ಆ್ಯಪ್ನಗರ

ಪುಲ್ವಾಮಾ ದಾಳಿ ನಡೆಯುವ ಮುನ್ನವೇ ಪೂರ್ಣವಾಗಿದ್ದ ಡಿಸ್ಕವರಿ ಚಿತ್ರೀಕರಣ

2019ರ ಫೆ.14ರಂದು ಚಿತ್ರೀಕರಣ ನಡೆದಿರುವುದನ್ನು ಸರಕಾರವಾಗಲೀ, ಪ್ರಧಾನಿಯಾಗಲೀ ನಿರಾಕರಿಸಿಲ್ಲ. ಆದರೆ ಪುಲ್ವಾಮಾ ದಾಳಿ ಸಮಯದಲ್ಲಿ ಶೂಟಿಂಗ್‌ ನಡೆಯುತ್ತಿತ್ತು ಎನ್ನುವುದಾಗಲೀ, ಚಿತ್ರೀಕರಣದ ನೆಪದಲ್ಲಿ ಪ್ರಧಾನಿ ದಾಳಿ ವಿಷಯ ಕಡೆಗಣಿಸಿದರು ಎನ್ನುವುದಾಗಲೀ ನಿಜವಲ್ಲ ಎಂದು ಹೇಳಿದ್ದಾರೆ.

PTI 31 Jul 2019, 5:00 am
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿರುವ ಡಿಸ್ಕವರಿ ಚಾನೆಲ್‌ನ 'ಮ್ಯಾನ್‌ ವರ್ಸಸ್‌ ವೈಲ್ಡ್‌' ಕಾರ್ಯಕ್ರಮದ ಚಿತ್ರೀಕರಣ ಫೆ.14ರ ಮಧ್ಯಾಹ್ನ 3 ಗಂಟೆಯ ಒಳಗೇ ಪೂರ್ಣಗೊಂಡಿದೆ ಎಂದು ಕೇಂದ್ರ ಸರಕಾರದ ಮೂಲಗಳು ಸ್ಪಷ್ಟಪಡಿಸಿವೆ.
Vijaya Karnataka Web discovery


''ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ಯೋಧರ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಪ್ರಧಾನಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಚಿತ್ರೀಕರಣ ನಡೆದ ಅವಧಿಯನ್ನು ಬಹಿರಂಗಪಡಿಸಬೇಕು,'' ಎಂದು ಕಾಂಗ್ರೆಸ್‌ ಆಗ್ರಹಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಉನ್ನತ ಅಧಿಕಾರಿಯೊಬ್ಬರು, ''ಚಿತ್ರೀಕರಣ ನಡೆದದ್ದು ಕೇವಲ 45 ನಿಮಿಷಗಳ ಕಾಲ. ಅದೂ ಮಧ್ಯಾಹ್ನ 3 ಗಂಟೆಯೊಳಗೆ ಪೂರ್ಣಗೊಂಡಿದೆ. ಪುಲ್ವಾಮಾ ದಾಳಿ ನಡೆದಿರುವುದು ಮಧ್ಯಾಹ್ನ 3.30ರ ಸುಮಾರಿಗೆ,'' ಎಂದು ತಿಳಿಸಿದ್ದಾರೆ.

''2019ರ ಫೆ.14ರಂದು ಚಿತ್ರೀಕರಣ ನಡೆದಿರುವುದನ್ನು ಸರಕಾರವಾಗಲೀ, ಪ್ರಧಾನಿಯಾಗಲೀ ನಿರಾಕರಿಸಿಲ್ಲ. ಆದರೆ ಪುಲ್ವಾಮಾ ದಾಳಿ ಸಮಯದಲ್ಲಿ ಶೂಟಿಂಗ್‌ ನಡೆಯುತ್ತಿತ್ತು ಎನ್ನುವುದಾಗಲೀ, ಚಿತ್ರೀಕರಣದ ನೆಪದಲ್ಲಿ ಪ್ರಧಾನಿ ದಾಳಿ ವಿಷಯ ಕಡೆಗಣಿಸಿದರು ಎನ್ನುವುದಾಗಲೀ ನಿಜವಲ್ಲ,'' ಎಂದು ಹೇಳಿದ್ದಾರೆ.

''ಅಂದು ಜಿಮ್‌ ಕಾರ್ಬೆಟ್‌ನಲ್ಲಿ ಅನೇಕ ಸೌಲಭ್ಯಗಳ ಉದ್ಘಾಟನೆ, ರುದ್ರಪುರದಲ್ಲಿ ರಾರ‍ಯಲಿ ಸೇರಿದಂತೆ ಪ್ರಧಾನಿಯವರ ಹಲವು ಪೂರ್ವನಿರ್ಧರಿತ ಕಾರ್ಯಕ್ರಮಗಳಿದ್ದವು. ಜಿಮ್‌ ಕಾರ್ಬೆಟ್‌ನಿಂದ ರುದ್ರಪುರ ರಾರ‍ಯಲಿಗೆ ತೆರಳುವಾಗ ಮಧ್ಯಾಹ್ನ 4 ಗಂಟೆ ಹೊತ್ತಿಗೆ ಪ್ರಧಾನಿಯವರಿಗೆ ದಾಳಿ ವಿಷಯ ತಿಳಿಸಲಾಯಿತು. ತಮಗೆ ಮಾಹಿತಿ ನೀಡಲು ವಿಳಂಬ ಮಾಡಿದ್ದಕ್ಕಾಗಿ ಅಧಿಕಾರಿಗಳ ವಿರುದ್ಧ ಅವರು ಸಿಟ್ಟಾದರು. 4ರಿಂದ 4.45ರವರೆಗೆ ದೂರವಾಣಿ ಮೂಲಕವೇ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿದ ಪ್ರಧಾನಿ ಅಗತ್ಯ ಸೂಚನೆ ನೀಡಿದರು. ರುದ್ರಪುರ ರಾರ‍ಯಲಿಗೆ ತೆರಳದೇ ಫೋನ್‌ನಲ್ಲಿಯೇ 5-7 ನಿಮಿಷ ರಾರ‍ಯಲಿ ಉದ್ದೇಶಿಸಿ ಮಾತನಾಡಿದರು. ತಕ್ಷಣವೇ ರಾಯ್‌ಬರೇಲಿಗೆ ತೆರಳಿ ಅಲ್ಲಿಂದ ವಿಮಾನದಲ್ಲಿ ದಿಲ್ಲಿಗೆ ವಾಪಸ್ಸಾದರು,'' ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಖ್ಯಾತ ನಿರೂಪಕ ಬೇರ್‌ ಗ್ರಿಲ್ಸ್‌ ನಡೆಸಿಕೊಟ್ಟಿರುವ 'ಮ್ಯಾನ್‌ ವರ್ಸಸ್‌ ವೈಲ್ಡ್‌' ಕಾರ್ಯಕ್ರಮವು ಆ.12ರಂದು ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ''ಚಿತ್ರೀಕರಣದ ವೇಳೆ ಪ್ರಧಾನಿಯವರ ಭದ್ರತಾ ಸಿಬ್ಬಂದಿ 'ಸುರಕ್ಷಿತ ಅಂತರ'ದಲ್ಲಿಯೇ ಇದ್ದರು. ಚಿತ್ರೀಕರಣ ಸಂದರ್ಭದಲ್ಲಿ ಪ್ರಧಾನಿ ಭದ್ರತೆಯನ್ನು ಕಡೆಗಣಿಸಿಲ್ಲ,'' ಎಂದು ಚಾನೆಲ್‌ ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ