ಆ್ಯಪ್ನಗರ

'ಲವ್‌ ಜಿಹಾದ್'‌ ಪದ ಬಿಜೆಪಿ ಸೃಷ್ಟಿ, ಕೋಮು ಸಾಮರಸ್ಯ ಕೆಡಿಸಲು ಬಳಕೆ - ಅಶೋಕ್‌ ಗೆಹ್ಲೋಟ್‌ ಆರೋಪ

"ಮದುವೆಯೆಂಬುದು ವಯಸ್ಕರ ವೈಯಕ್ತಿಕ ಸ್ವಾತಂತ್ರ್ಯ. ಪರಸ್ಪರ ಒಪ್ಪಿ ಮದುವೆಯಾಗಲೂ ಸರಕಾರದ ಅನುಮತಿ ಬೇಕು ಎಂಬ ವಾತಾವರಣವನ್ನು ಬಿಜೆಪಿ ಆಡಳಿತದ ರಾಜ್ಯಗಳು ಸೃಷ್ಟಿಸುತ್ತಿವೆ. ಇದು ಖಂಡನೀಯ ಎಂದು ಗೆಹ್ಲೋಟ್‌ ಹೇಳಿದ್ದಾರೆ.

Agencies 20 Nov 2020, 10:57 pm
ಜೈಪುರ: ಲವ್‌ ಜಿಹಾದ್‌ ಪದ ಬಿಜೆಪಿಯ ಸೃಷ್ಟಿಯಾಗಿದ್ದು, ದೇಶವನ್ನು ವಿಭಜಿಸಲು ಮತ್ತು ಕೋಮು ಸಾಮರಸ್ಯ ಹಾಳುಗೆಡವಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇದನ್ನು ಬಳಸಿಕೊಳ್ಳುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಆರೋಪಿಸಿದ್ದಾರೆ. ಬಿಜೆಪಿ ಆಡಳಿತದ ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿ ಅನೇಕ ರಾಜ್ಯಗಳು ಲವ್‌ ಜಿಹಾದ್‌ಗೆ ಕಡಿವಾಣ ಹಾಕಲು ಕಾಯಿದೆ ರೂಪಿಸಲು ಮುಂದಾಗಿರುವ ಬೆನ್ನಲ್ಲೇ ಗೆಹ್ಲೋಟ್‌ ಅವರಿಂದ ಈ ಆರೋಪ ಕೇಳಿಬಂದಿದೆ.
Vijaya Karnataka Web Ashok Gehlot


"ಲವ್‌ ಜಿಹಾದ್‌ ಪದ ಹುಟ್ಟುಹಾಕಿ ಅದನ್ನು ಮುನ್ನೆಲೆಗೆ ತಂದವರೇ ಬಿಜೆಪಿಯವರು. ದೇಶವನ್ನು ಒಡೆಯಲು ಹಾಗೂ ಕೋಮುಗಳ ಮಧ್ಯೆ ಸಂಘರ್ಷ ಬಿತ್ತಲು ಬಿಜೆಪಿ ಇದನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ. ಆದರೆ ಇದು ಹೆಚ್ಚು ದಿನ ನಡೆಯದು. ಮದುವೆಯೆಂಬುದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಅದಕ್ಕೆ ನಿರ್ಬಂಧ ವಿಧಿಸಿ ಕಾನೂನು ರೂಪಿಸುವುದು ಅಸಂವಿಧಾನಿಕ. ಯಾವುದೇ ನ್ಯಾಯಾಲಯಗಳಲ್ಲೂ ಇದಕ್ಕೆ ಮಾನ್ಯತೆ ಸಿಗುವುದಿಲ್ಲ. ಒಂದಂತೂ ಸ್ಪಷ್ಟ, ಜಿಹಾದ್‌ನಲ್ಲಿ ಪ್ರೀತಿಗೆ ಅವಕಾಶವೇ ಇರುವುದಿಲ್ಲ," ಎಂದು ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ಅವರು "ಮದುವೆಯೆಂಬುದು ವಯಸ್ಕರ ವೈಯಕ್ತಿಕ ಸ್ವಾತಂತ್ರ್ಯ. ಪರಸ್ಪರ ಒಪ್ಪಿ ಮದುವೆಯಾಗಲೂ ಸರಕಾರದ ಅನುಮತಿ ಬೇಕು ಎಂಬಂತಹ ವಾತಾವರಣವನ್ನು ಬಿಜೆಪಿ ಆಡಳಿತದ ರಾಜ್ಯಗಳು ಸೃಷ್ಟಿಸುತ್ತಿವೆ. ಇದು ಖಂಡನೀಯ," ಎಂದಿದ್ದಾರೆ.

‘ಲವ್‌ ಜಿಹಾದ್‌’ ಮಟ್ಟ ಹಾಕಲು ಹರಿಯಾಣದಲ್ಲೂ ಕಾನೂನು; ಯೋಗಿ ಆದಿತ್ಯನಾಥ್‌ ನಡೆ ಅನುಸರಿಸಿದ ಖಟ್ಟರ್

ಬಿಜೆಪಿ ತಿರುಗೇಟು

ಗೆಹ್ಲೋಟ್‌ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ‘‘ಸಾವಿರಾರು ಮಂದಿ ಯುವತಿಯರನ್ನು ಲವ್‌ ಜಿಹಾದ್‌ ಹೆಸರಿನಲ್ಲಿ ಮತಾಂತರ ಮಾಡಲಾಗುತ್ತಿದೆ. ಮದುವೆ ಎಂಬುದು ವೈಯಕ್ತಿಕ ವಿಷಯವಾಗಿದ್ದರೆ, ಧರ್ಮದ ಆಚರಣೆಗೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು. ಇದಕ್ಕೆ ಗೆಹ್ಲೋಟ್‌ ಉತ್ತರಿಸುತ್ತಾರೆಯೇ?," ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಮದುವೆಯಾಗಿ ತಮ್ಮ ಧರ್ಮಕ್ಕೆ ಬಲವಂತದಿಂದ ಮತಾಂತರಗೊಳಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕೆಲವು ರಾಜ್ಯಗಳು ಲವ್‌ ಜಿಹಾದ್‌ ಕಡಿವಾಣಕ್ಕೆ ಕಾಯಿದೆ ತರಲು ಮುಂದಾಗಿವೆ. ಇದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ