ಆ್ಯಪ್ನಗರ

ಹೆಣ್ಣು ಮಗುವಿನಾಸೆಗೆ ಗಂಡು ಶಿಶು ಕೊಂದ ತಾಯಿ, ಗಂಡು ಮಗುವಿನಾಸೆಗೆ ಹೆಣ್ಣು ಶಿಶು ಕೊಂದ ತಂದೆ!

ಸಾಮಾನ್ಯವಾಗಿ ಗಂಡು ಮಗು ಬೇಕೆಂದು ಬಯಸುವ ಹೆತ್ತವರು ಹೆಣ್ಣು ಮಗುವಿನ ಕತ್ತು ಹಿಸುಕಲೂ ಹೇಸದ ಘಟನೆಗಳು ನಡೆಯುತ್ತಿರುತ್ತವೆ.

Vijaya Karnataka 26 Jun 2018, 10:49 am
ಔರಂಗಾಬಾದ್‌: ಸಾಮಾನ್ಯವಾಗಿ ಗಂಡು ಮಗು ಬೇಕೆಂದು ಬಯಸುವ ಹೆತ್ತವರು ಹೆಣ್ಣು ಮಗುವಿನ ಕತ್ತು ಹಿಸುಕಲೂ ಹೇಸದ ಘಟನೆಗಳು ನಡೆಯುತ್ತಿರುತ್ತವೆ. ಆದರೆ, ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆ ಪೈಥಾನ್‌ಖೇಡ ಗ್ರಾಮದ ಮಹಿಳೆಯೊಬ್ಬಳು ಹೆಣ್ಣು ಮಗುವಿನ ಮೋಹಕ್ಕೆ ಬಿದ್ದು 10 ತಿಂಗಳ ಗಂಡು ಮಗುವನ್ನು ಮನೆಯ ಹೊರಗಿನ ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ.
Vijaya Karnataka Web baby in tub


ಪ್ರೇಮ್‌ ಪರಮೇಶ್ವರ್‌ ಎರಾಂಡೆ ಎಂಬ ಹೆಸರಿನ ಈ ಮಗು ಶನಿವಾರ ಬೆಳಗ್ಗಿನಿಂದ ಕಣ್ಮರೆಯಾಗಿತ್ತು. ತಾಯಿ ವೇದಿಕಾ ಎರಾಂಡೆ ಈ ಬಗ್ಗೆ ಬಿಡ್ಕಿನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗುವನ್ನು ಯಾರೋ ಅಪಹರಿಸಿರಬಹುದು ಎಂದು ದೂರಿನಲ್ಲಿ ಸಂಶಯಿಸಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರಿಗೆ ಸಂಜೆಯ ಹೊತ್ತಿಗೆ ಮಗುವಿನ ಶವ ಮನೆಯ ಹೊರಗಿನ ನೀರಿನ ಡ್ರಮ್‌ನಲ್ಲಿ ಕಂಡಿತು. ವೇದಿಕಾ ಮತ್ತು ಇನ್ನೊಬ್ಬರನ್ನು ವಿಚಾರಣೆ ನಡೆಸಿದಾಗ ಅವರು ನೀಡಿದ ಉತ್ತರಗಳಲ್ಲಿ ಗೊಂದಲಗಳು ಕಂಡುಬಂದವು. ಕೊನೆಗೆ ವೇದಿಕಾ ತಪ್ಪೊಪ್ಪಿಕೊಂಡಿದ್ದಾಳೆ. ವೇದಿಕಾಗೆ ಎರಡು ಮಕ್ಕಳಿದ್ದು, ಮೊದಲನೆಯದೂ ಗಂಡು. ಎರಡನೆಯದು ಹೆಣ್ಣಾಗಬೇಕೆಂಬ ಆಸೆ ಹೊತ್ತಿದ್ದ ಆಕೆಗೆ ನಿರಾಸೆಯಾಗಿತ್ತು. ಹುಟ್ಟಿದ ಗಂಡು ಮಗುವನ್ನು ಏನಾದರೂ ಮಾಡಲೇಬೇಕೆಂಬ ಹಠದಲ್ಲಿದ್ದ ಆಕೆಗೆ ಮಗುವಿಗೆ 10 ತಿಂಗಳಾದಾಗ ಸಾಯಿಸಿದ್ದಾಳೆ. ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

4 ದಿನದ ಹೆಣ್ಣು ಹಸುಗೂಸನ್ನು ಇರಿದು ಸಾಯಿಸಿದ ತಂದೆ

ಗಾಂಧಿನಗರ: ತಂದೆಯೇ ನಾಲ್ಕು ದಿನದ ಹಸುಗೂಸನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಗುಜರಾತಿನ ಗಾಂಧಿನಗರ ಸಮೀಪದ ಮೋತಿ ಮಸಂಗ್‌ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಸೋಮವಾರ ವರದಿಯಾಗಿದೆ. ವಿಷ್ಣು ರಾಥೋಡ್‌ ಹಾಗೂ ವಿಮಲಾ 10 ವರ್ಷದ ಹಿಂದೆ ವಿವಾಹವಾಗಿದ್ದು, ಈ ದಂಪತಿಗೆ ಐವರು ಹೆಣ್ಣು ಮಕ್ಕಳಿದ್ದಾರೆ. ಆರನೇಯದ್ದಾದರೂ ಗಂಡು ಮಗುವಾಗುವ ವಿಶ್ವಾಸ ವಿಷ್ಣು ರಾಥೋಡ್‌ಗೆ ಇತ್ತು. ಆದರೆ ವಿಮಲಾ ಆರನೇ ಬಾರಿಗೂ ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂಗತಿ ತಿಳಿದ ರಾಥೋಡ್‌ ಆಕೆಯ ಮನೆಗೆ ಧಾವಿಸಿ ಕ್ಷಣಮಾತ್ರವೂ ಹಿಂದು-ಮುಂದೆ ಯೋಚಿಸದೇ ಹಾಸಿಗೆ ಮೇಲೆ ಮಲಗಿದ್ದ ಮಗುವಿನ ಪಕ್ಕೆಲುಬಿಗೆ ಚಾಕುವಿನಿಂದ ಇರಿದು ಪರಾರಿಯಾಗಿಬಿಟ್ಟ. ಮಗುವಿನ ಅಳು ಕೇಳಿ ಎದ್ದ ತಾಯಿಯ ಕೂಗಾಟಕ್ಕೆ ಸ್ಪಂದಿಸಿದ ನೆರೆಹೊರೆಯವರು ಕೂಡಲೇ ಮಗುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ರಾತ್ರಿ 8.15ರ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿತು. ವಿಷ್ಣು ರಾಥೋಡ್‌ನನ್ನು ಸ್ಥಳೀಯರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ