ಆ್ಯಪ್ನಗರ

ಚೌಕಿದಾರನ ಮುಗಿಸಲು ಚೋರರ ಸಂಚು: ಪ್ರಧಾನಿ ಮೋದಿ

ಬಿಜೆಪಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2004 ರಿಂದ 2014ರವರೆಗೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಕೂಟ ಅಧಿಕಾರದಲ್ಲಿದ್ದಾಗ ದೇಶದ ರಕ್ಷಣಾ ಪಡೆಗಳನ್ನು ದುರ್ಬಲಗೊಳಿಸುವ ಬಹುದೊಡ್ಡ ಪಿತೂರಿ ನಡೆದಿತ್ತು ಎಂದು ಗಂಭೀರ ಆರೋಪ ಮಾಡಿದರು.

Vijaya Karnataka Web 6 Jan 2019, 7:48 am
ಬರಿಪಾಡ (ಒಡಿಶಾ): ರಫೇಲ್‌ ಡೀಲ್‌ ವಿಷಯದಲ್ಲಿ ತಗಾದೆ ಮುಂದುವರಿಸಿರುವ ಕಾಂಗ್ರೆಸ್‌ಗೆ ಅವರದ್ದೇ ದಾಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬಿರುಸಿನ ತಿರುಗೇಟು ನೀಡಿದ್ದಾರೆ. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌, ದೇಶದ ಜನರ ಪರ ಕೆಲಸ ಮಾಡುವ ಬದಲು ಮಧ್ಯವರ್ತಿಗಳ ಉದ್ಧಾರಕ್ಕೆ ಶ್ರಮಿಸಿತ್ತು ಎಂದು ಛಡಿಸಿದ್ದಾರೆ.
Vijaya Karnataka Web modi


ಇಲ್ಲಿ ಬಿಜೆಪಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2004 ರಿಂದ 2014ರವರೆಗೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಕೂಟ ಅಧಿಕಾರದಲ್ಲಿದ್ದಾಗ ದೇಶದ ರಕ್ಷಣಾ ಪಡೆಗಳನ್ನು ದುರ್ಬಲಗೊಳಿಸುವ ಬಹುದೊಡ್ಡ ಪಿತೂರಿ ನಡೆದಿತ್ತು ಎಂದು ಗಂಭೀರ ಆರೋಪ ಮಾಡಿದರು.

ಅಂದು ಅವರು ಮಾಡಿದ ಪಿತೂರಿಗಳು ಈಗ ಒಂದೊಂದಾಗಿ ಹೊರ ಬರುತ್ತಿದ್ದು, ಕಾಂಗ್ರೆಸ್ಸಿನ ಬಣ್ಣ ಬಯಲಾಗುತ್ತಿದೆ. ಇದರಿಂದ ಆತಂಕಕ್ಕೆ ಸಿಲುಕಿರುವ ಅವರು ತಮಗೆ ಕಂಠಕವಾಗಿರುವ ಚೌಕಿದಾರ್‌ನನ್ನು (ಕಾವಲುಗಾರ) ಶತಾಯಗತಾಯ ಮುಗಿಸಬೇಕು ಎಂದು ಹೊರಟಿದ್ದಾರೆ. ಸಮಾಜ ಅಥವಾ ಕಾರ್ಖಾನೆ ಎಲ್ಲಿಯಾದರೂ ಸರಿ ಕಳ್ಳರಿಗೆ ಚೌಕಿದಾರನ ಭಯ ಕಾಡುತ್ತದೆ. ತಮ್ಮ ದುಷ್ಕೃತ್ಯ ಸಾಧನೆಗೆ ಆತನನ್ನು ತೆಗೆಯಲು ಯತ್ನಿಸುತ್ತಾರೆ. ಚೌಕಿದಾರ ಇರುವವರೆಗೆ ಅವರ ಆಟ ನಡೆಯುವುದಿಲ್ಲ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಅಗಸ್ಟಾವೆಸ್ಟ್‌ಲ್ಯಾಂಡ್‌ ಹಗರಣದಲ್ಲಿ ಕಾಂಗ್ರೆಸ್‌ ನಾಯಕರ ಗೋಲ್‌ಮಾಲ್‌ ಬಯಲಾಗುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಅಧಿಕಾರದಲ್ಲಿದ್ದಾಗ ಇವರು ಜನರನ್ನು ಕಡೆಗಣಿಸಿ ಮಧ್ಯವರ್ತಿಗಳ ಹಿತರಕ್ಷಣೆಗಾಗಿ ಕೆಲಸ ಮಾಡಿದರು. ಈಗ ಇವರು ನಮಗೆ ಪ್ರಾಮಾಣಿಕತೆಯ ಪಾಠ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಜರಿದರು.

ಸಾಲಮನ್ನಾ ಹೆಸರಲ್ಲಿ ದ್ರೋಹ
ದಲ್ತೋನ್‌ಗಂಜ್‌(ಛತ್ತೀಸ್‌ಗಢ): ದೇಶದ ರೈತ ಸಮುದಾಯವನ್ನು ಕೇವಲ ಮತಬ್ಯಾಂಕ್‌ ಎಂದು ಪರಿಗಣಿಸಿರುವ ಕಾಂಗ್ರೆಸ್‌, ಸಾಲ ಮನ್ನಾ ಹೆಸರಲ್ಲಿ ಅವರನ್ನು ದಾರಿ ತಪ್ಪಿಸುವ ದ್ರೋಹದ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ಅನ್ನದಾತನ ಅಭಿವೃದ್ಧಿ ವಿಷಯದಲ್ಲಿ ತಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಸಾಲ ಮನ್ನಾದಂತಹ ಡೋಂಗಿ ಮಾತುಗಳನ್ನು ಬಳಸಿ ದ್ರೋಹದ ಕೆಲಸ ಮಾಡುವುದಿಲ್ಲ ಎಂದರು.

ದೀರ್ಘಾವಧಿಯ ಅಭಿವೃದ್ಧಿ ಪರಿಕಲ್ಪನೆ ಇರದ ಕಾಂಗ್ರೆಸ್‌ ಹಿಂದೆ ಅಧಿಕಾರ ದುರ್ಬಳಕೆ ಮೂಲಕ ರೈತರನ್ನು ಸಾಲದ ಕೂಪಕ್ಕೆ ತಳ್ಳಿತ್ತು. ಅದೇ ಪಕ್ಷ ಇಂದು ಸಾಲ ಮನ್ನಾದ ಆಮಿಷ ಒಡ್ಡುತ್ತಿದೆ ಎಂದು ಜರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ