Please enable javascript.ಹೆಂಡತಿಯನ್ನು ಕೇಳದೇ ಎರಡು ಟೊಮ್ಯಾಟೋ ಬಳಸಿದ ಪತಿ! ಕೋಪದಿಂದ ಮನೆ ಬಿಟ್ಟು ಹೋದ ಪತ್ನಿ - madhya pradesh man uses tomatoes to cook without asking wife, she leaves home - Vijay Karnataka

ಹೆಂಡತಿಯನ್ನು ಕೇಳದೇ ಎರಡು ಟೊಮ್ಯಾಟೋ ಬಳಸಿದ ಪತಿ! ಕೋಪದಿಂದ ಮನೆ ಬಿಟ್ಟು ಹೋದ ಪತ್ನಿ

Authored byಅವಿನಾಶ ವಗರನಾಳ | Vijaya Karnataka Web 13 Jul 2023, 11:40 am
Subscribe

Tomato Fight Between Husband and Wife : ಟೊಮ್ಯಾಟೋಗೆ ಈಗ ಚಿನ್ನದ ಬೆಲೆ ಬಂದಿದೆ. ಅದಕ್ಕಾಗಿಯೇ ದೇಶದಲ್ಲಿ ಟೊಮ್ಯಾಟೋದಿಂದ, ಟೊಮ್ಯಾಟೋಗಾಗಿ, ಟೊಮ್ಯಾಟೋಗೋಸ್ಕರ ವಿಚಿತ್ರ ಘಟನೆಗಳು ನಡೆಯುತ್ತಿವೆ. ಮಧ್ಯಪ್ರದೇಶದಲ್ಲಿ ಟೊಮ್ಯಾಟೋದಿಂದ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು, ಕೊನೆಗೆ ಜಗಳ ತಾರಕಕ್ಕೇರಿ ಪತ್ನಿ ತನ್ನ ಮಗಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ಪೊಲೀಸರು ಮನೆಬಿಟ್ಟು ಹೋದ ಮಹಿಳೆಗಾಗಿ ಹುಡುಕಾಟ ಶುರು ಮಾಡಿದ್ದಾರೆ.

ಹೈಲೈಟ್ಸ್‌:


  • ಹೆಂಡತಿಯನ್ನು ಕೇಳದೇ ಎರಡು ಟೊಮ್ಯಾಟೋ ಬಳಸಿದ ಪತಿ!
  • ಮಧ್ಯಪ್ರದೇಶದಲ್ಲಿ ಕೋಪದಿಂದ ಮಗಳೊಂದಿಗೆ ಮನೆ ಬಿಟ್ಟು ಹೋದ ಪತ್ನಿ
  • ಪತ್ನಿ ಹುಡುಕಲು ಪೊಲೀಸರ ನೆರವು ಕೇಳಿದ ಪತಿ ಸಂಜೀವ್‌ ಬರ್ಮನ್‌
tomatoes
ಟೊಮ್ಯಾಟೋ (ಸಂಗ್ರಹ ಚಿತ್ರ)
ಭೋಪಾಲ್‌ (ಮಧ್ಯ ಪ್ರದೇಶ): ಟೊಮ್ಯಾಟೋ ದರ ಗಗನಕ್ಕೇರಿದ್ದು, ಚಿನ್ನದ ಬೆಲೆ ಬಂದಿದೆ. ಕೆಜಿಗೆ 120 ರಿಂದ 150ರವರೆಗೂ ಮಾರಾಟವಾಗುತ್ತಿರುವ ಟೊಮ್ಯಾಟೋ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಇದರ ನಡುವೆಯೇ ಟೊಮ್ಯಾಟೋದಿಂದ ಗಂಡ-ಹೆಂಡತಿಯರ ನಡುವೆ ಜಗಳವಾಗುತ್ತಿದ್ದು, ಕೊನೆಗೆ ಹೆಂಡತಿ ಮನೆ ಬಿಟ್ಟು ಹೋಗಲು ಕೂಡ ಟೊಮ್ಯಾಟೋ ಕಾರಣವಾಗಿದೆ.
ಹೌದು, ಇಂತದ್ದೊಂದು ವಿಚಿತ್ರ ಘಟನೆ ಮಧ್ಯಪ್ರದೇಶದ ಶಾಹದೋಲ್‌ ಜಿಲ್ಲೆಯಲ್ಲಿ ನಡೆದಿದೆ. ಸಂಜೀವ್‌ ಬರ್ಮನ್‌ ಎಂಬುವವರು ಸಣ್ಣದಾಗಿ ಹೋಟೆಲ್‌ ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಅಡುಗೆ ಮಾಡುವಾಗ ಹೆಂಡತಿಯನ್ನು ಕೇಳದೇ ಎರಡು ಟೊಮ್ಯಾಟೋ ಹಣ್ಣುಗಳನ್ನು ಬಳಸಿದ್ದಾರೆ. ಇದರಿಂದ ಸಂಜೀವ್‌ ಬರ್ಮನ್‌ ಹಾಗೂ ಹೆಂಡತಿ ನಡುವೆ ದೊಡ್ಡ ಜಗಳ ಆಗಿದ್ದು, ಕೊನೆಗೆ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ.


ಟೊಮ್ಯಾಟೋ ಬಳಸುವ ಬಗ್ಗೆ ತನ್ನನ್ನು ಕೇಳದ ಕಾರಣ ಹೆಂಡತಿ ನನ್ನ ಜೊತೆ ಜಗಳವಾಡಿದಳು ಎಂದು ಸಂಜೀವ್‌ ಬರ್ಮನ್‌ ಮಾಹಿತಿ ನೀಡಿದ್ದಾರೆ. ದೊಡ್ಡ ಜಗಳದ ನಂತರ ಪತ್ನಿ ತನ್ನ ಮಗಳೊಂದಿಗೆ ಮನೆ ಬಿಟ್ಟು ಹೋಗಲು ನಿರ್ಧರಿಸಿದಳು ಎಂದು ಬರ್ಮನ್‌ ಹೇಳಿದ್ದಾನೆ. ಬಳಿಕ ಆಕೆಯನ್ನು ಹುಡುಕಲು ಸಂಜೀವ್‌ ಬರ್ಮನ್‌ ಪ್ರಯತ್ನಪಟ್ಟಿದ್ದಾನೆ. ಆದರೆ, ಆತನಿಂದ ಪತ್ನಿಯನ್ನು ಹುಡುಕಲು ಸಾಧ್ಯವಾಗಿಲ್ಲ. ಆದ್ದರಿಂದ ಬಳಿಕ ಸ್ಥಳೀಯ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ್ದಾನೆ.
ಬೆಂಗಳೂರಿನಲ್ಲಿ ಟೊಮ್ಯಾಟೋ ವಾಹನವನ್ನೇ ಅಪಹರಿಸಿದ ಖದೀಮರು! ರೈತನ ಮೇಲೆ ಹಲ್ಲೆ
ಸಂಜೀವ್ ಬರ್ಮನ್‌ ಹೆಂಡತಿ ನಾಪತ್ತೆಯ ಬಗ್ಗೆ ದೂರು ದಾಖಲಿಸಿರುವುದನ್ನು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಆ ದೂರಿನಲ್ಲಿ ಸಂಜೀವ್ ಬರ್ಮನ್‌ ಅವರು ಅಡುಗೆ ಮಾಡುತ್ತಿದ್ದಾಗ ತರಕಾರಿ ಸಾಂಬಾರಿಗೆ ಎರಡು ಟೊಮ್ಯಾಟೋ ಹಾಕಿದ್ದರಿಂದ ಜಗಳ ಶುರುವಾಯಿತು. ಟೊಮ್ಯಾಟೋ ಬಳಸಲು ಅನುಮತಿ ಕೇಳಲಿಲ್ಲ ಎಂದು ಗಲಾಟೆ ಆರಂಭವಾಯಿತು. ಮೂರು ದಿನದಿಂದ ಪತ್ನಿಯೊಂದಿಗೆ ಮಾತನಾಡಿಲ್ಲ, ಎಲ್ಲಿದ್ದಾಳೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಬರ್ಮನ್‌ ಉಲ್ಲೇಖಿಸಿದ್ದಾರೆ.

Gujarat: 10 ವರ್ಷದಲ್ಲಿ 7 ಬಾರಿ ಗಂಡನನ್ನು ಜೈಲಿಗೆ ಕಳಿಸಿದ ಹೆಂಡ್ತಿ! ಬೇಲ್ ಕೊಡಿಸಿದ್ದೂ ಆಕೆಯೇ!
ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಸಂಜೀವ್ ಬರ್ಮನ್‌ ಅವರ ಪತ್ನಿಯನ್ನು ಹುಡುಕುತ್ತಿದ್ದಾರೆ. ಶೀಘ್ರದಲ್ಲಿಯೇ ಪತ್ನಿ ಸಿಗುತ್ತಾಳೆ ಎಂದು ಭರವಸೆ ನೀಡಿದ್ದಾರೆ.

ಟೊಮ್ಮಾಟೋಗೆ ಚಿನ್ನದ ದರ!

ಟೊಮ್ಯಾಟೋ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಾರುಕಟ್ಟೆ ಅಥವಾ ತರಕಾರಿ ಅಂಗಡಿಗೆ ಹೋಗಿ ಟೊಮ್ಯಾಟೋ ದರ ಕೇಳಿದರೆ ಗ್ರಾಹಕರು ಹೌಹಾರುತ್ತಿದ್ದಾರೆ. ಕೆಜಿ ಟೊಮ್ಯಾಟೋ 120 ರೂಪಾಯಿಯಿಂದ 150 ರೂ.ಗೆ ಮಾರಾಟವಾಗುತ್ತಿದೆ. ಹಲವೆಡೆ ಟೊಮ್ಯಾಟೋ ಕಳ್ಳತನದ ಪ್ರಕರಣಗಳು ನಡೆಯುತ್ತಿದ್ದು, ಟೊಮ್ಯಾಟೋಗೆ ಬೌನ್ಸರ್‌, ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವ ಬಗ್ಗೆ ವರದಿಗಳು ಆಗುತ್ತಿವೆ. ಅದಲ್ಲದೇ ಟೊಮ್ಯಾಟೋಗಾಗಿ ಚೂರಿ ಚುಚ್ಚುತ್ತಿರುವುದು, ವಾಹನಗಳನ್ನೇ ಹೈಜಾಕ್‌ ಮಾಡುವ ಘಟನೆಗಳು ನಡೆಯುತ್ತಿವೆ.
ಅವಿನಾಶ ವಗರನಾಳ
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ