತು ಪಟ್ಟಣಗಳಲ್ಲಿರುವವರು ದೊಡ್ಡದೊಂದು ಸಂಕಷ್ಟ ಕಾದಿದೆ ಎಂದು ಆತಂಕಗೊಂಡಿದ್ದಾರೆ. ಜನರು ಆಹಾರ ಮತ್ತು ಇಂಧನವನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ಈ ಆತಂಕದ ವಾತಾವರಣಕ್ಕೆ ಕೆಲವು ಸರಕಾರಿ ಅಧಿಕಾರಿಗಳು ನೀರೆರೆಯುತ್ತಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಇವೆಲ್ಲ ದೈನಂದಿನ ಆದೇಶಗಳು ಎಂದು ಕೆಲವು ಅಧಿಕಾರಿಗಳು ಹೇಳಿದ್ದರೆ, ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇನ್ನು ಕೆಲವು ಅಧಿಕಾರಿಗಳು ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ