ಆ್ಯಪ್ನಗರ

Maharashtra crisis: ಪತನದ ಹೊಸ್ತಿಲಲ್ಲಿ ಯೋಗಿ ಮಾದರಿಯಲ್ಲಿ ನಗರಗಳ ಮರುನಾಮಕರಣ ಮಾಡಿದ ಠಾಕ್ರೆ..!

Maharashtra political crisis: ಪತನದ ಅಂಚಿನಲ್ಲಿ ಇರುವ ಉದ್ಧವ್ ಠಾಕ್ರೆ ಸಾರಥ್ಯದ ಮಹಾರಾಷ್ಟ್ರ ಸರ್ಕಾರ ಕೊನೆಯ ಕ್ಷಣದಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ. ಔರಂಗಾಬಾದ್ ನಗರದ ಹೆಸರನ್ನು ಸಂಭಾಜಿ ನಗರ ಎಂದು ಬದಲಾವಣೆ ಮಾಡಲಾಗಿದೆ. ಒಸ್ಮಾನಾಬಾದ್ ನಗರದ ಹೆಸರನ್ನು ಧಾರಾಶಿವ್ ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ನವಿ ಮುಂಬೈ ವಿಮಾನ ನಿಲ್ದಾಣದ ಹೆಸರನ್ನು ಡಿ. ಬಿ. ಪಾಟೀಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.

Authored byದಿಲೀಪ್ ಡಿ. ಆರ್. | Vijaya Karnataka Web 30 Jun 2022, 11:10 am

ಹೈಲೈಟ್ಸ್‌:

  • ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳ ಜೊತೆ ಬೇಸರದಿಂದಲೇ ಮಾತನಾಡಿದ ಸಿಎಂ ಠಾಕ್ರೆ
  • ತಮಗೆ ತಮ್ಮವರಿಂದಲೇ ದ್ರೋಹವಾಗಿದೆ ಎಂದ ಉದ್ಧವ್ ಠಾಕ್ರೆ
  • ತಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದ ಮಹಾರಾಷ್ಟ್ರ ಸಿಎಂ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web uddhav
ಮುಂಬೈ (ಮಹಾರಾಷ್ಟ್ರ): ಶಿವಸೇನೆ ನಾಯಕ ಏಕನಾಥ್ ಶಿಂಧೆ ಸಾರಥ್ಯದಲ್ಲಿ ಸುಮಾರು 50 ಶಾಸಕರು ಮಹಾ ವಿಕಾಸ್ ಅಗಾಡಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ, ಹಲವು ನಗರಗಳ ಹೆಸರು ಬದಲಿಸಿ ರಾಜಕೀಯ ವಿಶ್ಲೇಷಕರ ಹುಬ್ಬೇರಿಸಿದೆ..! ಅದೂ ಕೂಡಾ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶೈಲಿಯಲ್ಲಿ ಮಹಾರಾಷ್ಟ್ರದ ಹಲವು ನಗರಗಳು, ರಸ್ತೆ, ಏರ್‌ಪೋರ್ಟ್‌ಗಳ ಹೆಸರು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ..!
'ನಾವೇ ನಿಜವಾದ ಶಿವ ಸೈನಿಕರು, ನಾವೇ ನಿಜವಾದ ಬಾಳಾಸಾಹೇಬ್ ಠಾಕ್ರೆ ಅವರ ಅನುಯಾಯಿಗಳು' ಎಂದು ಏಕನಾಥ್ ಶಿಂಧೆ ಅಬ್ಬರಿಸಿದ ಬೆನ್ನಲ್ಲೇ, ಮುಸ್ಲಿಂ ಹೆಸರುಗಳನ್ನು ಹಿಂದೂ ಹೆಸರುಗಳನ್ನಾಗಿ ಬದಲಿಸಲು ಉದ್ಧವ್ ಠಾಕ್ರೆ ನಿರ್ಧರಿಸಿದ್ದಾರೆ. ಎನ್‌ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಸಾರಥ್ಯ ವಹಿಸಿರುವ ಶಿವಸೇನೆ, ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವ ಆಶಯಗಳನ್ನು ಮೂಲೆ ಗುಂಪು ಮಾಡಿದೆ ಎಂದು ಬಂಡಾಯ ಶಾಸಕರ ಬಣ ಆರೋಪಿಸಿರುವ ಬೆನ್ನಲ್ಲೇ, ಉದ್ಧವ್ ಠಾಕ್ರೆ ಸರ್ಕಾರ ಕೈಗೊಂಡಿರುವ ಈ ಕ್ರಮ, ಭಾರೀ ಚರ್ಚೆಗೆ ಗ್ರಾಸವಾಗಿದೆ.

Maharashtra Crisis: ನನ್ನ ಜೊತೆ 50 ಶಾಸಕರಿದ್ದಾರೆ, ನಮ್ಮದೇ ಶಿವಸೇನೆ..! ಏಕನಾಥ್ ಶಿಂಧೆ ರಣಕಹಳೆ..!
ಬುಧವಾರ ಸಂಜೆ ನಡೆದ ಮಹಾರಾಷ್ಟ್ರ ಸರ್ಕಾರದ ಸಂಪುಟ ಸಭೆಯಲ್ಲಿ ಮಹಾರಾಷ್ಟ್ರ ರಾಜ್ಯದ ಹಲವು ಪ್ರಮುಖ ನಗರಗಳ ಹೆಸರನ್ನು ಬದಲಾವಣೆ ಮಾಡಲಾಗಿದೆ. ಔರಂಗಾಬಾದ್ ನಗರದ ಹೆಸರನ್ನು ಸಂಭಾಜಿ ನಗರ ಎಂದು ಬದಲಾವಣೆ ಮಾಡಲಾಗಿದೆ. ಒಸ್ಮಾನಾಬಾದ್ ನಗರದ ಹೆಸರನ್ನು ಧಾರಾಶಿವ್ ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ನವಿ ಮುಂಬೈ ವಿಮಾನ ನಿಲ್ದಾಣದ ಹೆಸರನ್ನು ಡಿ. ಬಿ. ಪಾಟೀಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.


ಇನ್ನು ಮಹಾರಾಷ್ಟ್ರ ರಾಜ್ಯದ ಪುಣೆ ನಗರದ ಹೆಸರನ್ನು ಜಿಜಾನಗರ ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಇನ್ನು ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಸಚಿವರೂ ಕೂಡಾ ಕೆಲವು ಹೆಸರುಗಳ ಬದಲಾವಣೆಗೆ ಒತ್ತಾಯಿಸಿದರು. ಅದರಂತೆ, ಶಿವ್ಡಿ ನವಾ ಶಾವೆ ಟ್ರಾನ್ಸ್ ಹಾರ್ಬರ್ ಲಿಂಕ್ ರಸ್ತೆ ಹೆಸರನ್ನು ಬ್ಯಾರಿಸ್ಟರ್ ಎ. ಆರ್. ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ.

Maharashtra Crisis: ಎಷ್ಟು ದಿನ ಅಲ್ಲೇ ಅಡಗಿರ್ತೀರಾ? ಇಲ್ಲಿಗೆ ಬರಲೇಬೇಕು: ಬಂಡಾಯ ಶಾಸಕರಿಗೆ ಸೇನಾ ಎಚ್ಚರಿಕೆ
ಇನ್ನು ಮಹಾರಾಷ್ಟ್ರ ಸರ್ಕಾರ ಗುರುವಾರ ವಿಧಾನ ಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸಬೇಕಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸದನದಲ್ಲಿ ಬಹುಮತ ಸಾಬೀತು ಮಾಡಬೇಕಿದೆ. ಕಾಂಗ್ರೆಸ್ ಹಾಗೂ ಎನ್‌ಸಿಪಿ ಮಿತ್ರ ಪಕ್ಷಗಳ ಸದಸ್ಯರು ಠಾಕ್ರೆ ಸರ್ಕಾರಕ್ಕೆ ತಮ್ಮ ಬೆಂಬಲ ನೀಡಿದ್ದಾರಾದರೂ, ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆ ಹಾಗೂ ಅವರ ಸುಮಾರು 50 ಬೆಂಬಲಿಗ ಶಿವಸೇನೆ ಶಾಸಕರು ಸರ್ಕಾರದ ವಿರುದ್ಧ ನಿಲ್ಲಲು ಹಾಗೂ ಈ ಮೂಲಕ ಉದ್ಧವ್ ಠಾಕ್ರೆ ಸರ್ಕಾರವನ್ನು ಕೆಡವಲು ನಿರ್ಣಯಿಸಿದ್ದಾರೆ. ಮೇಲ್ನೋಟಕ್ಕೆ ಶಿಂಧೆ ಬಣವು ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸುವ ತಂತ್ರ ನಡೆಸ್ತಿದೆ ಎನ್ನಲಾಗ್ತಿದೆ. ಆದ್ರೆ, ಈ ಕುರಿತಂತೆ ಶಿಂಧೆ ಬಣವಾಗಲೀ, ಬಿಜೆಪಿ ನಾಯಕರಾಗಲೀ ಅಧಿಕೃತ ಹೇಳಿಕೆ ನೀಡಿಲ್ಲವಾದ್ರೂ, ತೆರೆ ಮರೆಯ ಪ್ರಯತ್ನಗಳು ನಡೆಯುತ್ತಿರೋದು ನಿಚ್ಚಳವಾಗಿದೆ.

ಈ ನಡುವೆ, ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗುರುವಾರ ವಿಶ್ವಾಸಮತ ಸಾಬೀತು ಮಾಡುವ ವಿಶ್ವಾಸ ವ್ಯಕ್ತಪಡಿಸಿದರು. ಜೊತೆಯಲ್ಲೇ ತಮಗೆ ತಮ್ಮವರಿಂದಲೇ ದ್ರೋಹವಾಗಿದೆ ಎಂದರು. ತಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದೂ ಹೇಳಿದರು. ಉದ್ಧವ್ ಠಾಕ್ರೆ ಅವರ ಈ ಮಾತುಗಳು ನಿರ್ಗಮನ ಭಾಷಣದಂತೆ ಗೋಚರವಾಯ್ತು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ