ಆ್ಯಪ್ನಗರ

ಶಿವರಾತ್ರಿ ಆಚರಣೆಗೆ ವಿಘ್ನ: ಉಗ್ರರ ಸ್ಕೆಚ್; ಭದ್ರಕೋಟೆಯಾದ ಸೋಮನಾಥ, ಭಾವನಾಥ

ಗುಜರಾತ್ ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳ ಎಲ್ಲಾ ಸಿಬ್ಬಂದಿಗೆ ರಜೆ ರದ್ದು ಮಾಡಲಾಗಿದೆ. ಮಹಾಶಿವರಾತ್ರಿ ಆಚರಣೆಯ ಸಿದ್ಧತೆಯಲ್ಲಿರುವ ಎಲ್ಲಾ ಪ್ರಮುಖ ದೇವಾಲಯಗಳು ಮತ್ತು ಸಾರ್ವಜನಿಕ ತಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

Vijaya Karnataka Web 7 Mar 2016, 8:48 am
ಅಹಮದಾಬಾದ್: ಪಠಾಣ್‌ಕೋಟ್ ದಾಳಿ ದುಷ್ಕೃತ್ಯ ಜನಮಾನಸದಿಂದ ಮಾಸುವ ಮುನ್ನವೇ ಉಗ್ರರು ಗಡಿ ದಾಟಿ ಬಂದಿರುವ ಸುದ್ಧಿ ಮಹಾಶಿವರಾತ್ರಿ ಹಬ್ಬದ ಸಂಭ್ರಮ, ಸಡಗರದಲ್ಲಿದ್ದ ದೇಶದ ಜನತೆಯನ್ನು ಆತಂಕಕ್ಕೆ ಗುರಿ ಮಾಡಿದೆ.
Vijaya Karnataka Web maha shivratri target terror alert in india especially in gujarat
ಶಿವರಾತ್ರಿ ಆಚರಣೆಗೆ ವಿಘ್ನ: ಉಗ್ರರ ಸ್ಕೆಚ್; ಭದ್ರಕೋಟೆಯಾದ ಸೋಮನಾಥ, ಭಾವನಾಥ


ಗುಪ್ತಚರ ಏಜೆನ್ಸಿಗಳು ನೀಡಿರುವ ಮಾಹಿತಿಯ ಪ್ರಕಾರ, ಗುಜರಾತ್‌ನೊಳಗೆ ಅತಿಕ್ರಮಣ ಪ್ರವೇಶ ಮಾಡಿರುವ 10 ಉಗ್ರರ ಹಿಂಡನ್ನು ಶೋಧಿಸಲು ಕುಚ್ ಸೇರಿದಂತೆ ರಾಜ್ಯದ ನಾನಾ ಸ್ಥಳಗಳಲ್ಲಿ ವ್ಯಾಪಕ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಗುಜರಾತಿನಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. ಗುಜರಾತ್‌ನ ಪ್ರಮುಖ ಅನುಸ್ಥಾಪನೆಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಎನ್‌ಎಸ್‌ಜಿ ತಂಡಗಳನ್ನು ಸನ್ನದ್ಧವಾಗಿಡಲಾಗಿದೆ.

ಗುಜರಾತ್ ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳ ಎಲ್ಲಾ ಸಿಬ್ಬಂದಿಗೆ ರಜೆ ರದ್ದು ಮಾಡಲಾಗಿದೆ. ಮಹಾಶಿವರಾತ್ರಿ ಆಚರಣೆಯ ಸಿದ್ಧತೆಯಲ್ಲಿರುವ ಎಲ್ಲಾ ಪ್ರಮುಖ ದೇವಾಲಯಗಳು ಮತ್ತು ಸಾರ್ವಜನಿಕ ತಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಪಾಕಿಸ್ತಾನ್ ಗಡಿ ಭಾಗದಲ್ಲಿರುವ ಕುಚ್ ಜಿಲ್ಲೆಯ ಭುಜ್ ತಾಲೂಕಿನ ವರ್ನೊರಾ ಗ್ರಾಮದಲ್ಲಿ ಭಾನುವಾರ ಮುಂಜಾನೆಯೇ ಪೊಲೀಸರ ತಂಡ ಕ್ಷಿಪ್ರ ಕಾರ್ಯಾಚರಣೆ ಮತ್ತು ದಾಳಿ ಕೈಗೊಂಡಿದೆ. ಭುಜ್‌ನ ನೂರಾನಿ ಮಹಲ್ ಹೋಟೆಲ್ ಮತ್ತು ಮುಸ್ಲಿಂ ಜಮಾತ್ ಖಾನಾ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ದಕ್ಷಿಣ ಕುಚ್ ಎಸ್‌ಪಿ ಮಕ್ರಂದ್ ಚೌಹಾಣ್ ತಿಳಿಸಿದ್ದಾರೆ.

ಉಗ್ರರು ಗುಜರಾತ್ ರಾಜ್ಯದೊಳಗೆ ನುಸುಳಿರುವ ಸಾಧ್ಯತೆಗಳ ಬಗ್ಗೆ ಪಾಕಿಸ್ತಾನವೇ ಭಾರತಕ್ಕೆ ಎಚ್ಚರಿಕೆ ನೀಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಗುಪ್ತಚರ ಮಾಹಿತಿ ಆಧರಿಸಿ, ಕೇಂದ್ರ ಸರಕಾರ ಶನಿವಾರವೇ ಗುಜರಾತ್ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿ, ಯಾವುದೇ ಅಹಿತಕರ ಬೆಳವಣಿಗೆ ನಡೆಯದಂತೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ರಜನಿ ಪಟೇಲ್ ತಿಳಿಸಿದ್ದಾರೆ.

ಸೋಮವಾರ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ ಜುನಾಗಢ್, ಸೋಮನಾಥ್ ಮತ್ತು ಇತರೆ ಪ್ರಮುಖ ದೇವಾಲಯಗಳಿಗೆ ವ್ಯಾಪಕ ಭದ್ರತೆ ಒದಗಿಸಲಾಗಿದೆ. ಭಾನುವಾರ ಬೆಳಿಗ್ಗೆಯಿಂದಲೇ ಹೆದ್ದಾರಿ, ಬಂದರು, ಜಲಮಾರ್ಗ ಮತ್ತು ಎಲ್ಲಾ ಸೇನಾನೆಲೆಗಳಿಗೆ ಎನ್‌ಎಸ್‌ಜಿ ಭದ್ರತೆ ಹೆಚ್ಚಿಸಲಾಗಿದೆ.

ಗುಜರಾತ್‌ಗೆ 4 ಎನ್‌ಎಸ್‌ಜಿ ತಂಡ


ಟೆರರ್ ಅಲರ್ಟ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ನಾಲ್ಕು ತಂಡಗಳು ಶನಿವಾರ ರಾತ್ರಿಯೇ ಗುಜರಾತ್‌ಗೆ ಆಗಮಿಸಿದ್ದು, ಸೋಮನಾಥ ದೇವಾಲಯ ಸೇರಿದಂತೆ ಪ್ರಮುಖ ಅನುಸ್ಥಾವರಗಳು ಮತ್ತು ಸಾರ್ವಜನಿಕ ತಾಣಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿವೆ.

ಗುಜರಾತ್ ಡಿಜಿಪಿ ಪಿ.ಸಿ. ಥಾಕುರ್ ಗಾಂಧಿನಗರದಲ್ಲಿ ಭಾನುವಾರ ಎನ್‌ಎಸ್‌ಜಿ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿ, ಭದ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಸೋಮನಾಥ ದೇವಾಲಯದಲ್ಲಿ ಎನ್‌ಎಸ್‌ಜಿ ಒಂದು ತಂಡ ರಕ್ಷಣೆಯ ಜವಾಬ್ದಾರಿ ಹೊತ್ತಿದೆ.

ಕೋಲ್ಕೊತಾ ಏರ್‌ಪೋರ್ಟ್‌ಗೆ ಭದ್ರತೆ ಕೋಲ್ಕೊತಾದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 24 ತಾಸಿನಲ್ಲಿ ಸ್ಫೋಟಿಸುವುದಾಗಿ ಏರ್‌ಪೋರ್ಟ್ ವ್ಯವಸ್ಥಾಪಕರಿಗೆ ಜರ್ಮನಿಯಿಂದ ಇ-ಮೇಲ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಏರ್‌ಪೋರ್ಟ್ ಒಳಬರುವ ಪ್ರಯಾಣಿಕರು ಮತ್ತು ವಾಹನಗಳ ಸಂಪೂರ್ಣ ತಪಾಸಣೆ ನಡೆಸಲಾಗುತ್ತಿದೆ.

ಗುಪ್ತಚರ ಮಾಹಿತಿ ಆಧರಿಸಿ, ಕೇಂದ್ರ ಸರಕಾರ ಶನಿವಾರವೇ ಗುಜರಾತ್ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ಒದಗಿಸಿದ ಹಿನ್ನೆಲೆಯಲ್ಲಿ, ತುರ್ತು ಸಭೆ ನಡೆಸಿ ಭದ್ರತೆ ಹೆಚ್ಚಿಸಲಾಗಿದೆ. ಆದರೆ, ಈವರೆಗಿನ ಕಾರ್ಯಾಚರಣೆಯಲ್ಲಿ ಶಂಕಿತರು ಪತ್ತೆಯಾಗಿಲ್ಲ. ಯಾವುದೇ ಪರಿಸ್ಥಿತಿ ಎದುರಿಸಲು ಭದ್ರತಾ ಸಿಬ್ಬಂದಿ ಸನ್ನದ್ಧರಾಗಿದ್ದಾರೆ.

- ರಜನಿ ಪಟೇಲ್, ಗೃಹ ಖಾತೆ ರಾಜ್ಯ ಸಚಿವ, ಗುಜರಾತ್

ಸೋಮನಾಥ ದೇವಾಲಯದಲ್ಲಿ ಎನ್‌ಎಸ್‌ಜಿ ಒಂದು ತಂಡ ರಕ್ಷಣೆಯ ಜವಾಬ್ದಾರಿ ಹೊತ್ತಿದೆ. ದ್ವಾರಕಾದಲ್ಲಿರುವ ನಾಗೇಶ್ವರ ಜ್ಯೋತಿರ್ಲಿಂಗ್ ಮತ್ತು ಜುನಾಗಢ್‌ನ ಭಾವನಾಥ್ ದೇವಾಲಯಗಳಿಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. - ಪಿ.ಸಿ. ಥಾಕುರ್, ಡಿಜಿಪಿ, ಗುಜರಾತ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ