ಆ್ಯಪ್ನಗರ

ಉತ್ತರ ಭಾರತದಲ್ಲಿ ಮುಂಗಾರು ಅಬ್ಬರ: 20 ಸಾವು

ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಕಳೆದ 18 ಗಂಟೆಯಿಂದ ಒಂದೇ ಸಮನೆ ಮಳೆ ಸುರಿಯುತ್ತಿರುವುದರಿಂದ ನಗರದಲ್ಲಿ ಪ್ರವಾಹದಂತಹ ಪರಿಸ್ಥಿತಿ ತಲೆದೋರಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಮಂಗಳವಾರ ರಾತ್ರಿಯಿಡೀ ಪರದಾಡಿದರು.

PTI 27 Jun 2019, 5:00 am
ಲಖನೌ: ಬಿಸಿಲಿನ ಬೇಗೆಯಿಂದ ಬಳಲಿದ್ದ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಶುರುವಾಗಿದ್ದು, ತಾಪಮಾನದಲ್ಲಿ ಇಳಿಕೆಯಾಗಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಲ್ಲಿ ಮಳೆ ಸಂಬಂಧಿ ಅವಘಡಗಳು ಜನರನ್ನು ಹೈರಾಣಾಗಿಸಿವೆ. ಉತ್ತರ ಪ್ರದೇಶವೊಂದರಲ್ಲಿಯೇ ಮಳೆ ಸಂಬಂಧಿ ಅವಘಡಗಳಿಂದ 20 ಜನ ಮೃತಪಟ್ಟಿದ್ದು, 19 ಮಂದಿ ಗಾಯಗೊಂಡಿರುವುದು ವರದಿಯಾಗಿದೆ.
Vijaya Karnataka Web rain


ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಕಳೆದ 18 ಗಂಟೆಯಿಂದ ಒಂದೇ ಸಮನೆ ಮಳೆ ಸುರಿಯುತ್ತಿರುವುದರಿಂದ ನಗರದಲ್ಲಿ ಪ್ರವಾಹದಂತಹ ಪರಿಸ್ಥಿತಿ ತಲೆದೋರಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಮಂಗಳವಾರ ರಾತ್ರಿಯಿಡೀ ಪರದಾಡಿದರು. ರಸ್ತೆಗಳಲ್ಲಿ ಮೊಣಕಾಲು ಉದ್ದದವರೆಗೆ ನೀರು ನಿಂತಿದ್ದರಿಂದ ಟ್ರಾಫಿಕ್‌ ಜಾಮ್‌ ವಿಪರೀತವಾಗಿತ್ತು. ಆಂಬ್ಯುಲೆನ್ಸ್‌ವೊಂದು ನೀರಿನಲ್ಲಿ ಮುಳುಗಿದೆ. ಜಿಲ್ಲೆಯನ್ನು ಹಾದುಹೋಗುವ ಬಹುತೇಕ ರೈಲು ಮಾರ್ಗಗಳು ನೀರಿನಲ್ಲಿ ಮುಳುಗಿದ್ದು, ಹಲವು ರೈಲುಗಳ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ. ಇತ್ತ ಖುಷಿನಗರದಲ್ಲಿ ಶಾಲಾ ವಾಹನ ನೀರು ತುಂಬಿದ್ದ ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಸ್ಥಳೀಯರು ಹರಸಾಹಸ ನಡೆಸಿ ಅದರಲ್ಲಿದ್ದ ಮಕ್ಕಳನ್ನು ರಕ್ಷಿಸಿದರು. ನಿರ್ಲಕ್ಷ್ಯ ತೋರಿದ್ದಕ್ಕೆ ವಾಹನ ಚಾಲಕನನ್ನು ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮಧ್ಯ ಪ್ರದೇಶ ವರದಿ:
ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ನಗರದ ರಸ್ತೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ತೀವ್ರ ಸಂಕಷ್ಟ ಎದುರಿಸಿದರು. ಇಲ್ಲೂ ಟ್ರಾಫಿಕ್‌ ಸಮಸ್ಯೆ ವಿಪರೀತವಾಗಿತ್ತು. ಜುಲೈ 3 ರೊಳಗೆ ಮುಂಗಾರು ಇಡೀ ಮಧ್ಯಪ್ರದೇಶವನ್ನು ಆವರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ರತ್ಲಾಮ್‌, ಧಾರ್‌, ಭಾರ್ವಾನಿ, ಉಜ್ಜಯಿನಿ, ಅಗರ್‌ಮಾಲ್ವಾ ಮತ್ತು ಭೋಪಾಲ್‌ನಲ್ಲಿ ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.

ಪ್ರವಾಸಿಗರಿಗೆ ಖುಷಿ:
ಹಿಮಾಚಲ ಪ್ರದೇಶದಲ್ಲಿ ಮುಂಗಾರು ಸಿಂಚನ ಶಿಮ್ಲಾ, ಡಾಲ್‌ಹೌಸಿ, ಮನಾಲಿ, ಮಾಂಡಿ ಹಾಗೂ ಕಿನ್ನೌರ್‌ನಲ್ಲಿ ಉಷ್ಣಾಂಶ ಇಳಿಕೆಯಾಗಿದ್ದು ತಂಪಾದ ವಾತಾವರಣ ಪ್ರವಾಸಿಗರಿಗೆ ಹಿತಾನುಭವ ನೀಡಿದೆ. ಕಿನ್ನೌರ್‌ನಲ್ಲಿ ಭೂಕುಸಿತ ಉಂಟಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ