ಆ್ಯಪ್ನಗರ

ರೈಲಿನಲ್ಲಿ ಇಲಿ ತೋರಿಸಿದ್ದಕ್ಕೆ ಸಿಕ್ತು 19 ಸಾವಿರ ರೂ. ಪರಿಹಾರ

ದುರಂತೊ ರೈಲು ಬೋಗಿಯಲ್ಲಿ ಇಲಿ ಇದೆ ಹಾಗೂ ಸ್ವಚ್ಛತೆಯಿಂದ ಕೂಡಿಲ್ಲ ಎಂದು ದೂರು ನೀಡಿದ್ದಕ್ಕೆ ಮಹಾನಗರದ ಲಾಯರ್ ಒಬ್ಬರಿಗೆ ಗ್ರಾಹಕರ ರಕ್ಷಣಾ ವೇದಿಕೆಯು 19 ಸಾವಿರ ರೂ. ಪರಿಹಾರ ಒದಗಿಸಿದೆ

TIMESOFINDIA.COM 18 Jul 2018, 11:51 am
ಮುಂಬಯಿ: ದುರಂತೊ ರೈಲು ಬೋಗಿಯಲ್ಲಿ ಇಲಿ ಇದೆ ಹಾಗೂ ಸ್ವಚ್ಛತೆಯಿಂದ ಕೂಡಿಲ್ಲ ಎಂದು ದೂರು ನೀಡಿದ್ದಕ್ಕೆ ಮಹಾನಗರದ ಲಾಯರ್ ಒಬ್ಬರಿಗೆ ಗ್ರಾಹಕರ ರಕ್ಷಣಾ ವೇದಿಕೆಯು 19 ಸಾವಿರ ರೂ. ಪರಿಹಾರ ಒದಗಿಸಿದೆ. ಪ್ರಯಾಣಿಕರು ಹೆಚ್ಚು ಹಣವನ್ನು ನೀಡಿರುತ್ತಾರೆ. ಹೀಗಾಗಿ, ಅವರಿಗೆ ಉನ್ನತ ಸೌಲಭ್ಯವನ್ನು ಒದಗಿಸಬೇಕು. ಹೀಗಾಗಿ ಪ್ರಯಾಣಿಕರಲ್ಲಿ ಗುಣಮಟ್ಟದ ಸೇವೆ ನೀಡಲು ವಿಫಲವಾದ ಸೆಂಟ್ರಲ್ ರೈಲ್ವೆ ಇದಕ್ಕೆ ಹೊಣೆ ಹೊರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
Vijaya Karnataka Web duronto train


ನವೆಂಬರ್ 7, 2015ರಲ್ಲಿ ಅಡ್ವೊಕೇಟ್ ಶೀತಲ್ ಕನಾಕಿಯಾ ಹಾಗೂ ಅವರ ಸಂಬಂಧಿ ಹೇಮಾ ಕನಾಕಿಯಾ ಮಹಾರಾಷ್ಟ್ರದ ಮುಂಬಯಿಯಲ್ಲಿ ಎಕ್ಸ್‌ಪ್ರೆಸ್ ರೈಲನ್ನು ಹತ್ತಿದ್ದು, ನವೆಂಬರ್ 15, 2015ರಲ್ಲಿ ವಾಪಸ್ ಮರಳಿದ್ದಾರೆ. ಈ ವೇಳೆ ಶೀತಲ್ ಹಾಗೂ ಹೇಮಾ ಬೋಗಿಯಲ್ಲಿ ಇಲಿಗಳನ್ನು ನೋಡಿದ್ದಕ್ಕೆ ಅಲ್ಲಿನ ಸಿಬ್ಬಂದಿಗೆ ದೂರು ನೀಡಿದ್ದಾರೆ. ಆದರೆ, ಇದಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡದ ಸಿಬ್ಬಂದಿ, ಇಲಿಗಳು ಸಾಮಾನ್ಯ ವಿಚಾರ. ಇಡೀ ರೈಲನ್ನು ಶುಚಿಗೊಳಿಸಲು 3 ಗಂಟೆ ಸಮಯ ಬೇಕಾಗುತ್ತದೆ ಎಂದು ನಿರ್ಲಕ್ಷ್ಯವಹಿಸಿದ್ದಾರೆ. ನಂತರ, ಟಿಕೆಟ್ ಚೆಕ್‌ ಮಾಡುವ ಅಧಿಕಾರಿಗೆ ಲಿಖಿತ ದೂರು ನೀಡಿದ ಇವರು ಇಲಿಗಳು, ಅನಾರೋಗ್ಯಕರ ಆಹಾರವನ್ನು ನೀಡುತ್ತಿರುವ ಬಗ್ಗೆ, ಶುಚಿಯಿಲ್ಲದ ನೀರು ಹಾಗೂ ರೈಲಿನಲ್ಲಿ ಗಲೀಜಿರುವ ಬಗ್ಗೆ ಹೇಳಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

ಈ ಹಿನ್ನೆಲೆ ರೈಲ್ವೆ ಇಲಾಖೆಗೆ ಪಾಠ ಕಲಿಸಬೇಕೆಂಬ ಉದ್ದೇಶದಿಂದ ವಕೀಲೆ ಶೀತಲ್ ಹಾಗೂ ಹೇಮಾ, ದಕ್ಷಿಣ ಮುಂಬಯಿಯ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆಗೆ ಡಿಸೆಂಬರ್ 2, 2015ರಂದು ದೂರು ನೀಡಿದ್ದರು. ರೈಲಿನಲ್ಲಿ ಒದಗಿಸಿದ ಅನಾರೋಗ್ಯಕರ ಆಹಾರದಿಂದ ನಮ್ಮ ಆರೋಗ್ಯ ಹದಗೆಟ್ಟಿತ್ತು. ಇದರಿಂದಾಗಿ ನಮ್ಮ ರಜೆ ಪ್ರಯೋಜನಕ್ಕೆ ಬರಲಿಲ್ಲ. ಹೀಗಾಗಿ ಟಿಕೆಟ್‌ ದರದೊಂದಿಗೆ ತಾವು ಅನುಭವಿಸಿದ ಮಾನಸಿಕ ಯಾತನೆ ಹಾಗೂ ಕಿರುಕುಳಕ್ಕೆ 6,600 ರೂ. ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದರು. ಇದರೊಂದಿಗೆ ತಮ್ಮ ಟಿಕೆಟ್‌ನ ಪ್ರತಿಗಳು ಹಾಗೂ ವೈದ್ಯಕೀಯ ಚಿಕಿತ್ಸೆಯನ್ನು ತೆಗೆದುಕೊಂಡಿದ್ದರ ಬಗ್ಗೆ ದಾಖಲೆಗಳನ್ನು ಒದಗಿಸಿದ್ದರು.

ಆದರೆ, ಭಾರತೀಯ ರೈಲ್ವೆ ದೂರುದಾರರ ಆರೋಪಗಳನ್ನು ಅಲ್ಲಗಳೆದಿದ್ದು, ನಾವು ಕೀಟ ನಿಯಂತ್ರಕವನ್ನು ಸಮಯಕ್ಕೆ ತಕ್ಕಂತೆ ಬಳಸುತ್ತೇವೆ ಎಂದು ವಾದ ಮಾಡಿದ್ದರು. ಜತೆಗೆ ಗಲೀಜು ಟಾಯ್ಲೆಟ್ ಹಾಗೂ ಸರಿಯಾದ ನೀರಿನ ಸೌಲಭ್ಯವಿರಲಿಲ್ಲ ಎಂಬ ಆರೋಪಗಳನ್ನು ತಳ್ಳಿಹಾಕಿದ್ದರು. ಅಲ್ಲದೆ, ರೈಲನ್ನು ಶುಚಿಗೊಳಿಸುತ್ತೇವೆ. ಜತೆಗೆ ಪ್ಲೇಟ್ ಹಾಗೂ ಪಾತ್ರೆಗಳನ್ನು ಕ್ಲೀನ್ ಮಾಡುತ್ತೇವೆ, ಅಲ್ಲದೆ ಸರಿಯಾದ ಆಹಾರವನ್ನು ಒದಗಿಸಿದ್ದೇವೆ ಎಂದು ಹೇಳಿದ್ದರು. ಆದರೆ, ಇದಕ್ಕೆ ತಕ್ಕ ದಾಖಲೆಗಳನ್ನು ಒದಗಿಸಲು ಭಾರತೀಯ ರೈಲ್ವೆ ವಿಫಲವಾಗಿದೆ ಎಂದು ಗ್ರಾಹಕರ ರಕ್ಷಣಾ ವೇದಿಕೆ ಅಭಿಪ್ರಾಯಪಟ್ಟಿತ್ತು. ಅಲ್ಲದೆ, ದೂರುದಾರರು ತಮ್ಮ ದಾಖಲೆಗಳನ್ನು ಸರಿಯಾಗಿ ಒದಗಿಸಿದ್ದಾರೆ. ಅವರು ಹೆಚ್ಚು ಬೆಲೆಯ ಟಿಕೆಟ್‌ಗಳನ್ನು ಖರೀದಿಸಿರುವುದು ಧೃಡಪಟ್ಟಿದ್ದು, ಹೀಗಾಗಿ ಅದಕ್ಕೆ ತಕ್ಕಂತೆ ರೈಲ್ವೆ ಇಲಾಖೆ ಗುಣಮಟ್ಟದ ಸೇವೆ ನೀಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದು, 19 ಸಾವಿರ ರೂ. ಪರಿಹಾರ ನೀಡಲು ಆದೇಶಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ