ಆ್ಯಪ್ನಗರ

ನನ್ನ ಮನೆಗೂ ಸಿಬಿಐ ಬಂದ್ರೆ ಅಡುಗೆ ಮಾಡಿ ಬಡಿಸುವೆ: ಮಮತಾ ಬ್ಯಾನರ್ಜಿ

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕಳಂಕಿತ ಬಂಗಾಳ ಪೊಲೀಸ್ ಆಯುಕ್ತರನ್ನು ಬಂಧಿಸಲು ಸಿಬಿಐ ತೆರಳಿರುವುದರ ವಿರುದ್ಧ ಕೆರಳಿ ಕೆಂಡವಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರದ ವಿರುದ್ಧ, ವಿಶೇಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Vijaya Karnataka Web 14 Feb 2019, 1:05 pm
ಹೊಸದಿಲ್ಲಿ: ಕೇಂದ್ರಕ್ಕೆ ಮತ್ತೆ ಸವಾಲು ಹಾಕಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶವ ಪೆಟ್ಟಿಗೆಗಾಗಿ ನಾನು ಕಾಯುವುದಿಲ್ಲ, ಶವ ಪೆಟ್ಟಿಗೆಯೇ ನನಗಾಗಿ ಕಾಯುತ್ತದೆ ಎಂದಿದ್ದಾರೆ.
Vijaya Karnataka Web mamata banerjee says she will greet cbi officials with home cooked food
ನನ್ನ ಮನೆಗೂ ಸಿಬಿಐ ಬಂದ್ರೆ ಅಡುಗೆ ಮಾಡಿ ಬಡಿಸುವೆ: ಮಮತಾ ಬ್ಯಾನರ್ಜಿ


ಜಂತರ್ ಮಂತರ್‌ನಲ್ಲಿ ನಡೆದ ಸಮಾವೇಶದಲ್ಲಿ ಬುಧವಾರ ನೆರೆದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಮಮತಾ, "ಕೇಂದ್ರ ಸರಕಾರವು ಕೋಲ್ಕತಾದಲ್ಲಿರುವ ಕಾಳಿಘಾಟ್‌ನ ತನ್ನ ಮನೆಗೂ ಕೇಂದ್ರದ ಏಜೆನ್ಸಿಗಳನ್ನು ಕಳುಹಿಸಬಹುದು. ಆ ಅಧಿಕಾರಿಗಳಿಗೆ ಮನೆಯಡುಗೆ ಮಾಡಿ ಬಡಿಸುತ್ತೇನೆ" ಎಂದು ಘರ್ಜಿಸಿದರು.

ಈ ಹಿಂದೆ, ಸಿಬಿಐ ಅಧಿಕಾರಿಗಳು ಬಂಗಾಳದ ಭ್ರಷ್ಟಾಚಾರ ಕಳಂಕಿತ ಪೊಲೀಸ್ ಅಧಿಕಾರಿಯನ್ನು ವಿಚಾರಿಸಲು ತೆರಳಿದ್ದಾಗ, 'ಕೈಗೆ ರಕ್ತ ಮೆತ್ತಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಜತೆ ಮಾತನಾಡುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ' ಎಂದಿದ್ದರು ಮಮತಾ ಬ್ಯಾನರ್ಜಿ.

"ನಾಳೆ ನನ್ನ ಮನೆಗೂ ಅವರು ಸಿಬಿಐ ಅಧಿಕಾರಿಗಳನ್ನು ಕಳುಹಿಸುತ್ತಾರೆ. ನಿಮಗೆ ಮನೆಯಡುಗೆ ಮಾಡಿ ಹಾಕುತ್ತೇನೆ ಅಂತ ನಾನವರಿಗೆ ಹೇಳುವೆ. ವೆಜ್, ನಾನ್‌ವೆಜ್ ಅಥವಾ ರೋಟಿಯನ್ನು ಬೇಕಾದರೂ ಕೊಡುವೆ. ನಾನು ಭೀತಳಾಗಿಲ್ಲ ಎಂಬುದನ್ನವರು ಮರೆತಿದ್ದಾರೆ. ನಾನೆಂದಿಗೂ ಭೀತಿಗೊಳ್ಳುವುದಿಲ್ಲ" ಎಂದರು ಬ್ಯಾನರ್ಜಿ.

"ನಾನು ಅದೆಷ್ಟೋ ಸರಕಾರಗಳನ್ನು ನೋಡಿದ್ದೇನೆ, ಆದರೆ ಇಂಥದ್ದನ್ನೆಂದಿಗೂ ನೋಡಿಲ್ಲ. ಅವರು ಕೋಲ್ಕತಾ ಪೊಲೀಸ್ ಕಮಿಷನರ್ ಮನೆಗೇ ಸಿಬಿಐಯನ್ನು ಕಳುಹಿಸುತ್ತಾರೆ. ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಅವರು. ಅವರು ನನ್ನನ್ನೂ ಕಡೆಗಣಿಸಿದ್ದಾರೆ. ನಾನು ಹೋರಾಟದಿಂದಲೇ ಹುಟ್ಟಿದವಳು" ಎಂದ ಮಮತಾ, "ಐಪಿಎಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆಯೂ ಕೇಂದ್ರವು ನಿರ್ದೇಶಿಸುತ್ತದೆ. ಅವರ ಮೆಡಲ್‌ಗಳನ್ನು ಮರಳಿ ಪಡೆಯುವುದಾಗಿಯೂ ಹೇಳುತ್ತಿದೆ. ಹಾಗಿದ್ದರೆ, ಬಂಗಾಳದ ಎಲ್ಲ ಪೊಲೀಸ್ ಅಧಿಕಾರಿಗಳೂ ಕೇಂದ್ರಕ್ಕೆ ತಮ್ಮ ಮೆಡಲ್‌ಗಳನ್ನು ಹಿಂತಿರುಗಿಸುತ್ತಾರೆ. ಇದೂ ಒಂದು ಆಡಳಿತದ ಭಾಷೆಯೇ?" ಎಂದು ಪ್ರಶ್ನಿಸಿದರು.

ಅವರು ತಮ್ಮದೇ ಅಧಿಕಾರಿಗಳ ವಿರುದ್ಧ ಮಾತ್ರವಲ್ಲ ತಮ್ಮದೇ ಸಚಿವರ ಮೇಲೂ ಹದ್ದಿನ ಕಣ್ಣಿಡುತ್ತಾರೆ. ಮಾಧ್ಯಮಗಳ ಮೇಲೂ. ಅವರಿಗೆ ಯಾರ ಮೇಲೂ ನಂಬಿಕೆಯಿಲ್ಲ. ನನ್ನ ಫೋನ್ ಮಾತ್ರವಲ್ಲದೆ ಈ ವೇದಿಕೆಯಲ್ಲಿರುವ ಎಲ್ಲ ನಾಯಕರ ಫೋನನ್ನೂ ಕೂಡ ಕದ್ದಾಲಿಸಲಾಗುತ್ತಿದೆ ಎಂದು ಮತಾ ಆರೋಪಿಸಿದರು.

"ವಾಟ್ಸ್ಆ್ಯಪ್ ಸಂದೇಶಗಳು ಸುರಕ್ಷಿತ ಅಂತ ನೀವಂದುಕೊಂಡಿದ್ದರೆ, ಮತ್ತೊಮ್ಮೆ ಆಲೋಚಿಸಿ. ಅದನ್ನೂ ಭೇದಿಸಲು ಅವರಲ್ಲಿ ಇಸ್ರೇಲಿ ತಂತ್ರಜ್ಞಾನವಿದೆ. ಅವರಡಿಯಲ್ಲಿ ಯಾವುದು ಕೂಡ ಸುರಕ್ಷಿತವಲ್ಲ. ಎಲ್ಲ ಕಡೆ ಭಯದ ವಾತಾವರಣವಿದೆ" ಎಂದು ಮಮತಾ ಟೀಕಿಸಿದರು.

"ದೀರ್ಘ ಕಾಲದಿಂದ ನಾವು ಸಹಿಸಿಕೊಂಡಿದ್ದೇವೆ. ಇನ್ನು ಸಾಧ್ಯವೇ ಇಲ್ಲ. ಗಬ್ಬರ್ ಸಿಂಗ್ ಬರುತ್ತಾನೆ ಅಂತ ಹೆದರಿಸುತ್ತಾ ತಾಯಂದಿರು ಮಕ್ಕಳನ್ನು ಮಲಗಿಸಲು ಪ್ರಯತ್ನಿಸುತ್ತಾರೆ. ಈಗ ಉದ್ಯಮಿಗಳು ಗಬ್ಬರ್ ಸಿಂಗ್‌ಗೆ ಹೆದರುತ್ತಾರೆ, ಮಾಧ್ಯಮಗಳು ಹೆದರುತ್ತಾರೆ. ಮಾತ್ರವಲ್ಲದೆ ಯುವಜನರೂ ಕೂಡ ಗಬ್ಬರ್ ಸಿಂಗ್‌ಗೆ ಹೆದರುತ್ತಿದ್ದಾರೆ. ಒಬ್ಬ ಗಬ್ಬರ್ ಸಿಂಗ್ ಅಲ್ಲ, ಸಾಕಷ್ಟು ಗಬ್ಬರ್ ಸಿಂಗ್‌ಗಳು ಇದ್ದಾರೆ" ಎಂದರು ಮಮತಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ