ಆ್ಯಪ್ನಗರ

ಮೋದಿ ಸರಕಾರದಿಂದ ಆರ್ಥಿಕತೆ ಹಾಳು: ಕಾಂಗ್ರೆಸ್‌ ದೂರು

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರಕಾರ 'ದೊಡ್ಡ ದೊಡ್ಡ ಭರವಸೆಗಳನ್ನು' ಈಡೇರಿಸುವಲ್ಲಿ ವಿಫಲವಾಗಿದೆ; ಭಾರತೀಯ ಅರ್ಥವ್ಯವಸ್ಥೆಯನ್ನೇ ಹಾಳುಗೆಡವಿದೆ ಎಂದು ಸಿಂಗ್‌ ಹೇಳಿದ್ದಾರೆ.

Vijaya Karnataka Web 19 Mar 2018, 7:53 pm
ಹೊಸದಿಲ್ಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರಕಾರ 'ದೊಡ್ಡ ದೊಡ್ಡ ಭರವಸೆಗಳನ್ನು' ಈಡೇರಿಸುವಲ್ಲಿ ವಿಫಲವಾಗಿದೆ; ಭಾರತೀಯ ಅರ್ಥವ್ಯವಸ್ಥೆಯನ್ನೇ ಹಾಳುಗೆಡವಿದೆ ಎಂದು ಸಿಂಗ್‌ ಹೇಳಿದ್ದಾರೆ.
Vijaya Karnataka Web ಮೋದಿ ಸರಕಾರದಿಂದ ಆರ್ಥಿಕತೆ ಹಾಳು: ಕಾಂಗ್ರೆಸ್‌ ದೂರು


'ಬಿಜೆಪಿ ಸರಕಾರ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿ ಮೋದಿ ಅವರೇ ಹೇಳಿದ್ದರು. ಹಾಗಾಗಬೇಕಿದ್ದರೆ ಶೇ 12ರ ವಾರ್ಷಿಕ ಬೆಳವಣಿಗೆ ದರವನ್ನು ಸಾಧಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಂಭವ' ಎಂದು ಕಾಂಗ್ರೆಸ್‌ನ 84ನೇ ಮಹಾಧಿವೇಶನ ಉದ್ದೇಶಿಸಿ ಮಾತನಾಡುತ್ತ ಸಿಂಗ್‌ ನುಡಿದರು.

ಪ್ರಧಾನಿ ಮೋದಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ದೂಷಿಸಿದ ಮನಮೋಹನ್ ಸಿಂಗ್‌, ನಾಯಕರು ಹೇಳಿಕೊಳ್ಳುತ್ತಿರುವುದಕ್ಕಿಂತ ಎಷ್ಟೋ ಪಟ್ಟು ಕಡಿಮೆ ಕೆಲಸಗಳಾಗಿವೆ ಎಂದು ಟೀಕಿಸಿದರು.

'ತಾವು 2 ಕೋಟಿ ಉದ್ಯೋಗ ನೀಡುವುದಾಗಿ ಮೋದಿ ಹೇಳಿದ್ದರು. ಆದರೆ 2 ಲಕ್ಷ ಉದ್ಯೋಗವೂ ಸೃಷ್ಟಿಯಾಗಿಲ್ಲ. ಅವರು ಹೇಳುತ್ತಿರುವುದೆಲ್ಲ ಸಾಧಿಸಲು ಆಗದು' ಎಂದು ಸಿಂಗ್‌ ಆರೋಪಿಸಿದರು.

ನೋಟು ನಿಷೇಧ ಅವಿವೇಕದ ಕ್ರಮವಾಗಿದ್ದು, ಜಿಎಸ್‌ಟಿಯನ್ನು ಅವಸರದಲ್ಲಿ ಜಾರಿಗೊಳಿಸಲಾಗಿದೆ. ಇವೆರಡರಿಂದಾಗಿ ದೇಶದ ಆರ್ಥಿಕತೆ ಸಂಪೂರ್ಣ ಹದಗೆಟ್ಟಿದೆ ಎಂದು ಕಾಂಗ್ರೆಸ್‌ ನಾಯಕ ಬಣ್ಣಿಸಿದರು.

ಇದೇ ಧಾಟಿಯಲ್ಲಿ ಮಾತನಾಡಿದ ಇನ್ನೊಬ್ಬ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ, ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಆರ್ಥಿಕತೆ ಸುಭದ್ರವಾಗಿತ್ತು; ಈಗ ಜಾಗತಿಕ ಮಟ್ಟದಲ್ಲೇ ಅತ್ಯಂತ ಹಿಂದುಳಿದಿದೆ ಎಂದು ಪ್ರತಿಪಾದಿಸಿದರು.

ನೋಟು ನಿಷೇಧ 'ಅತ್ಯಂತ ದೊಡ್ಡ ಸುಳ್ಳು' ಎಂದ ಚಿದಂಬರಂ, ಅದಕ್ಕೆ ಮುನ್ನ ಆರ್‌ಬಿಐ ಸಲಹೆ ಕೇಳಬೇಕಿತ್ತು ಎಂದರು.

'ಆರ್‌ಬಿಐ ಇನ್ನೂ ನೋಟುಗಳನ್ನು ಎಣಿಸುತ್ತಲೇ ಇದೆ. ಆರ್‌ಬಿಐ ಗವರ್ನರ್ ತಿರುಪತಿಗೆ ಹೋಗಿ ಹುಂಡಿ ಎಣಿಸುವುದನ್ನು ಕಲಿತು ಬರುವುದು ಒಳ್ಳೆಯದು. ಆರ್‌ಬಿಐಗಿಂತ ವೇಗವಾಗಿ ಅವರೇ ಹಣ ಎಣಿಸುತ್ತಾರೆ' ಎಂದು ಚಿದಂಬರಂ ಟೀಕಿಸಿದರು.

ಕಾಶ್ಮೀರ ವಿವಾದವನ್ನು ಕೂಡ ಮೋದಿ ಸರಕಾರ ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎಂದು ಚಿದಂಬರಂ ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ