ಆ್ಯಪ್ನಗರ

ಕೈ ಕಚ್ಚಿದ ಅಗಸ್ಟಾ ಡೀಲ್‌

ಮಿಸೆಸ್‌ ಗಾಂಧಿ, ಇಟಲಿ ಮಹಿಳೆ ಪುತ್ರನ ಉಲ್ಲೇಖ ಮಾಡಿದ ಮೈಕೆಲ್‌ ಕೋರ್ಟ್‌ಗೆ ಇ.ಡಿ. ವಿವರಣೆ * ಎಚ್‌ಎಎಲ್‌ಗೆ ಟಾಟಾ ಹೇಳಿದ್ದೇಕೆ?

Vijaya Karnataka 30 Dec 2018, 5:00 am
ಹೊಸದಿಲ್ಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣ ಕಾಂಗ್ರೆಸ್‌ ನಾಯಕರ ಕೊರಳಿಗೆ ಸುತ್ತಿಕೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿವೆ.
Vijaya Karnataka Web BNG-2912-2-2-AGUSTAWESTLAND2

ದುಬೈನಿಂದ ಗಡಿಪಾರಾಗಿ ಬಂದಿರುವ ಹಗರಣದ ಮಧ್ಯವರ್ತಿಗಳಲ್ಲಿ ಒಬ್ಬನಾಗಿರುವ ಕ್ರಿಶ್ಚಿಯನ್‌ ಮೈಕೆಲ್‌ ವಿಚಾರಣೆಯ ವೇಳೆ 'ಮಿಸೆಸ್‌ ಗಾಂಧಿ', 'ದೇಶದ ಮುಂದಿನ ಪ್ರಧಾನಿಯಾಗಲಿರುವ, ಇಟಲಿ ಮಹಿಳೆಯ ಪುತ್ರ'ನ ಬಗ್ಗೆ ಉಲ್ಲೇಖ ಮಾಡಿದ್ದಾನೆ ಎಂದು ಜಾರಿ ನಿರ್ದೇಶನಾಲಯವು ಶನಿವಾರ ದಿಲ್ಲಿಯ ಪಾಟಿಯಾಲ ಹೌಸ್‌ ಕೋರ್ಟ್‌ಗೆ ತಿಳಿಸಿದೆ.
''ಮೈಕೆಲ್‌ ಅವರು 'ಶ್ರೀಮತಿ ಗಾಂಧಿ' ಎಂಬ ಹೆಸರು ಉಲ್ಲೇಖಿಸಿದ್ದಾರೆ. ಆದರೆ, ಯಾವ ನೆಲೆಯಲ್ಲಿ ಎಂಬುದನ್ನು ಈಗಲೇ ಹೇಳಲಾಗದು,'' ಎಂದು ಇ.ಡಿ ಹೇಳಿದೆ. ಜತೆಗೆ ಮೈಕೆಲ್‌ ಇತರರ ಜತೆ ಸಂವಹನದ ವೇಳೆ ಉಲ್ಲೇಖಿಸುತ್ತಿರುವ 'ಅರ್‌' ಎಂಬ ಸಂಕೇತಾಕ್ಷರದ 'ದೊಡ್ಡ ವ್ಯಕ್ತಿ' ಯಾರು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ ಎಂದಿದೆ.
ಜಾರಿ ನಿರ್ದೇಶನಾಲಯದ ಬೇಡಿಕೆಯಂತೆ ಕೋರ್ಟ್‌ ಇನ್ನೂ ಏಳು ದಿನಗಳ ಕಾಲ ಮೈಕೆಲ್‌ನನ್ನು ಕಸ್ಟಡಿಗೆ ಒಪ್ಪಿಸಿತು.


ಮಿಸೆಸ್‌ ಗಾಂಧಿ ಕುರಿತ ಪ್ರಶ್ನೆ ನಿಭಾಯಿಸುವುದು ಹೇಗೆ?
ವಿಚಾರಣೆಯ ವೇಳೆ ಕಾನೂನು ಸಹಾಯ ಪಡೆಯುವ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಮೈಕೆಲ್‌ ವಕೀಲರಿಗೆ ಚೀಟಿ ನೀಡಿ ''ಮಿಸೆಸ್‌ ಗಾಂಧಿ ಅವರನ್ನು ಕುರಿತಾದ ಪ್ರಶ್ನೆಗಳನ್ನು ನಿಭಾಯಿಸುವುದು ಹೇಗೆ,'' ಎಂದು ಕೇಳುತ್ತಿದ್ದಾರೆ ಎಂದು ಇ.ಡಿ ಹೇಳಿದೆ.
ವೈದ್ಯಕೀಯ ಪರೀಕ್ಷೆಯ ವೇಳೆ ಮೈಕೆಲ್‌ ಅವರು ಹಸ್ತಲಾಘವ ಮಾಡುವ ನೆಪದಲ್ಲಿ ವಕೀಲರ ಕೈಗೆ ಚೀಟಿ ನೀಡಿದರು. ಅಧಿಕಾರಿಗಳು ಆಕ್ಷೇಪಿಸಿದಾಗ ವಕೀಲರು ಅದನ್ನು ಮೊಬೈಲ್‌ನ ಹಿಂದೆ ಅಡಗಿಸಿದರು. ಬಲವಂತವಾಗಿ ಬಿಡಿಸಿ ನೋಡಿದಾಗ ಅದರಲ್ಲಿ ಮಿಸೆಸ್‌ ಗಾಂಧಿ ಕುರಿತ ಪ್ರಶ್ನೆಗಳಿದ್ದವು ಎಂದು ತಿಳಿಸಿದೆ. ಕೆಲವೊಂದು ವಿಚಾರಗಳನ್ನು ಮುಚ್ಚಿ ಹಾಕುವ ಪ್ರಯತ್ನ ಇದೆಂದು ಇ.ಡಿ. ಆಪಾದಿಸಿದೆ.

ನಾಯಿ, ಮೂಳೆಗೆ ಬೇಟೆ
ಮೈಕೆಲ್‌ ಬರೆದ ಟಿಪ್ಪಣಿಯೊಂದರಲ್ಲಿರುವ ನಾಯಿ ಮತ್ತು ಮೂಳೆಯ ಉಲ್ಲೇಖ ಕುತೂಹಲಕಾರಿಯಾಗಿದೆ ಎಂದಿದೆ ಇ.ಡಿ. ವ್ಯವಹಾರದ ಬಗ್ಗೆ ಚರ್ಚಿಸಲು ಆಯೋಜಿಸಿದ ಭೋಜನ ಕೂಟವನ್ನು ಕುರಿತಾದ ಟಿಪ್ಪಣಿಯಲ್ಲಿ, 'ನಾಯಿ ಮೂಳೆಯನ್ನು ಇಷ್ಟಪಟ್ಟಿತು ಎಂದು ಆಶಿಸುತ್ತೇನೆ,' ಎಂದು ಬರೆಯಲಾಗಿದೆ. ಜತೆಗೆ ಕೂಟ ಆಯೋಜಿಸಿದ ಜಿಎಚ್‌(ಗುಯಿಡೊ ಹಷ್ಕೆ)ಗೆ ಧನ್ಯವಾದ ಹೇಳಲಾಗಿದೆ.

ಹತ್ತಿರ ಹೋಗದಂತೆ ವಕೀಲರಿಗೆ ಆದೇಶ
ಈ ನಡುವೆ, ವಕೀಲರು ಮೈಕೆಲ್‌ ಭೇಟಿ ವೇಳೆ ಅಂತರ ಕಾಯ್ದುಕೊಳ್ಳುವಂತೆ ಕೋರ್ಟ್‌ ಆದೇಶಿಸಿದೆ. ಬೆಳಗ್ಗೆ ಮತ್ತು ಸಂಜೆ 15 ನಿಮಿಷ ಮಾತ್ರ ಭೇಟಿಗೆ ಅವಕಾಶ ನೀಡಿದೆ.

ಎಚ್‌ಎಎಲ್‌ನಿಂದ ಟಾಟಾ ಕೈಗೆ?
ಹೆಲಿಕಾಪ್ಟರ್‌ ಖರೀದಿ ವ್ಯವಹಾರದಲ್ಲಿ ಎಚ್‌ಎಎಲ್‌ನ್ನು ಹಿಂದಕ್ಕೆ ಸರಿಸಿ ಟಾಟಾ ಕಂಪನಿಗೆ ನೀಡಲಾಗಿರುವ ಬಗ್ಗೆ ಮೈಕೆಲ್‌ ವಿವರಣೆ ನೀಡಿದ್ದಾರೆ ಎಂದು ಇ.ಡಿ ಕೋರ್ಟ್‌ಗೆ ತಿಳಿಸಿದೆ. ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಎಚ್‌ಎಎಲ್‌ನ್ನು ಕೈ ಬಿಟ್ಟಿರುವುದನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್‌ಗೆ ಈ ಹೇಳಿಕೆ ತಿರುಗುಬಾಣವಾಗಲಿದೆ.


ಇ.ಡಿ ಕೋರ್ಟ್‌ಗೆ ಕೊಟ್ಟ ಮಾಹಿತಿ ಕೇಳಿ ದೇಶ ಬೆಚ್ಚಿ ಬಿದ್ದಿದೆ. ಇಟಲಿ ಮಹಿಳೆ ಪುತ್ರ, ಆರ್‌, ಪಾರ್ಟಿ ಲೀಡರ್‌, ಬಿಗ್‌ ಮ್ಯಾನ್‌ ಎಂಬ ಪದಗಳಿಂದ ಎಲ್ಲವೂ ಸ್ಪಷ್ಟವಾಗಿದೆ.
-ಪ್ರಕಾಶ್‌ ಜಾವಡೇಕರ್‌, ಬಿಜೆಪಿ ನಾಯಕ

ದೇಶದ ಚೌಕೀದಾರರು ಒಂದು ಕುಟುಂಬದ ಹೆಸರು ಹೇಳುವಂತೆ ಮೈಕೆಲ್‌ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಿಜೆಪಿಯ ಚಿತ್ರಕಥೆಗಾರರು ತುಂಬ ಬ್ಯುಸಿಯಾಗಿದ್ದಾರೆ.
- ಆರ್‌ಪಿಎನ್‌ ಸಿಂಗ್‌, ಕಾಂಗ್ರೆಸ್‌ ನಾಯಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ