ಆ್ಯಪ್ನಗರ

ಪ್ರಧಾನಿ ಮೋದಿ, ಅಮಿತ್ ಶಾ ಭೇಟಿಗೆ 'ದೀದಿ' ಕೊಟ್ಟಿರುವ ಕಾರಣವೇ ಡಿಫ್ರೆಂಟ್!

ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಬದ್ಧ ವಿರೋಧಿಯಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬುಧವಾರ ಮೋದಿಯವರನ್ನು ಭೇಟಿಯಾದ್ರು, ಗುರುವಾರ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ರಾಜಕೀಯ ವೈರತ್ವ ಇರುವ ಇಬ್ಬರೂ ನಾಯಕರನ್ನು ಭೇಟಿಯಾದ ಕಾರಣವೇನು ಅಂತಾ ಕೇಳಿದ್ರೆ, ವಿಭಿನ್ನ ಉತ್ತರ ನೀಡಿದ್ದಾರೆ ದೀದಿ!

Vijaya Karnataka 19 Sep 2019, 9:03 pm
ಹೊಸ ದಿಲ್ಲಿ: ಮೂರು ದಿನಗಳ ದಿಲ್ಲಿ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಗುರುವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದರು. ಬುಧವಾರವಷ್ಟೇ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದ ಮಮತಾ, ಗುರುವಾರ ಶಾ ಅವರನ್ನು ಭೇಟಿ ಮಾಡಿ ಗಮನ ಸೆಳೆದರು.
Vijaya Karnataka Web deedi modi shah


ಲೋಕಸಭೆ ಚುನಾವಣೆ ಸಂದರ್ಭದಲ್ಲಿನ ಭಾರಿ ವಾಕ್ಸಮರದ ಬಳಿಕ 'ದೀದಿ' ಹಾಗೂ ಅಮಿತ್‌ ಶಾ ಮುಖಾಮುಖಿಯಾಗಿ ಚರ್ಚೆ ನಡೆಸಿದ್ದು ಇದೇ ಮೊದಲು. ಅಕ್ರಮ ವಲಸಿಗರನ್ನು ಹೊರದಬ್ಬಲು ದೇಶಾದ್ಯಂತ ಎನ್‌ಆರ್‌ಸಿ ಜಾರಿಗೆ ತರಲಾಗುವುದೆಂದು ಅಮಿತ್‌ ಶಾ ಹೇಳಿದ ಬೆನ್ನಲ್ಲೇ ಮಮತಾ ಅವರು ಗೃಹ ಸಚಿವರನ್ನು ಭೇಟಿಯಾಗಿದ್ದಾರೆ. ಶಾರದಾ ಚಿಟ್‌ಫಂಡ್‌ ಹಗರಣದಲ್ಲಿ ಸಿಬಿಐನಿಂದ ಬಂಧನ ಭೀತಿ ಎದುರಿಸುತ್ತಿರುವ ಹಿರಿಯ ಐಪಿಎಸ್‌ ಅಧಿಕಾರಿ ರಾಜೀವ್‌ ಕುಮಾರ್‌ ರಕ್ಷಣೆಗೆ ಮಮತಾ ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲೂ ಈ ಭೇಟಿ ಮಹತ್ವ ಪಡೆದಿದೆ.

ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಮತಾ ಬ್ಯಾನರ್ಜಿ, 'ಅಸ್ಸಾಂ ಎನ್‌ಆರ್‌ಸಿ ಪಟ್ಟಿಯಿಂದ 19 ಲಕ್ಷ ನೈಜ ನಿವಾಸಿಗಳನ್ನು ಕೈಬಿಟ್ಟಿರುವ ಬಗ್ಗೆ ಗೃಹ ಸಚಿವರ ಜತೆ ಚರ್ಚಿಸಿದ್ದೇನೆ. ಹಿಂದಿ, ಬೆಂಗಾಳಿ ಮಾತನಾಡುವವರು, ಗೋರ್ಖಾ ಸಮುದಾಯದವರನ್ನು ಕೈಬಿಡಲಾಗಿದ್ದು, ಇವರೆಲ್ಲರೂ ಅಪ್ಪಟ ಭಾರತೀಯ ಪ್ರಜೆಗಳಾಗಿದ್ದಾರೆ. ಈ ದೋಷ ಸರಿಪಡಿಸುವ ಮೂಲಕ ಯಾವೊಬ್ಬ ನೈಜ ಭಾರತೀಯನಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಅಮಿತ್‌ ಶಾ ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ' ಎಂದು ಹೇಳಿದರು. ಪಶ್ಚಿಮ ಬಂಗಾಳದಲ್ಲಿಎನ್‌ಆರ್‌ಸಿ ಜಾರಿಗೆ ತರುವ ವಿಚಾರದಲ್ಲಿ ಮಾತುಕತೆ ನಡೆಸಲಾಗಿದೆಯೇ ಎಂಬ ಪ್ರಶ್ನೆಗೆ ಅವರು, ತಾವು ಗೃಹ ಸಚಿವರ ಜತೆ ಕೇವಲ ಅಸ್ಸಾಂ ಎನ್‌ಆರ್‌ಸಿ ಬಗ್ಗೆ ಮಾತ್ರ ಚರ್ಚಿಸಿರುವುದಾಗಿ ತಿಳಿಸಿದರು.

ಬುಧವಾರವಷ್ಟೇ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪಶ್ಚಿಮ ಬಂಗಾಳ ಹೆಸರನ್ನು ಬಾಂಗ್ಲಾ ಎಂದು ಬದಲಾವಣೆ ಮಾಡುವ ಪ್ರಸ್ತಾವನೆ ಕುರಿತು ಚರ್ಚಿಸಿದ್ದರು. ಮೋದಿ ಹಾಗೂ ಶಾ ಅವರ ಭೇಟಿ ಕುರಿತು ಮಾಧ್ಯಮ ಪ್ರತಿನಿಧಿಗಳಿಂದ ಪ್ರಶ್ನೆ ಎದುರಾದಾಗ, 'ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಹೀಗಾಗಿ ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿ ಮಾಡುವುದು ನನ್ನ ಸಾಂವಿಧಾನಿಕ ಬಾಧ್ಯತೆಯಾಗಿದೆ' ಎಂದು ಉತ್ತರಿಸಿದರು!

ಪ್ರಧಾನಿ ಭೇಟಿ ಮಾಡಿದ ಮಮತಾ: ಮೋದಿ ಜತೆ ಚರ್ಚೆ ಫಲಪ್ರದ ಎಂದ ದೀದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ