ಆ್ಯಪ್ನಗರ

ಅಯೋಧ್ಯೆಯಲ್ಲಿ ಹಿಂದೆ ಇರದ ಮಸೀದಿ ಮುಂದೆಯೂ ಇರಲು ಸಾಧ್ಯವಿಲ್ಲ: ಸುಪ್ರೀಂಗೆ ಶಿಯಾ ನಿಲುವು ಸ್ಪಷ್ಟ

ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ. ಅಲ್ಲಿ ರಾಮ ಮಂದಿರ ಮಾತ್ರ ನಿರ್ಮಾಣವಾಗಬೇಕು. ಯಾವುದೇ ತಂಟೆ ತಕರಾರು ಇಲ್ಲದೇ ಮಂದಿರ ವಿವಾದ ಇತ್ಯರ್ಥಗೊಳ್ಳುವುದನ್ನು ತಾನು ಬಯಸಿರುವುದಾಗಿ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

Vijaya Karnataka 14 Jul 2018, 11:58 am
ಹೊಸದಿಲ್ಲಿ: ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ. ಅಲ್ಲಿ ರಾಮ ಮಂದಿರ ಮಾತ್ರ ನಿರ್ಮಾಣವಾಗಬೇಕು. ಯಾವುದೇ ತಂಟೆ ತಕರಾರು ಇಲ್ಲದೇ ಮಂದಿರ ವಿವಾದ ಇತ್ಯರ್ಥಗೊಳ್ಳುವುದನ್ನು ತಾನು ಬಯಸಿರುವುದಾಗಿ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Vijaya Karnataka Web ayodhya


ಅಲಹಾಬಾದ್‌ ಹೈಕೋರ್ಟ್‌ ಮುಸ್ಲಿಮರಿಗೆ ನೀಡಿರುವ ಜಾಗದ ಪೈಕಿ ಮೂರರ ಒಂದರಷ್ಟು ಭಾಗವನ್ನು ಮಂದಿರ ನಿರ್ಮಾಣದ ಪವಿತ್ರ ಉದ್ದೇಶಕ್ಕೆ ಬಿಟ್ಟುಕೊಡಲು ಸಿದ್ಧ ಎಂದೂ ಶಿಯಾ ಮಂಡಳಿ ಸ್ಪಷ್ಟಪಡಿಸಿದೆ.

ಐತಿಹಾಸಿಕ ಜಾಗದ ಬಗೆಗಿನ ಸಂಪೂರ್ಣ ತಿಳವಳಿಕೆಯಿಂದಲೇ ತಾವು ಸುಪ್ರೀಂ ಕೋರ್ಟ್‌ಗೆ ಇಂತಹದ್ದೊಂದು ಸ್ಪಷ್ಟನೆ ನೀಡಿರುವುದಾಗಿ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಝ್ವಿ ಹೇಳಿದ್ದಾರೆ. ಶಿಯಾ ವಕ್ಫ್ ಮಂಡಳಿಯು ಬಾಬ್ರಿ ಮಸೀದಿಯ ನಿಜವಾದ ವಾರಸುದಾರ ಸಂಸ್ಥೆ. ಇದನ್ನು ಹೊರತು ಪಡಿಸಿ ಸುನ್ನಿ ವಕ್ಫ್ ಬೋರ್ಡ್‌ ಅಥವಾ ಇನ್ನಾವುದೇ ಸಂಸ್ಥೆಗೆ ಅಂತಹ ಅಧಿಕಾರ ಇಲ್ಲ. ಭಾರತದಲ್ಲಿನ ಮುಸ್ಲಿಮರ ಪ್ರತಿನಿಧಿ ಶಿಯಾ ಮಂಡಳಿಯೇ ವಿನಾ ಬೇರೆಯವರು ಅಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

‘‘ಬಾಬರನ ಪೂರ್ವದ ಇತಿಹಾಸ ಪುಟಗಳನ್ನು ಕೆದಕಿ ನೋಡಿದಾಗ ಆ ವಿವಾದಿತ ಸ್ಥಳದಲ್ಲಿ ಮಸೀದಿ ಇರಲಿಲ್ಲ ಎನ್ನುವುದು ವೇದ್ಯವಾಗುತ್ತದೆ. ಹಿಂದೆ ಇರದ ಮಸೀದಿ ಮುಂದೆಯೂ ಇರಲು ಸಾಧ್ಯವಿಲ್ಲ. ಅದು ರಾಮನ ಜನ್ಮ ಸ್ಥಳ. ಅಲ್ಲಿ ರಾಮ ಮಂದಿರ ಮಾತ್ರವೇ ನಿರ್ಮಾಣಗೊಳ್ಳಬೇಕು. ಬಾಬರನ ಬಗ್ಗೆ ಸಹನುಭೂತಿ ಹೊಂದಿದವರಿಗೆ ಮಾತ್ರ ಆ ಜಾಗ ಬಿಟ್ಟುಕೊಡುವುದು ಇಷ್ಟವಿಲ್ಲ. ಆದರೆ ಅಂಥವರನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ,’’ ಎಂದು ರಿಝ್ವಿ ಹೇಳಿದ್ದಾರೆ.

‘‘ಮಂದಿರ-ಮಸೀದಿ ವಿವಾದ ಪ್ರಕರಣದಲ್ಲಿ ಮಾತಾಡುವ ಅಧಿಕಾರವೇ ಶಿಯಾ ಮಂಡಳಿಗೆ ಇಲ್ಲ. ಇದರಲ್ಲಿ ಅದು ಏನೇ ಹೇಳಿದರೂ ಊರ್ಜಿತವಲ್ಲ. ಅಯೋಧ್ಯೆ ವಿಷಯದಲ್ಲಿ ಕೋರ್ಟ್‌ ತೀರ್ಪು ಮಾತ್ರವೇ ಅಂತಿಮ,’’ ಎಂದು ಹಿರಿಯ ವಕೀಲ ರಾಜೀವ್‌ ಧವನ್‌ ಹೇಳಿದ್ದಾರೆ. ತಾಲಿಬಾನಿಗಳು ಬಾಮಿಯಾನ್‌ ನಾಶಪಡಿಸಿದ ರೀತಿಯಲ್ಲಿ ಹಿಂದೂ ತಾಲಿಬಾನಿಗಳು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದರು ಎಂದು ಧವನ್‌ ದೂರಿದ್ದಾರೆ. ಧವನ್‌ ಅವರು ಈ ಪ್ರಕರಣದಲ್ಲಿ ಅರ್ಜಿದಾರರೊಬ್ಬರನ್ನು ಪ್ರತಿನಿಧಿಸುತಿದ್ದಾರೆ. ಆ ಅರ್ಜಿದಾರರು ಈಗ ಮೃತಪಟ್ಟಿದ್ದರೂ ಅವರ ಉತ್ತರಾಧಿಕಾರಿಯನ್ನು ಪ್ರತಿನಿಧಿಸಿ ವಾದ ಮಂಡಿಸುತ್ತಿದ್ದಾರೆ.

ಅಸ್ತಿತ್ವದಲ್ಲಿಯೇ ಇರದ ದತ್ತಿ ಕಾಯಿದೆ ಬಳಸಿ ಶಿಯಾ ಮಂಡಳಿ ಅಯೋಧ್ಯೆ ಜಾಗವನ್ನು ದಾನ ಮಾಡಲು ಹೊರಟಿದೆ. ಇದೊಂದು ಹಾಸ್ಯಾಸ್ಪದ ನಡೆ.
- ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ