ಆ್ಯಪ್ನಗರ

ಜನಸಂಖ್ಯೆಗೆ ಬೇಕು ಬ್ರೇಕ್, ಸಣ್ಣ ಕುಟುಂಬ ಹೊಂದುವುದು ದೇಶಭಕ್ತಿ: ಮೋದಿ

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕಠಿಣ ನಿರ್ಬಂಧದ ಸೂಚನೆ ನೀಡಿದ ಮೋದಿ.

Vijaya Karnataka 16 Aug 2019, 7:11 am
ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಮುಂದಿನ ಜನಾಂಗವನ್ನು ಸಂಕಷ್ಟದಿಂದ ರಕ್ಷಿಸಲು ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ಹಾಕಲೇಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸ್ಪಷ್ಟವಾಗಿ ಹೇಳಿದ್ದಾರೆ.
Vijaya Karnataka Web 2-2-15082-PTI8_15_2019_000031B


73ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ವೇಳೆ ಗುರುವಾರ ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, 21ನೇ ಶತಮಾನದ ಸವಾಲುಗಳನ್ನು ನಿಭಾಯಿಸುವ ಮತ್ತು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ನವಭಾರತವನ್ನು ನಿರ್ಮಿಸುವ ದೃಢ ನಿರ್ಧಾರವನ್ನು ಪ್ರಕಟಿಸಿದರು.

ಜನಸಂಖ್ಯಾ ಸ್ಫೋಟವನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು. ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಮತ್ತು ಮತಾಂತರ ನಿಷೇಧ ಕಾಯಿದೆಯನ್ನು ಅನುಷ್ಠಾನಕ್ಕೆ ತರುವ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ನಡುವೆಯೇ ಪ್ರಧಾನಿ ಅವರ ಈ ಹೇಳಿಕೆ ಗಮನ ಸೆಳೆದಿದ್ದು, ಜನಸಂಖ್ಯಾ ಹೆಚ್ಚಳ ತಡೆಗೆ ಕಠಿಣ ಕ್ರಮ ಕೈಗೊಳ್ಳುವ ಮುನ್ಸೂಚನೆ ನೀಡಿದೆ.

ದೇಶದಲ್ಲಿ ‘ಮಕ್ಕಳೆರಡೇ ಇರಲಿ’ ಎಂಬ ಘೋಷಣೆ ಇದೆಯಾದರೂ ಅದರ ಅನುಷ್ಠಾನಕ್ಕೆ ಸ್ಪಷ್ಟ ಮಾರ್ಗಸೂಚಿಗಳಿಲ್ಲಘಿ. ಜತೆಗೆ ಕೆಲವು ಕುಟುಂಬಗಳು ದೊಡ್ಡ ಸಂಖ್ಯೆಯಲ್ಲಿ ಮಕ್ಕಳನ್ನು ಹೊಂದಿವೆ. ಇದನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹಲವಾರು ಬಿಜೆಪಿ ನಾಯಕರು ಈಗಾಗಲೇ ಈ ವಿಷಯದ ಬಗ್ಗೆ ಮಾತನಾಡಿದ್ದರೂ ಮೋದಿ ಅವರೇ ಪ್ರಸ್ತಾಪಿಸಿರುವುದು ದೊಡ್ಡ ನಡೆಯಾಗಿದೆ.

ನಿಯಂತ್ರಣದ ಅನಿವಾರ್ಯತೆ ಏನು?
ಜನಸಂಖ್ಯೆ ಹೆಚ್ಚಳದಿಂದ ನಮಗೆ ಮಾತ್ರವಲ್ಲ, ಮುಂದಿನ ಜನಾಂಗಕ್ಕೂ ತೊಂದರೆಯಾಗಲಿದೆ
ಕಡಿಮೆ ಮಕ್ಕಳಿದ್ದರೆ ಕುಟುಂಬಕ್ಕೂ ಒಳ್ಳೆಯದು, ದೇಶದ ಕಲ್ಯಾಣಕ್ಕೂ ಕೊಡುಗೆಯಾಗುತ್ತದೆ
ಸಣ್ಣ ಕುಟುಂಬವಿದ್ದರೆ ಮಕ್ಕಳ ಬೇಕು ಬೇಡಗಳನ್ನು ನೋಡಿಕೊಳ್ಳುವುದಕ್ಕೂ ಸುಲಭವಾಗುತ್ತದೆ.

ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವನ್ನು ತಲೆಯಲ್ಲಿ ಇಟ್ಟುಕೊಂಡರೆ ಮುಂದಿನ ಜನಾಂಗಕ್ಕೆ ಇನ್ನಷ್ಟು ತೊಂದರೆಯಾಗುತ್ತದೆ. ಹಾಗಾಗಿ ಗಟ್ಟಿ ನಿರ್ಧಾರದ ಅಗತ್ಯವಿದೆ.
- ನರೇಂದ್ರ ಮೋದಿ, ಪ್ರಧಾನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ