ಆ್ಯಪ್ನಗರ

ಸತತ 7ನೇ ಬಾರಿಯೂ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ

ಆಕ್ರಮಣಕಾರರು ತಕ್ಕ ಪಾಠ ಕಲಿಯಬೇಕಾಗುತ್ತದೆ ಎನ್ನುವುದನ್ನು ಜಗತ್ತಿನ ಇತಿಹಾಸವೇ ತೋರಿಸಿಕೊಟ್ಟಿದೆ. ಗಡಿಯಲ್ಲಿ ಯೋಧರ ಕಟ್ಟೆಚ್ಚರ ಮತ್ತು ಸನ್ನದ್ಧ ಸ್ಥಿತಿ ಯಾವುದೇ ದೇಶವನ್ನು ಸುರಕ್ಷಿತವಾಗಿ ಇರಿಸುವುದರ ಜತೆಗೆ ದೇಶದಲ್ಲಿ ಶಾಂತಿ ನೆಲೆಸಲು ಸಹಾಯ ಮಾಡಬಲ್ಲವು

Vijaya Karnataka Web 14 Nov 2020, 9:35 pm
ಜೈಸಲ್ಮೇರ್‌: ಆಕ್ರಮಣಕಾರರನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿರುವ ದೇಶಗಳು ಮಾತ್ರವೇ ಸುರಕ್ಷಿತವಾಗಿ ಉಳಿದಿವೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಮತ್ತು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ.
Vijaya Karnataka Web ಮೋದಿ
ಮೋದಿ


ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲೆಯಲ್ಲಿನ ಲೋಂಗಾವಾಲಾ ಸೇನಾ ನೆಲೆಯಲ್ಲಿ ಶನಿವಾರ ಯೋಧರ ಜತೆ ದೀಪಾವಳಿ ಆಚರಿಸಿದ ಪ್ರಧಾನಿ, ''ಆಕ್ರಮಣಕಾರರು ತಕ್ಕ ಪಾಠ ಕಲಿಯಬೇಕಾಗುತ್ತದೆ ಎನ್ನುವುದನ್ನು ಜಗತ್ತಿನ ಇತಿಹಾಸವೇ ತೋರಿಸಿಕೊಟ್ಟಿದೆ. ಗಡಿಯಲ್ಲಿ ಯೋಧರ ಕಟ್ಟೆಚ್ಚರ ಮತ್ತು ಸನ್ನದ್ಧ ಸ್ಥಿತಿ ಯಾವುದೇ ದೇಶವನ್ನು ಸುರಕ್ಷಿತವಾಗಿ ಇರಿಸುವುದರ ಜತೆಗೆ ದೇಶದಲ್ಲಿ ಶಾಂತಿ ನೆಲೆಸಲು ಸಹಾಯ ಮಾಡಬಲ್ಲವು'' ಎಂದು ಹೇಳಿದರು.

''ನಮ್ಮ ನೀತಿ ಸ್ಪಷ್ಟವಾಗಿದೆ. ಇತರರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ ಮತ್ತು ನಮ್ಮನ್ನು ಇತರರು ಅರ್ಥ ಮಾಡಿಕೊಳ್ಳಬೇಕೆಂದು ಬಯಸುತ್ತೇವೆ. ಅದನ್ನೂ ಮೀರಿ ಯಾರಾದರೂ ತಂಟೆಗೆ ಬಂದರೆ ದಿಟ್ಟ ಪ್ರತ್ಯುತ್ತರ ನೀಡುತ್ತೇವೆ. ಯಾವುದೇ ಸವಾಲು ಎದುರಿಸುವ ರಾಜಕೀಯ ಇಚ್ಛಾಶಕ್ತಿ ಮತ್ತು ಸಾಮರ್ಥ್ಯ ದೇಶಕ್ಕೆ ಇದೆ'' ಎಂದು ಮೋದಿ ಹೇಳಿದರು.

ಲೋಂಗಾವಾಲಾ ಸೇನಾ ನೆಲೆಯಲ್ಲಿ ಕಳೆದ ಕ್ಷಣಗಳ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ, ''ನಮ್ಮ ಯೋಧರ ಶೌರ್ಯದಿಂದಾಗಿ ದೇಶದ ಗಡಿ ಮತ್ತು ಸಾರ್ವಭೌಮತೆ ಸುರಕ್ಷಿತವಾಗಿದೆ ಎನ್ನುವುದನ್ನು ನಮ್ಮ ಮುಂದಿನ ತಲೆಮಾರು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ'' ಎಂದು ಹೇಳಿದ್ದಾರೆ.

ಪ್ರಧಾನಿಯಿಂದ ಎಲ್ಲೆಲ್ಲಿ ದೀಪಾವಳಿ ಆಚರಣೆ?

ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಪ್ರಧಾನಿಯಾದ ಬಳಿಕ ಈವರೆಗೆ ಅವರು ಎಲ್ಲೆಲ್ಲಿ ದೀಪಾವಳಿ ಆಚರಿಸಿದರು ಎಂಬ ವಿವರ ಇಲ್ಲಿದೆ.

2014: ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎನಿಸಿರುವ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ

2015: ಪಂಜಾಬ್‌ ಗಡಿಯಲ್ಲಿ ಬಿಎಸ್‌ಎಫ್‌ ಯೋಧರೊಂದಿಗೆ ದೀಪಾವಳಿ ಆಚರಣೆ

2016: ಹಿಮಾಚಲ ಪ್ರದೇಶದ ಇಂಡೋ-ಟಿಬೆಟ್‌ ಗಡಿ ಪೊಲೀಸ್‌ ಪಡೆಯೊಂದಿಗೆ

2017: ಉತ್ತರ ಕಾಶ್ಮೀರದ ಎಲ್‌ಒಸಿ ಬಳಿಯ ಗುರೇಜ್‌ ಸೆಕ್ಟರ್‌ನಲ್ಲಿ ದೀಪಾವಳಿ ಆಚರಣೆ

2018: ಉತ್ತರಾಖಂಡದ ಹರ್ಶಿಲ್‌ ಜಿಲ್ಲೆಯ ಭಾರತ-ಚೀನಾ ಗಡಿಯಲ್ಲಿ ಐಟಿಬಿಪಿ ಪಡೆ ಜತೆ

2019: ಜಮ್ಮು-ಕಾಶ್ಮೀರದ ರಜೌರಿ ಸೇನಾ ನೆಲೆ, ಪಠಾಣ್‌ಕೋಟ್‌ ವಾಯು ನೆಲೆಯಲ್ಲಿ ಯೋಧರ ಜತೆ ಹಬ್ಬ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ