ಆ್ಯಪ್ನಗರ

ರಾಮ ಮಂದಿರ ನಿರ್ಮಾಣಕ್ಕೆ ಜಾಗದ ಜತೆಗೆ ಚಿನ್ನದ ಇಟ್ಟಿಗೆ ನೀಡುತ್ತೇನೆ: ಮೊಘಲ್‌ ವಂಶಸ್ಥ

ಒಬ್ಬ ನೈಜ ಮುಸ್ಲಿಮನಾಗಿ ಹಿಂದುಗಳ ಭಾವನೆಗಳನ್ನು ಗೌರವಿಸಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡುತ್ತೇನೆ ಎಂದು ಮೊಘಲ್‌ ವಂಶಸ್ಥ ಹಬೀಬುದ್ದೀನ್‌ ಟ್ಯೂಸಿ ಹೇಳಿದ್ದಾರೆ.

Vijaya Karnataka 19 Aug 2019, 8:11 am
ಹೈದರಾಬಾದ್‌: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಚಿನ್ನದ ಇಟ್ಟಿಗೆ ನೀಡುವುದಾಗಿ ಮೊಘಲ್‌ ಸಾಮ್ರಾಜ್ಯದ ಕೊನೆಯ ದೊರೆಯ ಆರನೇ ಪೀಳಿಗೆಯ ವಂಶಸ್ಥರೊಬ್ಬರು ಹೇಳಿದ್ದಾರೆ.
Vijaya Karnataka Web Habibuddin Tusi


ಅಯೋಧ್ಯೆಯಲ್ಲಿ ರಾಮ ಮಂದಿರವಿದ್ದ ಜಾಗದಲ್ಲಿ ಮಸೀದಿ ನಿರ್ಮಿಸಿದ್ದು ಮೊಘಲರ ಮೊದಲ ದೊರೆ ಬಾಬರ್‌. ಮೊಘಲ್‌ ಸಾಮ್ರಾಜ್ಯದ ಕೊನೆಯ ದೊರೆ ಬಹಾದೂರ್‌ ಷಾ ಜಾಫರ್‌. ಅವನ ಆರನೇ ಪೀಳಿಗೆಯ ವಂಶಸ್ಥರಾಗಿರುವ ಹಬೀಬುದ್ದೀನ್‌ ಟ್ಯೂಸಿ ಈಗ ಹೈದರಾಬಾದ್‌ನಲ್ಲಿ ವಾಸವಾಗಿದ್ದಾರೆ.

ರಾಮ ಜನ್ಮಭೂಮಿ ಭೂವಿವಾದವನ್ನು ಆಲಿಸುತ್ತಿರುವ ಸುಪ್ರೀಂಕೋರ್ಟ್‌ ಪೀಠದ ಮುಂದೆ ಅರ್ಜಿ ಸಲ್ಲಿಸಿರುವ ಟ್ಯೂಸಿ ಈ ಕೊಡುಗೆ ಪ್ರಕಟಿಸಿದ್ದಾರೆ. ಟ್ಯೂಸಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲೂ ಇದೇ ರೀತಿ ಪ್ರಕಟಿಸಿದ್ದರು. ಈ ಬಾರಿ ಸುಪ್ರೀಂಕೋರ್ಟ್‌ ಮುಂದೆಯೇ ಅರ್ಜಿ ಸಲ್ಲಿಸಿದ್ದಾರೆ. ಫೆಬ್ರವರಿ 8ರಂದು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಇನ್ನೂ ವಿಚಾರಣೆಗೆ ತೆಗೆದುಕೊಂಡಿಲ್ಲ.

ಪ್ರಾರ್ಥನೆ ಸಲ್ಲಿಸಿದ್ದಕ್ಕಾಗಿ ರಸ್ತೆಯೇ ನಮ್ಮದು ಎನ್ನಲಾಗಲ್ಲ!

ಜಾಗ ನನಗೆ ಕೊಡಿ, ನಾನು ರಾಮ ಮಂದಿರಕ್ಕೆ ಕೊಡ್ತೇನೆ
ವಿವಾದಿತ ಜಾಗಕ್ಕೆ ಸಂಬಂಧಿಸಿ ಯಾರಲ್ಲೂ ದಾಖಲೆಗಳಿಲ್ಲ. ಆದರೆ ತಾವು ಮೊಘಲ್‌ ವಂಶಸ್ಥನಾಗಿರುವುದರಿಂದ ಆ ಜಾಗದ ಮೇಲೆ ಹಕ್ಕಿದೆ. ಹೀಗಾಗಿ ಹೆಚ್ಚಿನ ಗೊಂದಲಕ್ಕೆ ಅವಕಾಶವಿಲ್ಲದಂತೆ ವಿವಾದಿತ ಜಾಗವನ್ನು ನಮ್ಮ ಹೆಸರಿಗೆ ಹಸ್ತಾಂತರಿಸಬೇಕು ಎನ್ನುವುದು ಟ್ಯೂಸಿ ವಾದ. ಹಾಗೆ ಸುಪ್ರೀಂಕೋರ್ಟ್‌ ತಮ್ಮ ಹೆಸರಿಗೆ ಜಾಗ ನೀಡಿದರೆ ಮಂದಿರ ಕಟ್ಟಲು ಜಾಗ ನೀಡುವುದಾಗಿ ಟ್ಯೂಸಿ ಹೇಳುತ್ತಾರೆ. ಬಾಬರಿ ಮಸೀದಿ ನಿರ್ಮಾಣವಾಗಿದ್ದು ಸೇನೆಯ ನಮಾಜ್‌ಗಾಗಿ ಮಾತ್ರ. ಅಲ್ಲಿ ಮೊದಲು ಏನಿತ್ತು ಎನ್ನುವ ವಿಚಾರಕ್ಕೆ ನಾನು ಹೋಗುವುದಿಲ್ಲ. ಒಬ್ಬ ನೈಜ ಮುಸ್ಲಿಮನಾಗಿ ಅವರ ಭಾವನೆಗಳನ್ನು ಗೌರವಿಸಿ ಜಾಗ ಬಿಟ್ಟುಕೊಡುತ್ತೇನೆ ಎನ್ನುತ್ತಾರೆ ಟ್ಯೂಸಿ.

ತಾಜ್‌ ಬಾಗಿಲು ತೆರೆಯೋ ಟ್ಯೂಸಿ
ಮೊಘಲ್‌ ವಂಶಸ್ಥನಾಗಿ ಇನ್ನೂ ಕೆಲವು ಅಧಿಕಾರಗಳನ್ನು ಟ್ಯೂಸಿ ಉಳಿಸಿಕೊಂಡಿದ್ದಾರೆ. ಪ್ರತಿ ವರ್ಷ ನಡೆಯುವ ಶಹಜಹಾನ್‌ನ ಉರೂಸ್‌ ಸಮಾರಂಭಕ್ಕೆ ವಿಶ್ವ ವಿಖ್ಯಾತ ತಾಜ್‌ಮಹಲ್‌ನ ಒಳಗಿನ ಸೆಲ್ಲರ್‌ ಬಾಗಿಲನ್ನು ತೆರೆಯುವುದು ಟ್ಯೂಸಿ ಅವರೆ.

ಬಾಬ್ರಿ ಮಸೀದಿ ಇತ್ತೆಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ!

ಜಾಫರ್‌ಗೆ ಹೇಗೆ ಸಂಬಂಧ?ಮೊಘಲರ ಕೊನೆಯ ದೊರೆ ಬಹಾದೂರ್‌ ಷಾ ಜಾಫರ್‌ಗೆ 49 ಮಕ್ಕಳು. ಅವರಲ್ಲಿ ಒಬ್ಬರು ಮಿರ್ಜಾ ಕ್ವಾಯಿಷ್‌. ಕಠ್ಮಂಡುವಿಗೆ ಹೋಗಿ ತಪ್ಪಿಸಿಕೊಂಡಿದ್ದ ಮಿರ್ಜಾ ಕ್ವಾಯಿಷ್‌ ಮಗ ಮಿರ್ಜಾ ಅಬ್ದುಲ್ಲಾ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು. ಅವರ ಪುತ್ರ ಮಿರ್ಜಾ ಪ್ಯಾರೆ. ಇವರ ಮೂರು ಮಕ್ಕಳಲ್ಲಿ ಒಬ್ಬರಾದ ರಾಣಿ ಲೈಲಾ ಉಮಾಹನಿ ಒಬ್ಬರು. ಉಮಾಹನಿಯನ್ನು ಮದುವೆಯಾಗಿದ್ದು ಹೈದರಾಬಾದ್‌ನ ರಾಜಕುಮಾರ ಮೊಯಿನುದ್ದೀನ್‌ ಟ್ಯೂಸಿ. ಇವರಿಗೆ ಹುಟ್ಟಿದ ಮಗನೇ ಪ್ರಿನ್ಸ್‌ ಯಾಕುಬ್‌ ಅರಿಫುದ್ದೀನ್‌ ಟ್ಯೂಸಿ. ಅರಿಫುದ್ದೀನ್‌ ಟ್ಯೂಸಿಯ ಮಗನೇ ಯಾಕೂಬ್‌ ಹಬೀಬುದ್ದೀನ್‌ ಟ್ಯೂಸಿ. ಇವರೀಗ 50 ವರ್ಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ