ಆ್ಯಪ್ನಗರ

ಅಸಹಾಯಕ ಪಿಎಂ ಎಂಬ ಬಣ್ಣನೆಗೆ ಡಾ.ಮನಮೋಹನ್‌ ಅಸಮಾಧಾನ

ನಯ್ಯರ್‌ ನಿಧನ ಹೊಂದುವ ಮೊದಲು ಬರೆದ ಕೊನೆಯ ಕೃತಿಯಲ್ಲಿ ಭಾರತದ ಗಣ್ಯ ನಾಯಕರ ಕುರಿತು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಮನಮೋಹನ್‌ ಸಿಂಗ್‌ ಅವರ ಆಡಳಿತ ಶೈಲಿಯ ಕುರಿತೂ ಬಣ್ಣನೆ ಇದೆ.

Vijaya Karnataka 10 Feb 2019, 5:00 am
ಹೊಸದಿಲ್ಲಿ: ಖ್ಯಾತ ಪತ್ರಕರ್ತ ದಿವಂಗತ ಕುಲದೀಪ್‌ ನಯ್ಯರ್‌ ಅವರ ಕೊನೆಯ ಪುಸ್ತಕದಲ್ಲಿ ತಮ್ಮ ಆಡಳಿತ ವೈಖರಿ ಕುರಿತು ಪ್ರಸ್ತಾಪಿಸಲಾಗಿರುವ ಸಂಗತಿಗಳ ಬಗ್ಗೆ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web sing


ಇದೇ ಕಾರಣಕ್ಕಾಗಿಯೇ ಹೊಸದಿಲ್ಲಿಯಲ್ಲಿ ಶುಕ್ರವಾರ ಸಂಜೆ ನಡೆದ ನಯ್ಯರ್‌ ಅವರ 'ಆನ್‌ ಲೀಡರ್ಸ್‌ ಅಂಡ್‌ ಐಕಾನ್ಸ್‌ ಫ್ರಾಮ್‌ ಜಿನ್ಹಾ ಟು ಮೋದಿ' ಪುಸ್ತಕ ಬಿಡುಗಡೆ ಸಮಾರಂಭದಿಂದಲೂ ಅವರು ದೂರ ಉಳಿದಿದ್ದರು.

ನಯ್ಯರ್‌ ನಿಧನ ಹೊಂದುವ ಮೊದಲು ಬರೆದ ಕೊನೆಯ ಕೃತಿಯಲ್ಲಿ ಭಾರತದ ಗಣ್ಯ ನಾಯಕರ ಕುರಿತು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಮನಮೋಹನ್‌ ಸಿಂಗ್‌ ಅವರ ಆಡಳಿತ ಶೈಲಿಯ ಕುರಿತೂ ಬಣ್ಣನೆ ಇದೆ. ''ಪ್ರಧಾನಿಯಾಗಿದ್ದಾಗ ಮನಮೋಹನ್‌ ಅವರಿಗೆ ಸ್ವಂತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ‌ ಇರಲಿಲ್ಲ. ಸರಕಾರಿ ಕಡತಗಳನ್ನು ಅಂತಿಮಗೊಳಿಸುವ ಮುನ್ನ ಅವರು ಅಂದಿನ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಕಳಿಸಿಕೊಡುತ್ತಿದ್ದರು. ಅವರ ಸಮ್ಮತಿ ಮೀರಿ ಒಂದು ಹೆಜ್ಜೆಯೂ ಮುಂದೆ ಇರಿಸುತ್ತಿರಲಿಲ್ಲ,'' ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

''ನಾನು ಪ್ರಧಾನಿಯಾಗಿದ್ದ ಅವಧಿಯ ಆಡಳಿತ ವೈಖರಿ ಕುರಿತ ಈ ಸಾಲುಗಳು ಸತ್ಯಕ್ಕೆ ದೂರವಾದ ಸಂಗತಿಯನ್ನು ವಿವರಿಸುತ್ತವೆ. ನಯ್ಯರ್‌ ಅವರಿಗೆ ಅಂದು ಅಂತಹದ್ದೊಂದು ಅನುಮಾನ ಬಂದಿದ್ದರೆ ನನ್ನನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಿತ್ತು. ಅದರ ಬದಲು, ಸತ್ಯಕ್ಕೆ ದೂರವಾದ ಸಂಗತಿಗಳನ್ನು ಪ್ರಸ್ತಾಪಿಸಿ ವೈಯಕ್ತಿಕವಾಗಿ ನನಗೆ ಮುಜುಗರ ಉಂಟು ಮಾಡಿದ್ದಾರೆ,'' ಎಂದು ಮನಮೋಹನ್‌, ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹಾಜರಾಗದೇ ಇರುವುದರ ಕುರಿತು ನಯ್ಯರ್‌ ಪತ್ನಿ ಭಾರತಿ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ