ಆ್ಯಪ್ನಗರ

ನಾಯಿ ಬಳಿ Sorry ಕೇಳದ್ದಕ್ಕೆ ಬರ್ಬರ ಹತ್ಯೆ

ರಾಷ್ಟ್ರ ರಾಜಧಾನಿಯ ರಸ್ತೆ ಮತ್ತೊಂದು ದುರಂತಕ್ಕೆ ಸಾಕ್ಷಿಯಾಯಿತು. 10ಜನ ಸದಸ್ಯರ ಕುಟುಂಬವೊಂದು ಜೀವನಾಧಾರವಾಗಿದ್ದ ಜೀವವೊಂದನ್ನು ಕಳೆದುಕೊಂಡರೆ, ಮತ್ತೊಂದು ಜೀವ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ.

TIMESOFINDIA.COM 8 Oct 2018, 11:16 am
ಹೊಸದಿಲ್ಲಿ: ಅದು ಮಧ್ಯರಾತ್ರಿ ಸಮಯ. ಖಾಲಿ ಹೊಡೆಯುತ್ತಿದ್ದ ರಸ್ತೆಯಲ್ಲಿ ನೀರವ ಮೌನವಿತ್ತು. ಮಿನಿ ಟ್ರಕ್ ಚಲಾಯಿಸಿಕೊಂಡು ಬರುತ್ತಿದ್ದ ವಿಜೇಂದರ್ ವಾಹನವನ್ನು ಪಾರ್ಕ್ ಮಾಡಿ ಮನೆ ಸೇರುವ ತವಕದಲ್ಲಿದ್ದ. ಅಷ್ಟರಲ್ಲಿ ಅವನ ವಾಹನ ಅಲ್ಲೇ ಕುಳಿತಿದ್ದ ಕಪ್ಪು ಲ್ಯಾಬ್ರಡಾರ್ ನಾಯಿಗೆ ಸ್ವಲ್ಪ ತಾಗಿದೆ. ಆಘಾತಕ್ಕೊಳಗಾದ ನಾಯಿ ಆತನನ್ನು ನೋಡಿ ಬೊಗಳಲು ಪ್ರಾರಂಭಿಸಿದೆ. ಕೆಲ ನಿಮಿಷದ ಬಳಿಕ ವಿಜೇಂದರ್ (40) ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನಿಗೆ ಚಾಕು ಮತ್ತು ಸ್ಕ್ರೂಡ್ರೈವರ್‌ನಿಂದ ತಿವಿದು ಹತ್ಯೆಯೈಯ್ಯಲಾಗಿತ್ತು. ನಾಯಿ ಬಳಿ ಕ್ಷಮೆ ಕೇಳಲಿಲ್ಲವೆಂಬ ಕಾರಣಕ್ಕೆ ಆತನ ಜೀವವನ್ನೇ ತೆಗೆಯಲಾಗಿತ್ತು.
Vijaya Karnataka Web Vijender


ಹೌದು, ರಾಷ್ಟ್ರ ರಾಜಧಾನಿಯ ರಸ್ತೆ ಮತ್ತೊಂದು ದುರಂತಕ್ಕೆ ಸಾಕ್ಷಿಯಾಯಿತು. 10ಜನ ಸದಸ್ಯರ ಕುಟುಂಬವೊಂದು ಜೀವನಾಧಾರವಾಗಿದ್ದ ಜೀವವೊಂದನ್ನು ಕಳೆದುಕೊಂಡರೆ, ಮತ್ತೊಂದು ಜೀವ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ.

ನೈರುತ್ಯ ದೆಹಲಿಯ ಉತ್ತಮ ನಗರದ ಮೋಹನ್ ಗಾರ್ಡನ್ ಪ್ರದೇಶದಲ್ಲಿ ಶನಿವಾರ ಈ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು ಘಟನೆಯಲ್ಲಿ ವಿಜೇಂದರ್ ಸಾವನ್ನಪ್ಪಿದರೆ, ಆತನ ಸಹೋದರ ರಾಜೇಶ್ ರಾಣಾ(45) ಆಸ್ಪತ್ರೆ ಪಾಲಾಗಿದ್ದಾರೆ.

ಆರೋಪಿಗಳನ್ನು ಸಹೋದರರಾದ ಅಂಕಿತ್, ಪರಾಸ್ ಮತ್ತು ಅವರ ಮನೆ ಬಾಡಿಗೆದಾರ ದೇವ್ ಚೋಪ್ರಾ ಎಂದು ಗುರುತಿಸಲಾಗಿದೆ.

ಅಷ್ಟಕ್ಕೂ ಆದದ್ದೇನು?

ಅಂಕಿತ್, ಪರಾಸ್ ಮತ್ತು ದೇವ ಮಧ್ಯರಾತ್ರಿ ನಾಯಿ ಟಾಮಿಯನ್ನು ಅಡ್ಡಾಡಿಸಲು ರಸ್ತೆ ಕಡೆ ಬಂದಿದ್ದರು. ಮೂವರು ಅಲ್ಲೇ ನಿಲ್ಲಿಸಲಾಗಿದ್ದ ಸ್ಕೂಟರ್ ಒಂದರ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದರೆ, ಸಾಕು ನಾಯಿ ಟಾಮಿ ಅಲ್ಲೇ ಪಕ್ಕ ಕುಳಿತಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದ ವಿಜೇಂದರ್ ವಾಹನ ಟಾಮಿಗೆ ಸ್ವಲ್ಪ ಸವರಿಕೊಂಡು ಹೋಗಿದ್ದು ಭಯಗೊಂಡ ನಾಯಿ ಬೊಗಳುತ್ತಿದ್ದಂತೆ ಮೂವರು ಅಲ್ಲಿಗೋಡಿ ಬಂದಿದ್ದಾರೆ. ಟಾಮಿ ಬಳಿ ಕ್ಷಮೆ ಕೇಳು ಎಂದವರು ವಿಜೇಂದರ್‌ಗೆ ಒತ್ತಾಯಿಸಿದ್ದಾರೆ. ಕೋಪಗೊಂಡ ವಿಜೇಂದರ್ ನಿಮ್ಮ ನಾಯಿಯನ್ನು ಸರಿಯಾಗಿ ನೋಡಿಕೊಳ್ಳಿ ಎಂದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮೂವರು ಆತನ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾರೆ.

ತಪ್ಪಿಸಿಕೊಂಡ ವಿಜೇಂದರ್ ಮನೆ ಕಡೆ ಧಾವಿಸಿದ್ದು, ಮನೆ ತಲುಪಲು 50ಮೀಟರ್ ದೂರವಿದ್ದಾಗ ಆತನನ್ನು ಮತ್ತೆ ಎಳೆದುಕೊಂಡು ಬಂದ ಅಂಕಿತ್, ಪರಾಸ್ ಆತನಿಗೆ ಚಾಕು ಮತ್ತು ಸ್ಕ್ರೂಡ್ರೈವರ್‌‌ನಿಂದ ಚುಚ್ಚಿದ್ದಾರೆ. ತಮ್ಮನ ಕೂಗು ಕೇಳಿ ಸಹಾಯಕ್ಕೆ ಧಾವಿಸಿದ ಅಣ್ಣ ರಾಜೇಶ್ ಮೇಲೂ ಹಲ್ಲೆ ನಡೆಸಲಾಯಿತು ಎಂದು ಮೃತನ ಸಹೋದರಿ ಸುಷ್ಮಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ