ಜೈಪುರ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮದನ್ ಲಾಲ್ ಸೈನಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿತ್ತು. ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ಕಾರಣ ಡಾ.ಸಿಂಗ್ ಅವಿರೋಧವಾಗಿ ಆಯ್ಕೆಯಾದರು. ನಾಮಪತ್ರ ಸಲ್ಲಿಕೆಗೆ ಕೊನೆದಿನವಾದ ಸೋಮವಾರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಡಾ.ಸಿಂಗ್ ಅವರ ಪರವಾಗಿ ರಾಜಸ್ಥಾನ ಸರಕಾರದ ಮುಖ್ಯ ಸಚೇತಕ ಮಹೇಶ್ ಜೋಶಿ ಆಯ್ಕೆ ಪ್ರಮಾಣ ಪತ್ರ ಸ್ವೀಕರಿಸಿದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿ ಪಕ್ಷದ ಪ್ರಮುಖರು ಡಾ.ಸಿಂಗ್ ಅವರನ್ನು ಅಭಿನಂದಿಸಿದ್ದಾರೆ. 1991ರಿಂದ 2019ರ ಜೂನ್ 14ರವರೆಗೆ ಸತತ ಐದು ಅವಧಿಗೆ ಡಾ.ಮನಮೋಹನ್ ಸಿಂಗ್ ಅಸ್ಸಾಂನಿಂದ ರಾಜ್ಯಸಭೆಗೆ ಚುನಾಯಿತರಾಗಿದ್ದರು. ಈಗ ಅಸ್ಸಾಂನಲ್ಲಿ ಬಿಜೆಪಿ ಆಡಳಿತವಿದೆ. ಮಿತ್ರಪಕ್ಷ ಡಿಎಂಕೆ ತಮಿಳುನಾಡಿನಲ್ಲಿ ಒಂದು ರಾಜ್ಯಸಭಾ ಸ್ಥಾನವನ್ನು ಡಾ.ಸಿಂಗ್ ಅವರಿಗೆ ಬಿಟ್ಟುಕೊಡಲು ನಿರಾಕರಿಸಿತ್ತು. ಹೀಗಾಗಿ ಯಾವ ರಾಜ್ಯದಿಂದಲೂ ಮಾಜಿ ಪ್ರಧಾನಿಯನ್ನು ಸಂಸತ್ನ ಮೇಲ್ಮನೆಗೆ ಮತ್ತೆ ಆಯ್ಕೆ ಮಾಡಲು ಕಾಂಗ್ರೆಸ್ಗೆ ಅವಕಾಶವೇ ಇರಲಿಲ್ಲ.
ರಾಜಸ್ಥಾನದಿಂದ ಡಾ.ಮನಮೋಹನ್ ರಾಜ್ಯಸಭೆಗೆ ಅವಿರೋಧ ಆಯ್ಕೆ
ನಾಮಪತ್ರ ಸಲ್ಲಿಕೆಗೆ ಕೊನೆದಿನವಾದ ಸೋಮವಾರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಡಾ.ಸಿಂಗ್ ಅವರ ಪರವಾಗಿ ರಾಜಸ್ಥಾನ ಸರಕಾರದ ಮುಖ್ಯ ಸಚೇತಕ ಮಹೇಶ್ ಜೋಶಿ ಆಯ್ಕೆ ಪ್ರಮಾಣ ಪತ್ರ ಸ್ವೀಕರಿಸಿದರು.
PTI 20 Aug 2019, 5:00 am