ಆ್ಯಪ್ನಗರ

Me Too India: #MeToo ಬಿರುಗಾಳಿಗೆ ಖ್ಯಾತನಾಮರು ತತ್ತರ

ಕೇಂದ್ರ ಸಚಿವ ಎಂ.ಜೆ.ಅಕ್ಬರ್‌ಗೂ ಕಳಂಕ | ಪದ್ಮಭೂಷಣನ ಬೆನ್ನು ಹತ್ತಿದ ಆರೋಪ | ನಟ ಅಲೋಕ್‌ನಾಥ್‌ ವಿರುದ್ಧವೂ ಆಪಾದನೆ

Vijaya Karnataka Web 10 Oct 2018, 9:13 am
ಹೊಸದಿಲ್ಲಿ: ಬಾಲಿವುಡ್‌ ಸ್ಟಾರ್‌ ನಟರೊಬ್ಬರ ವಿರುದ್ಧದ ಲೈಂಗಿಕ ಕಿರುಕುಳ ಆರೋಪದೊಂದಿಗೆ ಭಾರತದಲ್ಲಿ ಬಿರುಸುಗೊಂಡ 'ಮೀ ಟೂ' ಬಿರುಗಾಳಿ ಈಗ ಕೇಂದ್ರ ಸಚಿವರ ಆದಿಯಾಗಿ ವಿವಿಧ ಕ್ಷೇತ್ರಗಳ ಅನೇಕ ಖ್ಯಾತನಾಮರನ್ನು ಆವರಿಸಿದ್ದು, ಹಲವರ ತಲೆದಂಡ ಪಡೆದಿದೆ.
Vijaya Karnataka Web me-too


ಇದುವರೆಗೆ ಚಿತ್ರೋದ್ಯಮವನ್ನೇ ಕೇಂದ್ರವಾಗಿಸಿಕೊಂಡು ಸುತ್ತುತ್ತಿದ್ದ ಈ ಸುಳಿಗಾಳಿ, ರಾಜಕೀಯ, ಪತ್ರಿಕೋದ್ಯಮ ಕ್ಷೇತ್ರವನ್ನೂ ತಳುಕು ಹಾಕಿ ಕಾಡತೊಡಗಿದೆ. ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಎಂ ಜೆ ಅಕ್ಬರ್‌, ಕೇರಳದ ನಟ ಹಾಗೂ ಶಾಸಕ ಮುಕೇಶ್‌ ಮತ್ತು ಧಾರಾವಾಹಿ ಹಿರಿಯ ನಟ ಅಲೋಕ್‌ನಾಥ್‌ ಅವರುಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಈಗ ಬಯಲಾಗಿವೆ.

ಅಕ್ಬರ್‌ ವಿರುದ್ಧ ಆರೋಪ:
ಪತ್ರಕರ್ತೆ ಪ್ರಿಯಾ ರಮಣಿ ಅವರು ಕೇಂದ್ರ ಸಚಿವ ಎಂ.ಜೆ.ಅಕ್ಬರ್‌ ವಿರುದ್ಧ ಅಂತಹದ್ದೊಂದು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದೆ. ವರ್ಷದ ಹಿಂದೆ ಅಮೆರಿಕದ ಹಾರ್ವಿ ವಿನ್‌ಸ್ಟನ್‌ ಹಗರಣದ ಮೂಲಕ ಸ್ಫೋಟಿಸಿದ 'ಮೀ ಟೂ' ಜಾಗತಿಕ ಸುಂಟರಗಾಳಿ ಈಗ ಇಡೀ ಜಗತ್ತನ್ನು ಆವರಿಸಿ ಥರೇವಾರಿ ಪರಿಣಾಮಗಳನ್ನು ಉಂಟು ಮಾಡತೊಡಗಿದೆ.

ಟ್ವೀಟರ್‌ ಮೂಲಕ ಶುರುವಾದ ಈ ಚಳವಳಿಯ ಆರಂಭದಲ್ಲಿಯೇ ರಮಣಿಯವರು ಅಮೆರಿಕದ ಪತ್ರಿಕೆಗೆ ಬರೆದ ಲೇಖನದಲ್ಲಿ ತಮ್ಮ ಮೇಲೆ ಗಣ್ಯ ಪತ್ರಕರ್ತನಿಂದ ನಡೆದ ಲೈಂಗಿಕ ಕಿರುಕುಳ ಕುರಿತು ವಿವರಿಸಿದ್ದರು. ಆದರೆ ಆ ಲೇಖನದಲ್ಲೆಲ್ಲೂ ಎಂ.ಜೆ.ಅಕ್ಬರ್‌ ಹೆಸರನ್ನು ಅವರು ಉಲ್ಲೇಖಿಸಿರಲಿಲ್ಲ. ಈಗ ಮತ್ತೊಂದು ಟ್ವೀಟ್‌ ಮೂಲಕ ಅಕ್ಬರ್‌ ಹೆಸರನ್ನು ಉಲ್ಲೇಖಿಸಿ, ಇವರು ಲೈಂಗಿಕ ಪೀಡಕ ಎಂದಿದ್ದಾರೆ.

ಸಂಪಾದಕರಾಗಿದ್ದಾಗ ಸಂದರ್ಶನಕ್ಕೆಂದು ಮುಂಬಯಿನ ಹೋಟೆಲ್‌ವೊಂದಕ್ಕೆ ತಮ್ಮನ್ನು ಕರೆಸಿದ ಅಕ್ಬರ್‌, ಕುಡಿಯಲು ಆಹ್ವಾನಿಸಿ ಅನುಚಿತ ರೀತಿಯಲ್ಲಿ ವರ್ತಿಸಿದರು ಎಂದು ರಮಣಿ ಆರೋಪಿಸಿದ್ದಾರೆ. ಇವರಿಂದ ಕಿರುಕುಳಕ್ಕೆ ಒಳಗಾದ ಮಹಿಳೆಯರು ಈಗಲಾದರೂ ಹೊರ ಬಂದು ತಮ್ಮ ಅಭಿಪ್ರಾಯ ದಾಖಲಿಸಬಹುದು ಎನ್ನುವ ಆಶಯದೊಂದಿಗೆ ಈ ಟ್ವೀಟ್‌ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಸುಷ್ಮಾ ಮೌನ: ತಮ್ಮ ಖಾತೆಯ ಕಿರಿಯ ಸಚಿವರ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪದ ಬಗ್ಗೆ ಅಭಿಪ್ರಾಯ ತಿಳಿಸಲು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ನಿರಾಕರಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರು ಈ ಕುರಿತು ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡದೇ ಅವಸರದಲ್ಲಿ ಸುಷ್ಮಾ ಅವರು ಜಾರಿಕೊಂಡಿದ್ದಾರೆ.

ನಟ ಅಲೋಕ್‌ ವಿರುದ್ಧ ಅತ್ಯಾಚಾರದ ಆರೋಪ:
ಹಿಂದಿ ಧಾರಾವಾಹಿ ಹಿರಿಯ ನಟ ಅಲೋಕ್‌ನಾಥ್‌ ಅವರನ್ನೂ ಸುತ್ತಿಕೊಂಡಿರುವ ಮೀ ಟೂ ಬಿರುಗಾಳಿ, ಅತ್ಯಾಚಾರಿ ಎನ್ನುವ ಗಂಭೀರ ಆಪಾದನೆಗೆ ಗುರಿಪಡಿಸಿದೆ. 1990ರ ದಶಕದ ಜನಪ್ರಿಯ 'ತಾರಾ' ಧಾರಾವಾಹಿಯ ನಿರ್ಮಾಪಕಿ ವಿಂತಾ ನಂದಾ ಅವರು ಅಲೋಕ್‌ ನಾಥ್‌ ವಿರುದ್ಧ ಇಂತದ್ದೊಂದು ಆರಾಪದನೆ ಮಾಡಿ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದಾರೆ.

ಪರದೆ ಮೇಲೆ 'ಸಂಸ್ಕಾರಿ' ಎಂದೇ ಜನಪ್ರಿಯಗೊಂಡಿರುವ ಅಲೋಕ್‌ ನಾಥ್‌ ಅವರು ವಾಸ್ತವದಲ್ಲಿ ಮದ್ಯವ್ಯಸನಿ, ಅತ್ಯಾಚಾರಿ ಎಂದು ವಿಂತಾ ನಂದಾ ನಿಂದಿಸಿದ್ದಾರೆ. ಎರಡು ದಶಕಗಳ ಹಿಂದೆ ತಮ್ಮ ಮೇಲೆ ನಡೆದ ದೌರ್ಜಜ್ಯದ ಕಥೆಯನ್ನು ವಿವರವಾಗಿ ಅವರು ಬಿಚ್ಚಿಟ್ಟಿದ್ದಾರೆ. ನಂದಾ ಅವರ ಆರೋಪ ಕುರಿತು ಪ್ರತಿಕ್ರಿಯಿಸಿರುವ ನಟ ಅಲೋಕ್‌ ನಾಥ್‌, ''ಅದನ್ನು ನಾನು ಇಲ್ಲ ಎಂದು ಹೇಳಲಾರೆ, ಆದರೆ ಆ ಆರೋಪ ಸಂಪೂರ್ಣ ಸತ್ಯ ಎಂದು ಒಪ್ಪಿಕೊಳ್ಳಲೂ ಸಾಧ್ಯವಿಲ್ಲ. ವಾಸ್ತವಿಕವಾಗಿ ಅಂದು ಲೈಂಗಿಕ ಕ್ರಿಯೆ ನಡೆದು ಹೋಗಿರುವುದು ನಿಜ. ಆ ಬಗ್ಗೆ ಈಗ ಹೆಚ್ಚು ಮಾತಾಡಲಾರೆ,'' ಎಂದು ಅಲೋಕ್‌ನಾಥ್‌ ಹೇಳಿದ್ದಾರೆ.

ಕೇರಳ ಶಾಸಕ ಮುಕೇಶ್‌ ವಿರುದ್ಧ ಟ್ವೀಟ್‌:
ಮಲಯಾಳಂ ನಟ ಹಾಗೂ ಆಡಳಿತಾರೂಢ ಸಿಪಿಐ(ಎಂ) ಶಾಸಕ ಮುಕೇಶ್‌ ಕುಮಾರ್‌ ವಿರುದ್ಧವೂ ಹಳೆಯ ಲೈಂಗಿಕ ಕಿರುಕುಳ ಪ್ರಕರಣವೊಂದು ಹೆಡೆ ಎತ್ತಿದೆ. ಹಿಂದೆ, ಕೌನ್‌ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದ ಮಲಯಾಳಂ ಅವತರಣಿಕೆ ನಡೆಸಿಕೊಡುವ ವೇಳೆ ಕಾರ್ಯಕ್ರಮದ ಸಂಯೋಜಕರಾಗಿದ್ದ ಮುಕೇಶ್‌ ಕುಮಾರ್‌ ತಮ್ಮನ್ನು ಹೋಟೆಲ್‌ಗೆ ಕರೆದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು ಎಂದು ನಟಿ ತೆಸ್‌ ಜೋಸೆಫ್‌ ಟ್ವೀಟ್‌ ಮಾಡಿದ್ದಾರೆ. ''ಆ ಕಾರ್ಯಕ್ರಮವಾಗಿ 20 ವರ್ಷ ಆಯಿತು. ಈಗ ನನಗೇನೂ ನೆನಪಿಲ್ಲ. ನಟಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಯಾರು ಏನುಬೇಕಾದರೂ ಬರೆದುಕೊಳ್ಳಲಿ. ನಾನು ಯಾವುದೇ ತಪ್ಪು ಮಾಡಿಲ್ಲ,'' ಎಂದು ಮುಕೇಶ್‌ ಪ್ರತಿಕ್ರಿಯಿಸಿದ್ದಾರೆ.

*************

'ಮೀ ಟೂ' ಆಂದೋಲನ ತಮಿಳು ಚಿತ್ರರಂಗಕ್ಕೂ ವ್ಯಾಪಿಸಿದ್ದು, ಪದ್ಮಶ್ರಿ ಭೂಷಣ ಪ್ರಶಸ್ತಿ ಖ್ಯಾತ ಚಿತ್ರ ಸಾಹಿತಿ ವೈರಮುತ್ತು ಮತ್ತು ನಟ ರಾಧಾ ರವಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ವೈರಮುತ್ತು ವಿರುದ್ಧ ಒಟ್ಟು ಮೂವರು ಯುವತಿಯರು ಆರೋಪ ಮಾಡಿದ್ದು, ಈ ಪೈಕಿ ಇಬ್ಬರು ಪತ್ರಕರ್ತೆ ಸಂಧ್ಯಾ ಮೆನನ್‌ ಮೂಲಕ ತಮ್ಮ ನೋವು ಹಂಚಿಕೊಂಡಿದ್ದಾರೆ. ವೈರಮುತ್ತು ಮನೆಗೆ ಕರೆಸಿ ಬಾಗಿಲು ಹಾಕಿ ತಮ್ಮನ್ನು ಅಸಭ್ಯವಾಗಿ ಸ್ಪರ್ಶಿಸಿದರು ಎಂದು ಒಬ್ಬರು ಆರೋಪಿಸಿದರೆ, ಮತ್ತೊಬ್ಬ ಯುವತಿ, ಚಿತ್ರಸಾಹಿತಿ ತಮ್ಮನ್ನು ಬಲವಂತವಾಗಿ ಅಪ್ಪಿಕೊಂಡು ಮುತ್ತು ಕೊಟ್ಟಿದಾಗಿ ಆಪಾದನೆ ಮಾಡಿದ್ದಾರೆ. ಮತ್ತೊಬ್ಬ ಸಂತ್ರಸ್ತೆ, ಗಾಯಕಿ ಚಿನ್ಮಯಿ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಯಾತನೆ ಹಂಚಿಕೊಂಡಿದ್ದಾರೆ.

ಈ ಮಧ್ಯೆ, ಬಿಹೈಡ್‌ವುಡ್ಸ್‌ ವೆಬ್‌ತಾಣದ ಸಿಬ್ಬಂದಿ ಮೂಲಕ ಸಂತ್ರಸ್ತೆಯೊಬ್ಬರು ತಾವು ನಟ ರಾಧಾ ರವಿ ಅವರಿಂದ ಅನುಭವಿಸಿದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ನಟ ತಮ್ಮನ್ನು ಅಪ್ಪಿಕೊಂಡು, ಮುತ್ತು ಕೊಡುತ್ತಿದ್ದರು. ಕೆಲಸ ಮುಗಿಸಿ ಒಂಟಿಯಾಗಿ ಭೇಟಿ ಮಾಡುವಂತೆ ಆದೇಶಿಸುತ್ತಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ.

*********
ಪತ್ರಕರ್ತರ ತಲೆದಂಡ: ಪತ್ರಿಕೋದ್ಯಮಕ್ಕೂ 'ಮೀ ಟೂ' ಕಪ್ಪು ಮಸಿ ಅಂಟಿದ್ದು, ಎರಡು ಪ್ರಮುಖ ರಾಷ್ಟ್ರೀಯ ಆಂಗ್ಲ ಪತ್ರಿಕೆಗಳ ಪತ್ರಕರ್ತರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಪತ್ರಕರ್ತರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ನಾನಾ ಪಾಟೇಕರ್‌ಗೆ ನೋಟಿಸ್‌
ಲೈಂಗಿಕ ಕಿರುಕುಳದ ಬಗ್ಗೆ ನಟಿ ತನುಶ್ರೀ ದತ್ತಾ ಅವರಿಂದ ದೂರಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ಹಿರಿಯ ನಟ ನಾನಾ ಪಾಟೇಕರ್‌ಗೆ ನೋಟಿಸ್‌ ಜಾರಿ ಮಾಡಿದೆ. ಜತೆಗೆ ನಿರ್ದೇಶಕ ರಾಕೇಶ್‌ ಸಾರಂಗ್‌, ಉಡುಪಿ ಮೂಲದ ನೃತ್ಯ ನಿರ್ದೇಶಕ ಗಣೇಶ್‌ ಆಚಾರ್ಯ ಅವರಿಗೂ ನೋಟಿಸ್‌ ನೀಡಲಾಗಿದೆ. 10 ದಿನದಲ್ಲಿ ಉತ್ತರಿಸುವಂತೆ ಗಡುವು ನೀಡಲಾಗಿದೆ. ಈ ಮಧ್ಯೆ, ಹೇಳಿಕೆ ದಾಖಲಿಸಲು ಕಚೇರಿಗೆ ಬರುವಂತೆ ತನುಶ್ರೀ ದತ್ತಾಗೆ ಸೂಚಿಸಲಾಗಿದೆ.

********

ಯಾವುದೇ ವ್ಯಕ್ತಿ ಮೇಲೆ 10 ವರ್ಷದ ನಂತರ ಲೈಂಗಿಕ ಕಿರುಕುಳ ಆರೋಪ ಹೊರಿಸುತ್ತಿರುವುದರ ಅರ್ಥವೇನು? ಇಷ್ಟು ವರ್ಷಗಳಾದ ನಂತರ ಈ ಆರೋಪದ ಸತ್ಯಾಸತ್ಯತೆ ಅರಿಯುವುದಾದರೂ ಹೇಗೆ?

- ಉದಿತ್‌ ರಾಜ್‌, ಬಿಜೆಪಿ ಸಂಸದ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ