ಆ್ಯಪ್ನಗರ

ಆಪ್‌ ಮುಜೆ ಫ್ಯಾರಿ ಲಗ್ತೀ ಹೆ ಎಂದ ಅಜಾಂ ಖಾನ್‌ ಕ್ಷಮೆ ಯಾಚನೆ!

ಬಿಜೆಪಿ ಎಂಪಿ ಕಲಾಪ ನಡೆಸುತ್ತಿದ್ದ ವೇಳೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಅಜಾಂ ಖಾನ್‌, ಲೋಕಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ. ಅಜಾಂ ಖಾನ್‌ ಹೇಳಿಕೆಗೆ ಬಿಜೆಪಿ ಸೇರಿದಂತೆ ಅನೇಕ ಮಂದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

TIMESOFINDIA.COM 29 Jul 2019, 1:45 pm
ಹೊಸದಿಲ್ಲಿ: ಸ್ಪೀಕರ್‌ ಸ್ಥಾನದಲ್ಲಿದ್ದ ಬಿಜೆಪಿ ಸಂಸದೆ ರಮಾದೇವಿ ಅವರ ಮೇಲೆ ಆಕ್ಷೇಪಾರ್ಹ ಕಾಮೆಂಟ್‌ ಮಾಡಿದ್ದ ಎಸ್‌ಪಿ ಸಂಸದ ಅಜಾಂ ಖಾನ್‌ ಲೋಕಸಭೆಯಲ್ಲಿ ಸೋಮವಾರ ಕ್ಷಮೆ ಕೇಳಿದ್ದಾರೆ.

ನಾನು 9 ಬಾರಿ ಶಾಸಕನಾಗಿದ್ದೆ. ಹಲವಾರು ಬಾರಿ ರಾಜ್ಯ ಮಂತ್ರಿಯೂ ಆಗಿದ್ದೆ. ಸಂಸದೀಯ ವ್ಯವಹಾರಗಳ ಸಚಿವನಾಗಿಯೂ ಕಾರ್ಯನಿರ್ವಹಿಸಿದ್ದೆ. ಸಂಸದೀಯ ಪ್ರಕ್ರಿಯೆ, ಕಾರ್ಯಕಲಾಪಗಳ ಬಗ್ಗೆ ಚೆನ್ನಾಗಿ ತಿಳಿದು ಕೊಂಡಿದ್ದೇನೆ. ನನ್ನ ಮಾತಿನಿಂದ ಯಾರಿಗಾದರೂ ಬೇಸರವಾಗಿದ್ದಲ್ಲಿ, ನಾನು ಕ್ಷಮೆ ಕೇಳುತ್ತೇನೆ ಎಂದು ಅಜಾಂ ಖಾನ್‌ ಹೇಳಿಕೆ ನೀಡಿದರು.

ಆದರೆ ಅವರ ಕ್ಷಮೆಯನ್ನು ತಾನು ಒಪ್ಪಿಕೊಳ್ಳುವುದಿಲ್ಲ ಎಂದು ರಮಾದೇವಿ ಹೇಳಿದ್ದಾರೆ. ಅಜಾಂ ಖಾನ್‌ ಅವರ ಹೇಳಿಕೆ ಕೇವಲ ನನಗೆ, ಅಥವಾ ಮಹಿಳೆಯರಿಗೆ ಬೇಸರ ತಂದಿಲ್ಲ. ಬದಲಾಗಿ ದೇಶದ ಪುರುಷರಿಗೂ ಬೇಸರವಾಗಿದೆ. ಈ ವಿಚಾರ ಅವರಿಗೆ ಅರ್ಥವೂ ಆಗಲಿಕ್ಕಿಲ್ಲ. ಅಂತಹ ಮಾತುಗಳನ್ನು ಕೇಳಲು ನಾನು ಲೋಕಸಭೆಗೆ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಎಸ್‌ಪಿ ನಾಯಕ ಅಖಿಲೇಷ್‌ ಯಾದವ್‌, ಅಜಾಂ ಖಾನ್‌ ಅವರ ಪರವಾಗಿ ಮಾತನಾಡಲು ಮುಂದಾದರು. ಈ ವೇಳೆ ರಮಾದೇವಿ ಯಾದವ್‌ ಮಧ್ಯಪ್ರವೇಶ ಸರಿಯಲ್ಲ. ಅವರು ಈ ವಿಚಾರದಲ್ಲಿ ಮಾತನಾಡಬಾರದು ಎಂದು ಕಟುವಾಗಿ ಅಖಿಲೇಷ್‌ ಮಾತುಗಳಿಗೆ ಬ್ರೇಕ್‌ ಹಾಕುವಂತೆ ಪಟ್ಟು ಹಿಡಿದರು.

ಇದೇ ವೇಳೆ ಅಜಾಂ ಖಾನ್‌ ಕೇಳಿದ ಕ್ಷಮಾಪಣೆಯ ಮಾತು, ಯಾರಿಗೂ ಕೇಳಿಲ್ಲ ಎಂದು ಸಂಸದರು ಸ್ಪೀಕರ್‌ ಗೆ ತಿಳಿಸಿದರು. ಈ ವೇಳೆ ಸ್ಪೀಕರ್‌ ಓಂ ಬಿರ್ಲಾ ಮತ್ತೆ ಪದಗಳನ್ನು ಪುನರಾವರ್ತಿಸುವಂತ ಹೇಳಿದರು. ಅಜಾಂ ಖಾನ್‌ ಮತ್ತೆ ತಮ್ಮ ಮಾತುಗಳನ್ನು ಪುನರಾವರ್ತಿಸಿದರು. ಈ ಬಳಿಕ ಲೋಕಸಭೆಗೆ ಅದರದ್ದೇ ಆದ ಗೌರವವಿದೆ. ಯಾವುದೇ ಸಂಸದರು ಈ ಗೌರವಕ್ಕೆ ಧಕ್ಕೆ ತರುವಂತಹ ಮಾತುಗಳನ್ನು ಆಡಬಾರದು. ಅಷ್ಟೇ ಅಲ್ಲ, ಮಾತನಾಡುವ ವೇಳೆ ಬಳಸುವ ಶಬ್ಧ ಪ್ರಯೋಗಗಳ ಮೇಲೆ ಹೆಚ್ಚು ಎಚ್ಚರಿಕೆ ಇರಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ